ನಾನು ಒಳ್ಳೆಯವರಿಗೆ ಒಳ್ಳೆಯ ಕೆಲಸಕ್ಕೆ ತಲೇಬಾಗುತ್ತೇನೆ ಭ್ರಷ್ಟಾಚಾರಿಗಳಿಗೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ ಎಂದು ಉಪಲೋಕಾಯುಕ್ತ ನ್ಯಾ. ಬಿ ವೀರಪ್ಪ ಅವರು ಹೇಳಿದರು.
ಹೊಸಕೋಟೆ ಟೌನ್ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ತಾಲ್ಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಜನತೆಗೆ ಮೊದಲಿದ್ದ ದೇಶ ಭಕ್ತಿ ಈಗ ಇಲ್ಲದಂತಾಗಿದೆ. ಸ್ವಾತಂತ್ರ ಪೂರ್ವದಲ್ಲಿ 15% ಅಕ್ಷರಸ್ಥರಿದ್ದಾಗ ಇದ್ದ ದೇಶಭಕ್ತಿ, ಪ್ರಸ್ತುತ 95% ಅಕ್ಷರಸ್ಥರಿದ್ದು ದೇಶ ಭಕ್ತಿ ಕಡಿಮೆಯಾಗಿದೆ. ಕುವೆಂಪು ಅವರು ತಿಳಿಸಿರುವ ಹಾಗೇ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಅದ್ಭುತ ವಾಕ್ಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.
ಸಂವಿಧಾನದ ನಾಲ್ಕು ಅಂಗಗಳು ದುರ್ಬಲವಾಗಿವೆ. ಕೇಂದ್ರದಲ್ಲಿ ಲೋಕಪಾಲ್ ಇದೆ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಭವ್ಯ ಇತಿಹಾಸವಿದೆ. ಅಧಿಕಾರದಲ್ಲಿದ್ದ ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಸಹ ಜೈಲಿಗೆ ಕಳುಹಿಸಿರುವ ಉದಾಹರಣೆ ಇದೆ. ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು.
ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 25 ಸಾವಿರ ಪ್ರಕರಣಗಳು ಬಾಕಿಯಿದ್ದು, ಅದನ್ನು ವಿಲೇವಾರಿ ಮಾಡಲು ನಾವು ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ದೇಹಕ್ಕೆ ವಯಸ್ಸಾಗಿದೆ, ಆದರೆ ನನ್ನ ದೃಢ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ನಾವು ಲೋಕಾಯುಕ್ತ ಸಂಸ್ಥೆಯ ತಾಯಿ ಸ್ಥಾನದಲ್ಲಿದ್ದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಸದಾ ಸಿದ್ಧರಿದ್ದೇವೆ.
ಭವಿಷ್ಯದ ಜನಾಂಗಕ್ಕೆ ದಾರಿ ದೀಪದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯುವಕರು ಮೊಬೈಲ್ ಗೀಳನ್ನು ಕಡಿಮೆಮಾಡಿ, ದೇಶ ಪ್ರೇಮ ಅಳವಡಿಸಿಕೊಂಡು, ದೇಶದ ಅಭಿವೃದ್ಧಿಗೆ ಎಚ್ಚೆತ್ತು ಕೊಳ್ಳಬೇಕು. ಒಂದು ದೇಶ ಸಮೃದ್ಧಿಯಾಗಿ ಬೆಳೆಯಲು ಉತ್ತಮ ಸಮಾಜದ ತಳಪಾಯ ಸರಿಯಾಗಿಯಿದ್ದರೆ ಮಾತ್ರ ದೇಶ ಸುಗಮವಾಗುತ್ತದೆ.
ನಾವು ಅಡ್ಡದಾರಿಯಲ್ಲಿ ಹಣ ಮಾಡುವುದರಿಂದ ಸರಿಯಾದ ನೆಮ್ಮದಿ ಮತ್ತು ನಿದ್ದೆಯಿರುವುದಿಲ್ಲ. ಹಾಗಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರಿಂದ ನಾವು ಎಲ್ಲೇಯಿದ್ದರು ನೆಮ್ಮದಿಯ ಜೀವನ ನಡೆಸಬಹುದು ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ಹಲವಾರು ಜನರು ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಇದು ನಿಮಗೂ ವಯಸ್ಸಾದ ಕಾಲದಲ್ಲಿ ನಿಮ್ಮ ಮಕ್ಕಳು ಸಹ ನಿಮ್ಮನ್ನು ವೃದ್ಧಾಶ್ರಮಗಳಗೆ ಬಿಡುವುದು ಖಚಿತ. ಆದ್ದರಿಂದ ಎಲ್ಲರೂ ಬದುಕಿನ ನೀತಿ ಪಾಠವನ್ನು ಕಲಿಯಬೇಕು.
