Categories: ಲೇಖನ

ಜೀವ ನುಂಗಿದ ಗಾಳಿಪಟ ಹಾರಿಸುವ ಮಾಂಜಾ ದಾರ…….

ನನ್ನ ಹಳೆಯ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡೇ ಮಗಳನ್ನು ಕರೆತರಲು ಹೋಗುತ್ತಿದ್ದೆ. ಇನ್ನೇನು ಸ್ವಲ್ಪವೇ ದೂರದಲ್ಲಿತ್ತು ನಾನು ತಲುಪಬೇಕಾಗಿದ್ದ ಸ್ಥಳ.

ಇದ್ದಕ್ಕಿದ್ದಂತೆ ಕತ್ತಿನ ಬಳಿ ಏನೋ ಚುಚ್ಚಿದಂತಾಯಿತು. ನಿಧಾನವಾಗಿ ಗಾಡಿ ನಿಲ್ಲಿಸಬೇಕೆಂದು ಬ್ರೇಕ್ ಹಾಕಿದೆ. ತಕ್ಷಣ ರಕ್ತ ರಸ್ತೆಗೆ ಚಿಮ್ಮಿತು. ಬಟ್ಟೆಯ ಮೇಲೆಲ್ಲಾ ರಕ್ತ ಸುರಿಯುತ್ತಿತ್ತು. ಅದನ್ನು ನೋಡಿ ಭಯ ಮತ್ತು ಗಾಬರಿ ಒಟ್ಟಿಗೆ ಆಯಿತು. ಕತ್ತು ಸರಿಯಾಗಿ ನಿಲ್ಲುತ್ತಿಲ್ಲ, ಒಂದು ಕಡೆ ವಾಲುತ್ತಿದೆ. ಅಯ್ಯೋ ಇದೇನಾಯಿತು ಎಂದು ಜೋರಾಗಿ ಕೂಗಿದೆ. ಯಾರು ನನ್ನತ್ತ ನೋಡುತ್ತಿಲ್ಲ. ಏಕೆಂದರೆ ನನ್ನ ಧ್ವನಿ ಹೊರಗೆ ಹೊರಡುತ್ತಲೇ ಇಲ್ಲ. ಗಂಟಲು ಬಿದ್ದು ಹೋಗಿದೆ. ಶಬ್ದ ಅವರಿಗೆ ಕೇಳಿಸುತ್ತಲೇ ಇಲ್ಲ. ತಲೆ ಸುತ್ತಿ ಬಂದಂತಾಯಿತು. ಕಣ್ಣು ಮಂಜಾಯಿತು. ಉಸಿರು ನಿಂತಂತಾಯಿತು‌. ಕೆಳಕ್ಕೆ ಬೀಳತೊಡಗಿದೆ.

ಈಗ ಜನ ನನ್ನತ್ತ ಬರತೊಡಗಿದರು. ಮನೆಗೆ ವಿಷಯ ತಿಳಿಸಲು ಜೇಬಿನಲ್ಲಿದ್ದ ಮೊಬೈಲ್ ಗೆ ಕೈ ಹಾಕಿದೆ, ಸಿಗುತ್ತಿಲ್ಲ. ದಿಢೀರನೆ ರಸ್ತೆಯ ಕಲ್ಲಿನ ಮೇಲೆ ಬಿದ್ದೆ. ಮುಂದೇನಾಯಿತೋ ನನಗೆ ಗೊತ್ತಿಲ್ಲ. ಬಹುಶಃ ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬಹುದು. ನನ್ನ ಪ್ರಾಣಪಕ್ಷಿ ಹಾರಿ
ಹೋಗಿರಬಹುದು ಎಂದು ಭಾವಿಸುತ್ತೇನೆ. ಮಾಂಝಾದಾರ ನನ್ನ ಜೀವ ನುಂಗಿತು……

ನಾನು ಶ್ರೀಧರ ನಾಯಕ. ಒಂದು ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ 18000 ರೂಪಾಯಿಯ ಸಂಬಳ. ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸ. ಹೆಂಡತಿ ಮತ್ತು ಪಿಯುಸಿ ಓದುತ್ತಿರುವ ನನ್ನ ಮುದ್ದಿನ ಮಗಳೊಂದಿಗೆ ಆರಾಮಾಗಿ ಇದ್ದೆ. ಬದುಕಿನ ಏಳುಬೀಳುಗಳ ನಡುವೆ ಹೇಗೋ ಜೀವನ ಸಾಗುತ್ತಿತ್ತು. ನನ್ನ ಪತ್ನಿಯೂ ಪರಿಸ್ಥಿತಿ ಅರಿತು ಹೊಂದಾಣಿಕೆ ಮಾಡಿಕೊಂಡು ತುಂಬಾ ಒಳ್ಳೆಯ ಜೀವನ ಸಂಗಾತಿಯಾಗಿದ್ದಳು.

