ಎಲ್ಲಾ ಕಲೆಗಳ ಮೂಲ ಬೇರಿನಂತೆ ಇರುವ ಜನಪದ ಕಲೆಗಳನ್ನು ಅರಿತುಕೊಂಡರಷ್ಟೇ ನಮ್ಮ ಇತರೆ ಕಲಾ ಪ್ರಕಾರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ ಲಲಿತಾ ಅವರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದಯ ಜಾನಪದ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಡೆದ ಜಾನಪದ ಕಲಾ ಸಂಭ್ರಮ-2022 ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಾ ಪ್ರಕಾರಗಳಲ್ಲಿನ ಪಟದ ಕುಣಿತ, ಕೋಲಾಟ, ಕಂಸಾಳೆ ಸೇರಿದಂತೆ ಹಲವಾರು ನೃತ್ಯಗಳನ್ನು ನೋಡುತ್ತಿದ್ದಂತೆ ಯಾರೊಬ್ಬರು ಸುಮ್ಮನೆ ನಿಲ್ಲಲು ಸಾಧ್ಯವೇ ಇಲ್ಲ. ತಾವು ಅವರೊಂದಿಗೆ ಕುಣಿಯ ಬೇಕು ಎನ್ನುವಂತಹ ಉತ್ಸಾಹ ಮನಸ್ಸಿನಲ್ಲಿ ಮೂಡುತ್ತದೆ.ಇದು ನಮ್ಮ ಜಾನಪದ ಕಲೆಗೆ ಇರುವ ಶಕ್ತಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಯ್ಯ ಮಾತನಾಡಿ, ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಜನಪದ ಕಲಾ ಪ್ರಕಾರಗಳು ನೇಪಥ್ಯಕ್ಕೆ ಸರಿಯುತ್ತಿವೆ. ಯುವ ಸಮುದಾಯಕ್ಕೆ ಇವುಗಳನ್ನು ಪರಿಚಯಿಸುವ ಕೆಲಸ ಶ್ಲಾಘನೀಯ ಎಂದರು.
ಶಾಸ್ತ್ರೀಯ ಕಲಾ ಪ್ರಕಾರಗಳ ಶಿಸ್ತು ಬದ್ಧ ಕಲಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಜಾನಪದ ಕಲಾ ಪ್ರಕಾರಗಳ ಕಲಿಗೂ ನೀಡಿದಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಉದಯ ಜಾನಪದ ಕಲಾ ಸಂಘದ ಕಾರ್ಯದರ್ಶಿ ಎಚ್.ಕೃಷ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಜಯರಾಮ್, ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಪ್ರಾಧ್ಯಾಪಕರಾದ ಡಾ.ಸದಾಶಿವರಾಮಚಂದ್ರಗೌಡ, ಸಿ.ರಾಮಚಂದ್ರಯ್ಯ,ಎಂ.ಎಸ್.ಸುರೇಶ್ಕುಮಾರ್,ಡಾ.ಪ್ರಕಾಶ್, ಕೆ.ಎಸ್.ಸಂದ್ಯಾರಾಣಿ,ಡಾ.ಎಂ.ಸತೀಶ್, ಜಿ.ಶ್ರಿನಿವಾಸ್ ಇದ್ದರು.
ವಿವಿಧ ಜಾನಪದ ಕಲಾ ತಂಡಗಳು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.