ಚಂದ್ರಗ್ರಹಣದ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಬರಬಾರದು, ಗರ್ಭಿಣೀಯರಿಗೆ ಗ್ರಹಣದಿಂದ ಅಪಾಯ ಇದೆ, ಗ್ರಹಣ ವೇಳೆ ಊಟ ಸೇರಿದಂತೆ ಒಳ್ಳೆ ಕೆಲಸಗಳನ್ನ ಏನೂ ಮಾಡಮಾಡಬಾರದು ಎಂಬ ಮೌಢ್ಯತೆಗಳಿವೆ. ಇವುಗಳನ್ನ ಮೆಟ್ಟಿನಿಂತು ಚಂದ್ರಗ್ರಹಣ ಸಂಭವಿಸುವ ಸಮಯದಲ್ಲೇ ಸ್ಮಶಾನದಲ್ಲಿ ವಾಸ ಮಾಡಿ, ಸಮಾಧಿಗಳ ಮೇಲೆ ಕುಳಿತು ಕಳ್ಳೇ ಪುರಿ ತಿಂದು, ರಂಗ ಗೀತೆಗಳನ್ನ ಹಾಡಿ, ಪ್ರಕೃತಿಯಲ್ಲಿ ನಡೆಯುವ ಕೌತುಕವನ್ನ ಕಣ್ತುಂಬಿ ಕೊಂಡ ದೇವನಹಳ್ಳಿಯ ದೊರೆಕಾವಲು ಗ್ರಾಮಸ್ಥರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಗ್ರಾಮದ ಸ್ಮಶಾನದಲ್ಲಿ ಸೇರಿದ ಗ್ರಾಮಸ್ಥರು, ಸಮಾಧಿಗಳ ಮೇಲೆ ಕುಳಿತು ಚಂದ್ರಗ್ರಹಣದ ಸೌಂದರ್ಯ ಸವಿದರು, ಸತ್ತ ಹೆಣದ ಮೇಲೆ ಎಸೆಯುತ್ತಿದ್ದ ಕಳ್ಳೇಪುರಿಯನ್ನ ತಿಂದರು, ರಂಗ ಗೀತೆಗಳನ್ನ ಹಾಡಿ ಸಂಭ್ರಮ ಪಟ್ಟರು, ಚಲನೆಯ ಕಾರಣದಿಂದ ನೆರಳು ಬೆಳಕಿನ ಆಟದಲ್ಲಿ ಗ್ರಹಣಗಳ ಸಂಭವಿಸುತ್ತವೆ, ಅದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ, ನಾವು ಪೂಜೆ- ಪುನಸ್ಕಾರ, ದಾನ ಮಾಡಿದರೆ ಗ್ರಹಣಗಳನ್ನ ನಿಲ್ಲಿಸಲು ಸಾಧ್ಯವೇ ಎಂದು ಹುಲಿಕಲ್ ನಟರಾಜ್ ಮೌಢ್ಯತೆ ಬಿತ್ತುವ ಜನರಿಗೆ ಸವಾಲು ಹಾಕಿದರು.