ನನ್ನ ಮಗಳು ಈ ಬಾರಿ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಚಿಕ್ಕ ಮಗುವಾಗಿದ್ದಾಗಿನಿಂದಲೂ ಅತ್ಯಂತ ಬುದ್ಧಿವಂತೆ. ತಾನು ಓದಿದ ಎಲ್ಲಾ ಶಾಲಾ ತರಗತಿಗಳಲ್ಲೂ ಈಕೆಗೇ ಮೊದಲ ಸ್ಥಾನ. ಅವಳಿಗೆ ಡಾಕ್ಟರ್ ಆಗಬೇಕೆಂಬ ಬಹುದೊಡ್ಡ ಕನಸಿದೆ. ನಾವಂತೂ ಕಡುಬಡವರು. ಸರ್ಕಾರಿ ಶಾಲೆಯಲ್ಲಿ ಓದಿ ಮುಂದೆ ಸರ್ಕಾರಿ ಕೋಟಾದಲ್ಲಿಯೇ ಮೆಡಿಕಲ್ ಸೀಟು ಸಿಕ್ಕಿದರೆ ಹೇಗೋ ಬ್ಯಾಂಕಿನ ಹಣಕಾಸು ನೆರವು ಪಡೆದು ಡಾಕ್ಟರ್ ಓದಬೇಕೆಂದು ಆಸೆಪಟ್ಟಿದ್ದಾಳೆ.

ನೀಟ್ ಪರೀಕ್ಷೆಯ ತರಬೇತಿಗಾಗಿ ನಮ್ಮ ಮನೆಯಿಂದ ಐದು ಕಿಲೋಮೀಟರ್ ದೂರದ ತಾಲ್ಲೂಕು ಮುಖ್ಯ ಕೇಂದ್ರದಲ್ಲಿ ಉಚಿತ ತರಬೇತಿ ಪಡೆಯುತ್ತಿದ್ದಾಳೆ.

ಇವತ್ತು ಭಾನುವಾರ, ಆ ಉಚಿತ ನೀಟ್ ತರಬೇತಿ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಇತ್ತು. ಆಕೆ ಬೆಳಗ್ಗೆ ನಡೆದೇ ಹೋಗಿದ್ದಳು. ಈಗ ನಾನು ಆಕೆಯನ್ನು ಕರೆದುಕೊಂಡು ಬರಲು ನನ್ನ ಹಳೆಯ ಸ್ಕೂಟರಿನಲ್ಲಿ ಹೋಗುತ್ತಿದ್ದೆ. ಇವತ್ತು ಇನ್ನೊಂದು ವಿಶೇಷವಿದೆ. ಇಂದು ನನ್ನ ಮುದ್ದಿನ ಮಗಳ ಹುಟ್ಟುಹಬ್ಬ.

ಆಕೆ ಸುಮಾರು ಎರಡು ವರ್ಷದಿಂದ ನನ್ನನ್ನು ಒಂದು ಒಳ್ಳೆಯ ಮೊಬೈಲ್ಗಾಗಿ ಕಾಡಿ ಬೇಡುತ್ತಿದ್ದಳು. ಬಡವನಾದ ನನಗೆ ಉತ್ತಮ ಗುಣಮಟ್ಟದ ಮೊಬೈಲ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಆಕೆ ಮೆಡಿಕಲ್ ಪ್ರವೇಶ ಪರೀಕ್ಷೆ ಓದಲು ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಕೊಡಿಸಬೇಕೆಂದು ಆಗೋ ಹೀಗೋ ಕೂಡಿಟ್ಟ ಹಣವನ್ನು, ಜೊತೆಗೆ ನನ್ನ ಪತ್ನಿಯ ಉಳಿತಾಯದ ಹಣವನ್ನೂ ಎಲ್ಲ ಸೇರಿಸಿ ಸುಮಾರು 20000 ರೂಪಾಯಿ ಬೆಲೆಯ ಮೊಬೈಲ್ ಕೊಡಿಸಲು ನಿರ್ಧರಿಸಿದೆ.

