ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಹೊನ್ನಾಘಟ್ಟ ಗ್ರಾಮದ ದ್ರಾಕ್ಷಿ ತೋಟದಲ್ಲಿ ಭಾನುವಾರ ಸಂಜೆ ನಡೆದಿದೆ.
ಜಗಣ್ಣ ಎಂಬುವರ ತೋಟದಲ್ಲಿ ಚಿರತೆಯು ಮೇಕೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಜಗಣ್ಣ ಅವರ ತೋಟವನ್ನು ಲೀಸ್ಗೆ ಪಡೆದು ದ್ರಾಕ್ಷಿ ಬೆಳೆ ಇಟ್ಟಿದ್ದ ಮಧು ಎಂಬುವವರು ಸಮೀಪದಲ್ಲೇ ಇದ್ದರು ಚಿರತೆಯನ್ನು ನೋಡಿ ಗಾಬರಿಗೊಂಡು ಗ್ರಾಮಕ್ಕೆ ಓಡಿ ಬಂದಿದ್ದು, ಆತನನ್ನು ಗಮನಿಸಿದ ಚಿರತೆಯೂ ಸಹ ಬೇರೆಡೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.
ಚಿರತೆ ದಾಳಿಯಿಂದ ಗಾಬರಿಗೊಂಡಿರುವ ಗ್ರಾಮಸ್ಥರು ಆದಷ್ಟೂ ಬೇಗ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಹೊನ್ನಾಘಟ್ಟ ಗ್ರಾಮ ನಗರದಿಂದ ಸುಮಾರು ಐದು ಕಿಮೀ ದೂರದಲ್ಲಿದ್ದು ಚಿರತೆ ನಗರದ ಕಡೆಗೂ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