ಕೋಲಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಆಪ್ತರಾಗಿರುವ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರನ್ನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬುಧವಾರ ನೇಮಕ ಮಾಡಲಾಗಿದೆ.
ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅದರಲ್ಲಿ ಓಂಶಕ್ತಿ ಚಲಪತಿ ಅವರನ್ನು ಕೋಲಾರ ಜಿಲ್ಲಾ ಘಟಕಕ್ಕೆ ನೇಮಕ ಮಾಡಲಾಗಿದೆ ಎಂದು ಪಕ್ಷದ ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ ಹಾಗೂ ಜಿಲ್ಲಾ ಚುನಾವಣಾ ಸಹ ಉಸ್ತುವಾರಿ ಬಿ.ಪಿ ವೆಂಕಟಮುನಿಯಪ್ಪ ಘೋಷಣೆ ಮಾಡಿದರು.
ಕೋಲಾರ ನಗರದವರಾದ ಓಂಶಕ್ತಿ ಚಲಪತಿ ಮೂಲತಃ ಬಿಜೆಪಿ ಕಾರ್ಯಕರ್ತರಾಗಿ ಹಿಂದುತ್ವ ವಿಷಯದ ಹೋರಾಟಗಳಲ್ಲಿ ಮುಂಚೂಣಿಯ ನಾಯಕರಾಗಿದ್ದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿದ್ದರು ಇತ್ತೀಚೆಗೆ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು 2018 ರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು ಅಲ್ಲದೇ ಕುಡಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ನೇಮಕವಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲೆಯ ಮಾಜಿ ಸಂಸದರು ಮಾಜಿ ಶಾಸಕರು ಪಕ್ಷದ ಹಿರಿಯ ಕಿರಿಯ ಮುಖಂಡ ಮತ್ತು ಕಾರ್ಯಕರ್ತರ ಆಶೀರ್ವಾದದಿಂದ ಜಿಲ್ಲಾ ಅಧ್ಯಕ್ಷನಾಗಿದ್ದು ಅವರ ಮಾರ್ಗದರ್ಶನದಲ್ಲಿ ಇದನ್ನು ಅಧಿಕಾರ ಎಂದು ಭಾವಿಸದೇ ಜವಾಬ್ದಾರಿ ರೀತಿಯಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವ ಕೆಲಸವನ್ನು ಮಾಡತ್ತೇನೆ ಮುಂದೆ ಕನಿಷ್ಟ ನಾಲ್ಕು ಶಾಸಕರು ಜಿಲ್ಲೆಯಿಂದ ಆಯ್ಕೆಯಾಗುವಂತೆ ಮಾಡಿ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಸರಿ ಪಡಿಸುವ ಕೆಲಸ ಮಾಡತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ ಸಂಪಂಗಿ, ಮಾಜಿ ಅಧ್ಯಕ್ಷ ವೇಣುಗೋಪಾಲ್, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಮಾಜಿ ಜಿಪಂ ಸದಸ್ಯ ಮಹೇಶ್, ವಿವಿಧ ಮೋರ್ಚಾ ಅಧ್ಯಕ್ಷರಾದ ಅರುಣಮ್ಮ, ಬಾಲಾಜಿ, ತಿಮ್ಮರಾಯಪ್ಪ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮಮತಮ್ಮ, ಶಿವಕುಮಾರ್, ತೇಜಸ್, ಮುಂತಾದವರು ಇದ್ದರು.