ಅವಳಿಗೆ ಒಂದು ರೀತಿ ಸರ್ಪ್ರೈಸ್ ಇರಲೆಂದು ಮೊದಲೇ ಆಕೆಗೆ ಹೇಳದೆ ಆಕೆಯನ್ನು ಟ್ಯೂಷನ್ ನಿಂದ ನೇರವಾಗಿ ಮೊಬೈಲ್ ಅಂಗಡಿಗೆ ಕರೆದುಕೊಂಡು ಹೋಗಿ ಕೊಡಿಸುವ ಉತ್ಸಾಹದಲ್ಲಿ ಆ ಕಡೆ ಹೋಗುತ್ತಿದ್ದೆ. ಆದರೆ ದುರಾದೃಷ್ಟ ನನ್ನದೋ, ಮಗಳದೋ, ನನ್ನ ಪತ್ನಿಯದೋ ಅರ್ಥವಾಗುತ್ತಿಲ್ಲ. ನಾನಂತೂ ಈ ಭೂಮಿಯಿಂದ ಹೊರಟೆ. ನನ್ನ ಬರುವಿಕೆಗೆ ಅಲ್ಲಿ ಮಗಳು ಕಾಯುತ್ತಿದ್ದರೆ, ಮನೆಯಲ್ಲಿ ಹೆಂಡತಿ ಕಾಯುತ್ತಿದ್ದಾಳೆ, ನಾನಂತೂ ಬರುವುದಿಲ್ಲ. ನೀವೇ ವಿಷಯ ಮುಟ್ಟಿಸಬೇಕು. ಮುಂದೆ ಏನಾಗುತ್ತೋ ನಿಮಗೆ ಅರ್ಥವಾಗಬಹುದು.
************************
ಗಾಳಿಪಟ ಹಾರಿಸುವುದು ಒಂದು ಗ್ರಾಮೀಣ ಸಾಂಸ್ಕೃತಿಕ ಆಟ. ಈ ಆಟ ಈ ವರ್ಷ ನಮ್ಮ ದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಬಲಿ ಪಡೆದರೆ, ಮತ್ತೆ ಕೆಲವರು ತೀವ್ರ ಸ್ವರೂಪದ ಗಾಯಾಳುಗಳಾಗಿದ್ದಾರೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಈ ಸಾವುಗಳು ಕಡಿಮೆಯೇ ಇರಬಹುದು. ಆದರೆ ಈ ಸಾವುಗಳು ಮಾತ್ರ ತೀರಾ ಅನಾವಶ್ಯಕ, ಬೇಜವಾಬ್ದಾರಿ ನಡೆಯಿಂದ ಆಗುತ್ತಿದೆ ಮತ್ತು ಇದನ್ನು ನಿರ್ಲಕ್ಷಿಸಿದರೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು.

ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಗಾಳಿಪಟ ಹಾರಿಸುವಾಗ ಈ ಆಟಕ್ಕೆ ನೀತಿ ನಿಯಮಗಳನ್ನು ರೂಪಿಸಲೇಬೇಕಿದೆ. ಮುಖ್ಯವಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಮಾತ್ರ ಗಾಳಿಪಟ ಹಾರಿಸುವಂತಿರಬೇಕು. ಹೆಚ್ಚಾಗಿ ಬಯಲು ಪ್ರದೇಶದಲ್ಲಿಯೇ ಗಾಳಿಪಟ ಹಾರಿಸಬೇಕು. ಜನವಸತಿ ಪ್ರದೇಶದಲ್ಲಿ, ರಸ್ತೆ ಬದಿಯಲ್ಲಿ ಅದನ್ನು ಸಂಪೂರ್ಣ ನಿಷೇಧಿಸಬೇಕು. ಮನೆಯ ಮಹಡಿಯ ಮೇಲೆಯೂ ಹಾರಿಸಬಾರದು.