ಪಂಚಾಯತ್ ರಾಜ್ ನ ಮುಖ್ಯ ಉದ್ದೇಶ ಗ್ರಾಮ ಸ್ವರಾಜ್ ಅನ್ನು ನಿರ್ಮಿಸುವುದು. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ವಾರ್ಷಿಕ 1 ರಿಂದ 1.15 ಕೋಟಿ ಸರ್ಕಾರದಿಂದ ಸಿಗುತ್ತದೆ. ಅಲ್ಲಿನ ಗ್ರಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರು, ಸದಸ್ಯರು ಬದಲು ಗಂಡ ಅಧಿಕಾರ ಮಾಡುತ್ತಾರೆ. ಇದಕ್ಕೆ ಉದಾಹರಣೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮಹಿಳೆಯಾಗಿದ್ದು, ಪತ್ನಿಯ ಬದಲು ಗಂಡ ಅಧಿಕಾರ ಮಾಡುತ್ತಿದ್ದಾನೆ. ಇಂತಹವರ ಜೊತೆಗೆ ಪಿಡಿಒಗಳು ಸೇರಿಕೊಂಡು ಬೋರವೆಲ್ ರಿಪೇರಿ, ನರೇಗಾ ಯೋಜನೆ, ರಸ್ತೆ ದುರಸ್ತಿ, ಬೀದಿ ದೀಪ ಹೀಗೆ ಇತ್ಯಾದಿ ಯೋಜನೆ ಮತ್ತು ಕಾಮಗಾರಿ ಎಂದು ಅಕ್ರಮ ಬಿಲ್ಲುಗಳನ್ನು ಮಾಡಿಕೊಂಡು ಲಕ್ಷಾಂತರ ಹಣವನ್ನು ದೋಚುತ್ತಿದ್ದಾರೆ.
ಜಿಲ್ಲೆಯ ಪಂಚಾಯಿತಿಗಳಲ್ಲಿ ಗಂಡ ಅಧಿಕಾರ ಚಲಾಯಿಸುತ್ತಿರುವುದು ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಿ ಎಂದು ಸಿಇಒ ಅವರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಕೆಲಸಕ್ಕೆ ಕೊಟೇಶನ್ ಕರೆದರೆ ಮೂರು ಕೊಟೇಶನ್ ಲ್ಲಿ ಯಾವುದಕ್ಕೆ ಗ್ರಾಂಟ್ ಆಗಬೇಕು ಅದಕ್ಕೆ ಸಹಿ ಸಮೇತ ಇರುತ್ತದೆ, ಬೇರೆದಕ್ಕೆ ಸಹಿ ಇರುವುದಿಲ್ಲ . ಸೆಕ್ಷನ್ 13 ರಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ನಾವೇ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬಹುದು. ಇದರಿಂದ ಕನಿಷ್ಠ 3 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡವನ್ನು ವಿಧಿಸಲಾಗುವುದು.
ಸೆಕ್ಷನ್ 17, 17A ಸುಳ್ಳು ಪ್ರಕರಣ ದಾಖಲು ಮಾಡುವುದು ಮತ್ತು ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎಂದು ಕೇಸ್ ದಾಖಲಿಸಬಹುದು. ಆದ್ದರಿಂದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಮತ್ತು ನಿಮಗೆ ಒಳ್ಳೆದು.
ಎಲ್ಲರೂ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಬೇರೆಯವರ ದುಡ್ಡಿಗೆ ಕೈ ಹಾಕಬೇಡಿ. ಭ್ರಷ್ಟಾಚಾರ ಅನ್ನೋದು ಸಮಾಜದ ಅತೀ ದೊಡ್ಡ ಪಿಡುಗು. ಅದನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಆ ಕೆಲಸ ಲೋಕಾಯುಕ್ತ ಸಂಸ್ಥೆಯಿಂದ ಆಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ, ಎಎಸ್ಪಿ ನಾಗರಾಜ್, ಲೋಕಾಯುಕ್ತ ವಿಚಾರಣೆ-1 ಉಪ ನಿಬಂಧಕರು ಅರವಿಂದ ಎನ್.ವಿ, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್ ಭೀಮಸೇನ ಬಗಾಡಿ, ಲೋಕಾಯುಕ್ತ ಡಿವೈಎಸ್ಪಿ ಗಿರೀಶ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ದೂರುದಾರರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಗೇಟ್ ಮುಂಭಾಗ ಸರಣಿ ಅಪಘಾತ ನಡೆದಿದೆ. ಘಟನೆಯಲ್ಲಿ ಬಸ್, ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಡ್ಡಬಂದ…
ಜಾತ್ರೆ ನಡೆದ ಮರು ದಿನವೇ ಲಕ್ಷ್ಮೀ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ದೊಡ್ಡಬಳ್ಳಾಪುರದ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ... ದೇವಾಲಯದ ಬಾಗಿಲು…
ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಉದ್ದೇಶದಿಂದ ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ…
ಪಟಾಕಿ ದುರಂತಕ್ಕೆ ಯಾರು ಹೊಣೆ.... ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ..... ಲೇಸರ್…
ದೊಡ್ಡಬಳ್ಳಾಪುರ ನಗರದಲ್ಲಿ ಏ.23 ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ F09-Rajaghatta, F03-Thalagavara, F12-Heggadihalli, F17- Nandi…
ಖಾಯಂ ನೇಮಕಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ…