ಜನ ಔಷಧ ಸಪ್ತಾಹ: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧ- ಶಾಸಕ ಧೀರಜ್‌ ಧೀರಜ್ ಮುನಿರಾಜ್

ದೇಶದ ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳು, ಔಷಧ, ಶಸ್ತ್ರಚಿಕಿತ್ಸಾ ಉಪಕರಣಗಳು ಲಭ್ಯವಾಗಿಸಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿ ಯೋಜನೆಯನ್ನು (ಪಿಎಂಬಿಜೆಪಿ) ಜಾರಿಗೊಳಿಸಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ನಗರಸಭೆ ರಸ್ತೆಯಲ್ಲಿರುವ ಶ್ರೀ ರಾಮೇಗೌಡ ಸಹಕಾರ ಭವನದ ಭಾರತೀಯ ಜನ ಔಷಧಿ ಕೇಂದ್ರ ಬಳಿ ಬುಧವಾರ ಹಮ್ಮಿಕೊಂಡಿದ್ದ ಜನೌಷಧ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನೌಷಧಿ ಕೇಂದ್ರಗಳಿಂದ ಜನಸಾಮಾನ್ಯರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯವಾಗುತ್ತಿದೆ. ಜನೌಷಧಿಯ ದರ ಶೇ 10ರಿಂದ ಶೇ.90ರಷ್ಟು ಕಡಿಮೆಯಾಗಿದೆ. ನಮ್ಮ ನಗರದ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳ ಆವರಣಗಳಿಂದ ಜನೌಷಧ ಕೇಂದ್ರಗಳನ್ನ ತೆರವು ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದ ವೇಳೆ ಬಿಜೆಪಿ ಹೋರಾಟ ಮಾಡಿ ಉಳಿಸಿಕೊಂಡಿದೆ ಎಂದರು.

ಜನೌಷಧ ಕೇಂದ್ರದ ದಕ್ಷಿಣ ಕರ್ನಾಟಕದ ನೋಡಲ್ ಅಧಿಕಾರಿ ಅನುಪಮ್ ಪಾಠಾಕ್ ಮಾತನಾಡಿ, ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಕಂಪನಿಗಳ ಬ್ರಾಂಡ್‌ನಲ್ಲಿ ಔಷಧವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಜನೌಷಧ ಅಂಗಡಿಗಳಲ್ಲಿ ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಔಷಧ ಮಾರಾಟ ಮಾಡಲಾಗುತ್ತಿದೆ ಎಂದರು.

“ಜನೌಷಧಿ ಸಪ್ತಾಹದ” ಅಂಗವಾಗಿ ದೇಶಾದ್ಯಂತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಸೇರಿದಂತೆ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಒಂದು ವಾರಕಾಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಜನೌಷಧ ಕೇಂದ್ರದ ದಕ್ಷಿಣ ಕರ್ನಾಟಕದ ನೋಡಲ್ ಅಧಿಕಾರಿ ಅನುಪಮ್ ಪಾಠಾಕ್, ಜನೌಷಧ ಕೇಂದ್ರದ ವೈದ್ಯೆ ಡಾ.ಸಿಂದು, ಮುಖಂಡರಾದ ವಿಜಯ್ ಕುಮಾರ್, ಗೋಪಿನಾಥ, ವೆಂಕಟರಾಜು ಮತ್ತಿತ್ತರರು ಇದ್ದರು.

Leave a Reply

Your email address will not be published. Required fields are marked *

error: Content is protected !!