ಗೊಬ್ಬರದ ಚೀಲಗಳಡಿ ₹1.65 ಕೋಟಿ ಮೌಲ್ಯದ ಗೋವಾ ಮದ್ಯ ಸಾಗಾಟ: ವಿಜಯಪುರ ಪೊಲೀಸರಿಂದ ಅಂತರರಾಜ್ಯ ಜಾಲ ಪತ್ತೆ


ವಿಜಯಪುರ: ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟಿ ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಿಜಯಪುರ ಪೊಲೀಸರು ವಶಪಡಿಸಿಕೊಂಡಿದ್ದು, ಈ ವೇಳೆ ಬಳಸಲಾಗಿದ್ದ ಹೈಟೆಕ್ ಕಳ್ಳಸಾಗಣೆ ತಂತ್ರ ಬೆಳಕಿಗೆ ಬಂದಿದೆ.

ಖಚಿತ ಮಾಹಿತಿಯ ಮೇರೆಗೆ ವಿಜಯಪುರ ಜಿಲ್ಲೆಯ ಕೋಲ್ಹಾರ ಟೋಲ್ ಸಮೀಪ ದಾಳಿ ನಡೆಸಿದ ಪೊಲೀಸರು, ಎರೆಹುಳು ಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ತಪಾಸಣೆಗೆ ಒಳಪಡಿಸಿದರು. ಆರಂಭದಲ್ಲಿ ಲಾರಿಯಲ್ಲಿ ಗೊಬ್ಬರ ಮಾತ್ರ ಇದೆ ಎಂದು ಚಾಲಕರು ಹೇಳಿದರೂ, ಅನುಮಾನಗೊಂಡ ಪೊಲೀಸರು ಗೊಬ್ಬರದ ಚೀಲಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ ಅವುಗಳ ಕೆಳಭಾಗದಲ್ಲಿ ಗೋವಾ ಮದ್ಯದ ಬಾಕ್ಸ್‌ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಅಡಗಿಸಿಡಲಾಗಿರುವುದು ಪತ್ತೆಯಾಯಿತು.

ಹೈಟೆಕ್ ತಂತ್ರದಿಂದ ಸಾಗಾಟ

ತನಿಖೆ ವೇಳೆ ಅಕ್ರಮ ಮದ್ಯ ಸಾಗಾಟಕ್ಕಾಗಿ ಆರೋಪಿಗಳು ವಿಶೇಷ ತಂತ್ರ ರೂಪಿಸಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಕಣ್ತಪ್ಪಿಸಲು ಪ್ರತಿ ಚಾಲಕನಿಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ಮಾತ್ರ ನೀಡಲಾಗುತ್ತಿತ್ತು. ಆ ಸ್ಥಳ ತಲುಪಿದ ಬಳಿಕ ಮತ್ತೊಬ್ಬ ಚಾಲಕ ವಾಹನದ ನಿಯಂತ್ರಣ ವಹಿಸಿಕೊಳ್ಳುತ್ತಿದ್ದ. ಹೀಗೆ ಹಂತ ಹಂತವಾಗಿ ಚಾಲಕರನ್ನು ಬದಲಾಯಿಸುತ್ತಾ ಲಾರಿಯನ್ನು ಗೋವಾದಿಂದ ಮಹಾರಾಷ್ಟ್ರದತ್ತ ಸಾಗಿಸಲಾಗುತ್ತಿತ್ತು.

ಈ ವಿಧಾನದಿಂದ ಲಾರಿ ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳನ್ನು ದಾಟಿ ವಿಜಯಪುರ ತಲುಪಿತ್ತು. ಆದರೆ ವಿಜಯಪುರ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮ ದಂಧೆ ಬಯಲಾಗಿದೆ.

