ಜನರು ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ: ಕಟ್ಟಾ ಸುಬ್ರಮಣ್ಯ ನಾಯ್ಡು

ಜನರು ರಾಜ್ಯದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ನ್ನು ಈ ಬಾರಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಗೆಲ್ಲಲು ಪ್ರಣಾಳಿಕೆ ಕೂಡ ಮಹತ್ತರ ಪಾತ್ರ ವಹಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿಂದು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಪ್ರತಿಯೊಬ್ಬ‌ ಮಹಿಳೆಯರಿಗೆ ಪ್ರತಿ ತಿಂಗಳು ಎರಡು‌ ಸಾವಿರ ರೂ. ಹತ್ತು ಕೆಜಿ ಅಕ್ಕಿ, ಉಚಿತ ಸಿಲಿಂಡರ್ ಸೇರಿದಂತೆ ಇತರೆ ಅಂಶಗಳಿಗೆ ಮನಸೋತು ಕಾಂಗ್ರೆಸ್ ಗೆ ಮತ ನೀಡಿದ್ದಾರೆ ಎಂದರು.

ಈ ಬಾರಿ ಕಾಂಗ್ರೆಸ್ ಬಹುಮತ ಪಡೆದಿದೆ, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅದರಲ್ಲಿ ಏನೂ ವಿಶೇಷತೆ ಇಲ್ಲ‌, ಯಾರೂ ಕೂಡ ದೀರ್ಘಕಾಲದ ಅಧಿಕಾರ, ಆಡಳಿತ ನಡೆಸುವುದಕ್ಕೆ ಆಗೋದಿಲ್ಲ, ಬದಲಾವಣೆ ಸಹಜ‌ ಕ್ರಿಯೆ ಎಂದು ಹೇಳಿದರು.

ಈ ಬಾರಿ ಬಿಜೆಪಿ ಸೋತಿದೆ ಎಂಬ ಕಾರಣಕ್ಕೆ ಬಿಜೆಪಿ ಮುಕ್ತ ಕರ್ನಾಟಕ ಎಂದು ಹೇಳೋದಕ್ಕೆ ಬರೋದಿಲ್ಲ, ಜನರ ತೀರ್ಪಿಗೆ ನಾವು ತಲೆ ಬಾಗಿಸಲೇಬೇಕು. ಐದು ವರ್ಷ ನಂತರ ಜನ ಬಿಜೆಪಿಯನ್ನ ಗೆಲ್ಲಿಸಬಹುದು ಆದ್ದರಿಂದ ಇಲ್ಲಿನ ಕಾಲಚಕ್ರದಲ್ಲಿ ಯಾರೂ ಶಾಶ್ವತ ಅಲ್ಲ ಎಂದರು.

ಈ ಬಾರಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳು ಹಿರಿಯರು ಕೂತು ವಿಶ್ಲೇಷಣೆ, ಮಾಹಿತಿ ಸಂಗ್ರಹ ಮಾಡಿ ಎಲ್ಲಿ ಯಾವ ವಿಷಯದಲ್ಲಿ ಮತ ಪಡೆಯುವಲ್ಲಿ ವಿಫಲವಾಗಿದ್ದೇವೆ, ಮತದಾರರು ಬಿಜೆಪಿಯನ್ನು ತಿರಸ್ಕರಿಸಲು ಕಾರಣಗಳೇನು ಎಂಬುದನ್ನು ಕಂಡುಹಿಡಿದು ಅದನ್ನು ಮುಂದಿನ ಬಾರಿಗೆ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದರು.

ನಾನೇನು ರಾಜಕೀಯದಲ್ಲಿ ನಿಷ್ಕ್ರಿಯವಾಗಿಲ್ಲ, ಕೆಲವೊಂದು ಸಂದರ್ಭಗಳು ಹಾಗೆ ಮಾಡಿದೆ. ನನಗೆ ವಯಸ್ಸಾಗಿದೆ, ಯುವಕರಿಗೆ ಅವಕಾಶ ಸಿಗಬೇಕು, ಪಕ್ಷದ ಸಿದ್ಧಾಂತಕ್ಕೆ ನಾವು ಕಟ್ಟುಬೀಳಬೇಕು ಎಂದರು.

Leave a Reply

Your email address will not be published. Required fields are marked *