ಮೂರನೇ ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಜಿಲ್ಲೆಯ ಅಭಿವೃದ್ಧಿ, ಶಾಂತಿ ಕಾಪಾಡುವ ಜವಾಬ್ಧಾರಿ ಉಸ್ತುವಾರಿಗಳಿಗಿರುತ್ತದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇರುತ್ತದೆ. ಮಳೆ, ಪ್ರವಾಹದಿಂದ ಬೆಳೆ ಹಾನಿಯಾಗುತ್ತದೆ. ಕೆಲ ಜಿಲ್ಲೆಗಳಲ್ಲಿ ಮಳೆಯಾಗದೆ ನೀರಿನ ಸಮಸ್ಯೆ ಇರುತ್ತದೆ. ಜಿಲ್ಲೆಯ ಸಮಸ್ಯೆಗಳಿಗೆ ತಕ್ಕಂತೆ ಸಚಿವರುಗಳು ಕ್ರಮಕೈಗೊಳ್ಳಬೇಕು ಎಂದು ತುಮಕೂರಿನಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಮ್ಮ ಜಿಲ್ಲೆಯ ಮಧುಗಿರಿ ಪಾವಗಡ ಕೊರಟಗೆರೆ, ಶಿರಾದಲ್ಲಿ ಮಳೆ ಕಡಿಮೆ ಇದ್ದು ಬರ ಹೆಚ್ಚಾಗಿರುತ್ತದೆ. ಕುಣಿಗಲ್, ಗುಬ್ಬಿ ,ತಿಪಟೂರಿನಲ್ಲಿ ಒಳ್ಳೆ ಮಳೆಯಾಗುತ್ತದೆ. ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜವನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕೆಂದು ಸಿಎಂ ಕ್ರಮ ಕೈಗೊಂಡಿದ್ದಾರೆ ಜಿಲ್ಲೆಯಲ್ಲಿ ಕೊಬ್ಬರಿ ಬೆಲೆ ಇಳಿಕೆಯಿಂದ ರೈತರಿಗೆ ಸಮಸ್ಯೆಯಾಗಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಮುಂದಿನ ದಿನಗಳಲ್ಲಿ ನೋಡೋಣ. ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರದಲ್ಲಿ ನಿಯಮಗಳಿವೆ ಅವುಗಳ ಮೂಲಕ ಮಾಡಲಾಗುತ್ತದೆ ಎಂದರು.
ಸರ್ಕಾರದಲ್ಲಿ ಬ್ಲೂಬುಕ್ ಇದೆ, ಅದರಲ್ಲಿ ಏನಿರುತ್ತೊ ಅದೇ ಆಗಬೇಕು. ಸಚಿವರಾಗಿದ್ದೇನೆ ಎಂದು ನಾವು ವೈಯಕ್ತಿಕವಾಗಿ ಪ್ರತ್ಯೇಕ ಕಾನೂನು ಮಾಡಲು ಬರಲ್ಲ. ಗೃಹ ಇಲಾಖೆಯಲ್ಲಿ ನಾನೊಂದು ಕಾನೂನು ಮಾಡಲು ಬರಲ್ಲ. ಇನ್ನೊಬ್ಬರು ಇನ್ನೊಂದು ಮಾಡಲು ಬರಲ್ಲ. ಕುಂಕುಮ, ವಿಭೂತಿ, ಇಟ್ಟುಕೊಳ್ಳಬಾರದು ಎಂದು ಹೇಳಿದ್ದೇನೆಂದು ವೈರಲ್ ಮಾಡಿದ್ದಾರೆ. ಅದನ್ನು ನಾನು ಹೇಳಿಯೇ ಇಲ್ಲ. ನನಗೆ ಪ್ರಜ್ಞೆಯಿದೆ, ನಾನು ಮೂರು ಬಾರಿ ಗೃಹ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಮಾನ್ಯೂಯಲ್ ಇದೆ. ಅದನ್ನು ಬಿಟ್ಟು ಬೇರೆ ಮಾಡಲು ಬರೊದಿಲ್ಲ ಎಂದು ಹೇಳಿದರು.
ಹಿರಿಯ ಅಧಿಕಾರಿಗಳು ಮಾನ್ಯೂಯಲ್ ಅನುಷ್ಟಾನ ಮಾಡುತ್ತಾರೆ. ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು ಮಾಡಲು ಹೋಗುವುದು, ಇನ್ನೊಬ್ಬರು ಇನ್ನೊಂದು ಕಾನೂನು ಮಾಡಲು ಅವಕಾಶವಿಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕುತ್ತಿದ್ದೇವೆ. ಇಂತಹವನ್ನೆಲ್ಲಾ ಸುಮ್ಮನೆ ಬಿಡೊಕ್ಕೆ ಆಗಲ್ಲ. ಸುಳ್ಳು ಸುದ್ದಿಗಳನ್ನು ಮಾಡಬಾರದು, ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ, ಪ್ರಚೋದನೆಯಾಗುತ್ತದೆ. ರಾಜ್ಯದಲ್ಲಿ ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ- ಅಪೇಕ್ಷೆ ಎಂದರು.
ನಮ್ಮ ಪ್ರಣಾಳಿಕೆ ಶೀರ್ಷಿಕೆಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತಿವಿ ಅಂತಾ ಹೇಳಿದ್ದೇವೆ. ಎಲ್ಲಾರೂ ಶಾಂತಿಯಿಂದ ಬಾಳೋಣ ಅನ್ನೊದು ನಮ್ಮ ಅಪೇಕ್ಷೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗವಣೆ ದಂಧೆ ಶುರುವಾಗಿದೆ, ನಾವು ಪೇ ಸಿ.ಎಂ ಪೋಸ್ಟರ್ ಅಂಟಿಸುತ್ತೆವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೇನಾದರೂ ಅಂತಹದ್ದು ಮಾಹಿತಿ ಇದ್ರೆ ಅಂಟಿಸಲಿ. ಪಾಪಾ..ಅವರಿಗೆ ಯಾಕೆ ಬ್ಯಾಡಾ ಅನ್ನಲಿ ಎಂದು ವ್ಯಂಗ್ಯವಾಡಿದರು.