ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.
ಹೊಸಕೋಟೆ ಟೌನ್ ನಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೇಂದ್ರಕ್ಕೆ ಎಸ್ಪಿ ಸಿ.ಕೆ ಬಾಬಾ ಅವರೊಂದಿಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದರು.
ನಂತರ ಮಾತನಾಡಿದ ಅವರು ಆಗಸ್ಟ್ ಮಾಹೆಯಲ್ಲಿ ನಮಗೆ 5559 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, 10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಅದರಲ್ಲಿ 1716.68 ಮೆ.ಟನ್ ಯೂರಿಯಾ, 1834.7 ಮೆ.ಟನ್ ಡಿಎಪಿ, 756.5 ಮೆ.ಟನ್ ಎಂಒಪಿ, 5358.4 ಮೆ.ಟನ್ ಎನ್ಪಿಕೆಎಸ್(ಕಾಂಪ್ಲೆಕ್ಸ್), 498.9 ಮೆ.ಟನ್ ಎಸ್.ಎಸ್.ಪಿ ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು.
ರೈತರು ಆತಂಕ ಪಡುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳಿಗೆ ಅನುಗುಣವಾಗಿ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಲಭ್ಯವಿದ್ದು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು. ಹಾಗೇಯೇ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಯಾರಾದರೂ ಮಾರಟ ಮಾಡುವುದು ಕಂಡುಬಂದಲ್ಲಿ ನಮ್ಮ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಪ್ಪ, ಕೃಷಿ ಅಧಿಕಾರಿ ರಾಮಾಂಜಿನಯ್ಯ, ಇತರೆ ಅಧಿಕಾರಿಗಳು ಇದ್ದರು.