ರಾಜ್ಯ ಮಟ್ಟದ ಭೋವಿ ಬೃಹತ್ ಸಮಾವೇಶವನ್ನು ಜುಲೈ 18ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಂ.ಗ್ರಾಮಾಂತರ ಜಿಲ್ಲೆಯ ಭೋವಿ ಸಮಾಜ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.
ನಗರದ ಬೆಂ.ಗ್ರಾ. ಜಿಲ್ಲಾ ಭೋವಿ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿತನ್ನುದ್ದೇಶಿಸಿ ಅವರು ಮಾತನಾಡಿದರು, ಜುಲೈ 18 ರಂದು ಚಿತ್ರದುರ್ಗದ ಗುರುಪೀಠದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಸಚಿವರಾದ ಶಿವರಾಜ ತಂಗಡಗಿ, ಹಾಲಿ ಶಾಸಕರು, ಬೋವಿ ಸಮಾಜದ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಸಾಧಕರು ಮತ್ತು ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ,
ಬೆಂ.ಗ್ರಾಮಾಂತರ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೂಪುರೇಷಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈ ಬಾರಿಯ ಸಮಾವೇಶದಲ್ಲಿ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಾಂಗದ ವಧು-ವರರ ವೇದಿಕೆ ಸಿದ್ಧಪಡಿಸಲಾಗಿದೆ ಎಂದರು.
ಈ ಸಮಾವೇಶಕ್ಕೆ ಜಿಲ್ಲೆಯ ಭೋವಿ ಸಮಾಜದ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಈ ವೇಳೆ ಹೊಸಕೋಟೆ ಭೋವಿ ಸಂಘದ ಅಧ್ಯಕ್ಷ ವೆಂಕಟೇಶ್, ದೇವನಹಳ್ಳಿ ಅಧ್ಯಕ್ಷ ಕೆ.ಸಿ.ತಮ್ಮಯ್ಯ, ರಾಮಣ್ಣ, ಶ್ರೀನಿವಾಸ್, ಸೀನಪ್ಪ, ಉದಯ್ ಕುಮಾರ್, ಸುಗ್ರೀವಪ್ಪ ಸೇರಿದಂತೆ ಇತರರು ಇದ್ದರು.