
ಬಾಗಲಕೋಟೆ ಜಿಲ್ಲೆ: ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಬಾಗಲಕೋಟೆ ತಾಲೂಕಿನ ಹಳ್ಳೂರು ಗ್ರಾಮಸ್ಥರು ಗ್ರಾ.ಪಂ ಕಚೇರಿಯ ಮುಂದೆ ಕಟ್ಟಿಗೆ ಹಾಕಿ ಶವ ಸಂಸ್ಕಾರಕ್ಕೆ ಮುಂದಾದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಮೀಸಲಾಗಿದ್ದ ದಾನದ ಜಮೀನು ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಗ್ರಾಮದಲ್ಲೀಗ ಶವಸಂಸ್ಕಾರಕ್ಕೆ ತೊಂದರೆಯಾಗಿದೆ.
ಗ್ರಾಮದಲ್ಲಿ ಬುಧವಾರ ಮೃತಪಟ್ಟ ಸಂಗನಗೌಡ ಮೇಟಿ ಉರ್ಪ ಮುಗಳೊಳ್ಳಿ ಅವರ ಶವಸಂಸ್ಕಾರಕ್ಕೆ ಜಾಗದ ಸಮಸ್ಯೆಯಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಯಿತು.
ಸ್ಥಳಕ್ಕೆ ತಹಶಿಲ್ದಾರ ಮತ್ತು ಪೊಲೀಸರು ಆಗಮಿಸಿ ಗ್ರಾಮಸ್ಥರ ನಡುವೆ ಸಂಧಾನ ಮಾತುಕತೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಹಾಗೂ ಗ್ರಾ.ಪಂ ಅಧಿಕಾರಿಗಳ ನಡುವೆ ಜಟಾಪಟಿ ನಡೆದು ಕೊನೆಗೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು.
ವಿವಾದಿತ ಜಾಗದ ಕುರಿತು ವಿಚಾರಣೆ ಆಗಸ್ಟ್ 23ರಂದು ನ್ಯಾಯಾಲಯದಲ್ಲಿ ನಡೆಯಲಿದ್ದು, ಬಳಿಕವಷ್ಟೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.