ಅದಕ್ಕೆ ಉಪಯೋಗಿಸುವ ದಾರವನ್ನು, ಅದರ ಗುಣಮಟ್ಟವನ್ನು ಅಪಾಯಕಾರಿ ಇಲ್ಲದಂತೆ ನೋಡಿಕೊಳ್ಳಬೇಕು. ವರ್ಷದ ಎಲ್ಲಾ ಕಾಲವೂ ಹಾರಿಸಲು ನಿಷೇಧ ಸೇರಿ ಕೆಲುವು ಸಂದರ್ಭದಲ್ಲಿ ಮಾತ್ರ ಅನುಮತಿ ನೀಡಬೇಕು. ವಿದ್ಯುತ್ ಕಂಬಗಳ ಬಳಿ, ಜನನಿಬಿಡ ಪ್ರದೇಶದಲ್ಲಿ ಸಂಪೂರ್ಣ ನಿಷೇಧ ಇರಬೇಕು. ಗಾಳಿಪಟಗಳ ಗುಣಮಟ್ಟವನ್ನೂ
ಪರೀಕ್ಷಿಸಬೇಕು. ಚಿಕ್ಕ ಮಕ್ಕಳಿಗೆ ಅನುಮತಿ ನೀಡಲೇಬಾರದು.

ಗಾಳಿಪಟ ಸ್ಪರ್ಧೆ ಅಥವಾ ಗುಂಪು ಹಾರಿಸುವಿಕೆಯಲ್ಲಿ ಪೊಲೀಸರ ಅನುಮತಿ ಪಡೆಯಲೇಬೇಕು. ಮಧ್ಯದಲ್ಲಿಯೇ ತುಂಡಾದ ಅಥವಾ ಹರಿದ ಗಾಳಿಪಟವನ್ನು ಸಂಗ್ರಹಿಸಿ ಅದನ್ನು ನಾಶಪಡಿಸಬೇಕು. ರಸ್ತೆ ಬದಿ ಯಾವುದೇ ಕಾರಣಕ್ಕೂ ಗಾಳಿಪಟ ಹಾರಿಸುವಂತಿಲ್ಲ. ಇದಲ್ಲದೆ ಇನ್ನೂ ಪರಿಣಿತರೊಂದಿಗೆ ಚರ್ಚಿಸಿ ಗಾಳಿಪಟದಿಂದ ಆಗುತ್ತಿರುವ ಅಥವಾ ಮಂಜಾದಾರದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ತುಂಬಾ ಅನಾಹುತವಾಗಬಹುದು. ದಯವಿಟ್ಟು ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಬಲಗೊಳ್ಳುವಂತೆ ಮತ್ತು ಸರ್ಕಾರದ ಗಮನ ಸೆಳೆಯುವಂತೆ ಜಾಗೃತಿ ಮೂಡಿಸೋಣ.

ಮೃತ ಶ್ರೀ ಶ್ರೀಧರ ನಾಯಕ ಅವರಿಗೆ ಹೃದಯ ಪೂರ್ವಕ ಶ್ರದ್ಧಾಂಜಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ: ನೀರಿನ ಸಮಸ್ಯೆ ನೀಗಿಸುವಂತೆ ನಗರಸಭೆ ಸದಸ್ಯರ ಒತ್ತಾಯ

ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ ಆರಂಭವಾಗಿದ್ದು, ನಗರಸಭೆಯಿಂದ ವಾರಕ್ಕೊಮ್ಮೆ ಕೇವಲ ಅರ್ಧ ಗಂಟೆ ನೀರು ಬಿಡುತ್ತಿರುವುದು ಸರಿಯಲ್ಲ.…

6 hours ago

ಗೃಹ ಅನಿಲ ಸೀಮಿತ ಬಳಕೆಗೆ ಡಿಸಿ ಸಲಹೆ: ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕೆ ಎನ್ ಅನುರಾಧಾ

ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದಿಟ್ಟುಕೊಂಡು ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿದರೆ ಅಂತಹ ಗ್ಯಾಸ್…

6 hours ago

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ....…

18 hours ago

9 ತಿಂಗಳಲ್ಲಿ ಬಮೂಲ್ ಒಕ್ಕೂಟಕ್ಕೆ 60 ಕೋಟಿ ಲಾಭ: ಸಂಪೂರ್ಣ ರೈತರ ಖಾತೆಗೆ ಲಾಭಾಂಶ ಹಣ

ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ…

1 day ago