₹1.65 ಕೋಟಿ ಮೌಲ್ಯದ ಮದ್ಯ ಜಪ್ತಿ

ಪೊಲೀಸರು ಲಾರಿಯಿಂದ 12,952 ಲೀಟರ್‌ಗೂ ಅಧಿಕ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾದ ಮದ್ಯದಲ್ಲಿ 290 ಬಾಕ್ಸ್ ಮ್ಯಾನ್ಷನ್ ಹೌಸ್ ಬ್ರಾಂಡಿ, 397 ಬಾಕ್ಸ್ ರಾಯಲ್ ಬ್ಲೂ ಹಾಗೂ 800 ಬಾಕ್ಸ್ ರಾಯಲ್ ಸೆಲೆಕ್ಟ್ ಮದ್ಯ ಸೇರಿವೆ. ಮದ್ಯ ಹಾಗೂ ಲಾರಿ ಸೇರಿ ಒಟ್ಟು ₹1.65 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನಾಲ್ವರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಮೂಲದ ಶ್ರೀನಿವಾಸ್ ಮೀಸಿ, ವಿಜಯಪುರದ ಹುಸೇನ್‌ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸಿದ್ಧರಾಮ ಡಾಲೆ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮದ್ಯ ಮಾಫಿಯಾ ಜಾಲವನ್ನು ಭೇದಿಸಿರುವ ವಿಜಯಪುರ ಪೊಲೀಸರು, ಈ ಕಳ್ಳಸಾಗಣೆ ಜಾಲದ ಪ್ರಮುಖ ಕಿಂಗ್‌ಪಿನ್ ಹಾಗೂ ಇತರ ಆರೋಪಿಗಳ ಪತ್ತೆಗೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Ramesh Babu

Journalist

Recent Posts

ಡೀಸೆಲ್ ದುಬಾರಿ, ಎತ್ತುಗಳ ಕೊರತೆ; ಸೈಕಲ್‌ಗೆ ಕುಂಟೆ ಜೋಡಿಸಿ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ ರೈತ ದಂಪತಿ

ದಾವಣಗೆರೆ: ಎತ್ತುಗಳ ಕೊರತೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಹೆಚ್ಚುತ್ತಿರುವ ಡೀಸೆಲ್ ವೆಚ್ಚದ ನಡುವೆಯೇ ದಾವಣಗೆರೆ ಜಿಲ್ಲೆಯ ರೈತ ದಂಪತಿಯೊಬ್ಬರು ಕೃಷಿ ಕಾರ್ಯಕ್ಕೆ…

4 hours ago

‘ಫೊರೆನ್ಸಿಕ್ ತನಿಖೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಮುಂಚೂಣಿ ಸ್ಥಾನ’-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಇಂದು ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್ ಕಚೇರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು. ಈ…

19 hours ago

ಜೂ. 28 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವು ಜೂನ್ 28 ರಿಂದ ಜುಲೈ 01 ರವರೆಗೆ ನಡೆಯಲಿದ್ದು, ಈ…

23 hours ago

24 ಗಂಟೆಯೊಳಗೆ ಸರಗಳ್ಳರ ಬಂಧನ: ₹2.96 ಲಕ್ಷ ಮೌಲ್ಯದ ಮಾಲು ವಶ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಇಬ್ಬರು…

1 day ago

ದೊಡ್ಡಬೆಲವಂಗಲ ಠಾಣೆ ಇನ್ಸ್‌ಪೆಕ್ಟರ್ ಕಲ್ಲಪ್ಪ ಎಸ್. ಖರತ್‌ಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ

ದೊಡ್ಡಬಳ್ಳಾಪುರ: ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ 2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸನಾ…

1 day ago

ಕೆಐಎಎಲ್ ನಲ್ಲಿ ಸರಣಿ ಕಳ್ಳಸಾಗಣೆ ಪ್ರಕರಣಗಳು ಪತ್ತೆ: ₹4.33 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು, ಚಿನ್ನ ವಶ

ದೇವನಹಳ್ಳಿ: ಕೆಂಪೇಗೌಡರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮಾದಕ ವಸ್ತುಗಳು…

1 day ago