ದೊಡ್ಡಬಳ್ಳಾಪುರ: ಚಾರಣ ಅನ್ನುವುದು ಬೆಟ್ಟದ ತುದಿಯನ್ನು ಸಾಧ್ಯವಾದಷ್ಟು ಬೇಗೆ ಹೋಗಿ ಮುಟ್ಟುವುದು, ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ಪರಿಸರವನ್ನೊಮ್ಮೆ ಸಿಂಹಾವಲೋಕನ ಮಾಡಿ ಖುಷಿ ಪಟ್ಟರೆ ಚಾರಣದ ಉದ್ದೇಶ ಸಾರ್ಥಕ.
ಇದರ ಜೊತೆಗೆ ಈ ಚಾರಣವನ್ನು ಮತ್ತಷ್ಟು ಸಾರ್ಥಕಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವುದೇ ‘ನಿಸರ್ಗನಡಿಗೆ’. ಈ ನಡಿಗೆಯಲ್ಲಿ ಬೆಟ್ಟದ ತುದಿ ಮುಟ್ಟುವುದರ ಜೊತೆಗೆ ನಿಸರ್ಗದ ಹಾದಿಯಲ್ಲಿ ಸಾಗುವಾಗ ಎದುರಾಗುವ ವಿವಿಧ ಜಾತಿಯ ಸಸ್ಯಗಳು, ಗಿಡ, ಮರ, ಕೀಟ, ಪಕ್ಷಿ, ಪುಟ್ಟ ಪ್ರಾಣಿಗಳು ಹೀಗೆ ಕಣ್ಣಿಗೆ ಕಾಣುವ ಜೀವ ವೈದ್ಯದ ಬಗ್ಗೆ ಕ್ರಮಬದ್ದವಾಗಿ ತಿಳಿಯುತ್ತ ಸಾಗುವುದೇ ‘ನಿಸರ್ಗನಡಿಗೆ’ಯ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಯುವ ಸಂಚಲನ ಟ್ರಸ್ಟ್ ಅಧ್ಯಕ್ಷ ಚಿದಾನಂದ ಆರಾಧ್ಯ.
ಈ ವಾರ ತಾಲ್ಲೂಕಿನ ಚನ್ನಗಿರಿಯಲ್ಲಿ ನಡೆದ ನಿಸರ್ಗ ನಡಿಗೆಯಲ್ಲಿ ಎದುರಾದಗಿದ್ದು ವಿವಿಧ ಬಗೆಯ ಕ್ಯಾಟರ್ಪಿಲ್ಲರ್ಗಳು. ಇಷ್ಟು ಬೇಗನೆ ಇವು ನಿಸರ್ಗನಡಿಗೆಯಲ್ಲಿ ಎದುರುಗೊಳ್ಳಲು ಕಾರಣ ಈ ವರ್ಷ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲು ಅನುಭವಕ್ಕೆ ಬರುವ ಮುನ್ನವೇ ಮಳೆ ಪ್ರಾರಂಭವಾಗಿತ್ತು. ಮಾರ್ಚ್ ಅಂತ್ಯದಿಂದಲೇ ಪ್ರಾರಂಭವಾದ ಮಳೆ ಹದವಾಗಿ ಬೀಳುತ್ತಲೇ ಇದೆ. ಕೆರೆ ಕುಂಟೆಗಳಿಗೆ ನೀರು ಬಂದಿಲ್ಲವಾದರು ಬೆಟ್ಟ ಗುಡ್ಡಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತಿರುವ ಹಚ್ಚ ಹಸಿರಿನ ಮರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಹಾಗೆಯೇ ಪ್ರಕೃತಿಯಲ್ಲಿನ ಜೀವ ವೈವಿದ್ಯ ಕೀಟ, ಪಕ್ಷಿಗಳು ಮೈ ಕೊಡವಿಕೊಂಡು ಹೊರಬಂದಿವೆ ಎಂದರು.
ನಿಸರ್ಗ ನಡಿಗೆಯಲ್ಲಿ ಎದುರಾಗುವ ಸಸ್ಯ,ಕೀಟಗಳ ಬಗ್ಗೆ ಸಸ್ಯವಿಜ್ಞಾನಿ ಡಾ.ಆರ್.ಗಣೇಶನ್ ಅವರ ವಿವರಣೆ ಕೇಳುತ್ತಲೇ ಬೆಟ್ಟದ ತುದಿ ಮುಟ್ಟಿ ಮತ್ತೆ ಕೆಳಗೆ ಇಳಿಯುವಷ್ಟರಲ್ಲಿ ನಿಸರ್ಗ ನಡಿಗೆ ಸಾರ್ಥಕವಾಗುತ್ತದೆ ಎಂದು ನೆನಪಿಸಿಕೊಂಡರು ನಡಿಗೆಯಲ್ಲಿ ಭಾಗವಹಿಸಿದ್ದವರು.