ನಾವೀನ್ಯತೆ ಶಿಕ್ಷಣದ ಜೀವಾಳ. ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಆವಿಷ್ಕಾರ ಆಗುವುದರ ತುರ್ತು ಅಗತ್ಯವಿದೆ. ಎಂಜಿನಿಯರಿಂಗ್ ಕ್ಷೇತ್ರ ಅತ್ಯಂತ ವೇಗವಾಗಿ ವಿಕಸನಗೊಳ್ಳುತ್ತಿದೆ. ಉದ್ಯೋಗದ ಭವಿಷ್ಯವು ಹೊಸ ಕೌಶಲ್ಯ, ಹೊಂದಿಕೊಳ್ಳುವಿಕೆ ಮತ್ತು ಬದಲಾವಣೆ ಸ್ವೀಕರಿಸುವ ಮನಸ್ಥಿತಿಯನ್ನು ಬಯಸುತ್ತಿದೆ. ಹೊಸದಾಗಿ ಪದವಿ ಪಡೆದವರು ಜ್ಞಾನದ ಅಡಿಪಾಯವನ್ನು ಹೊಂದಿರುವುದು ಮಾತ್ರವಲ್ಲದೇ ನಿರಂತರವಾಗಿ ಬದಲಾಗುತ್ತಿರುವ ವಿಕಸನ, ಆವಿಷ್ಕಾರ ಮತ್ತು ಅಭಿವೃದ್ಧಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಎಂದು ಸಲಹೆ ನೀಡಿದ AICTE ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ.
ಪ್ರತಿಷ್ಠಿತ ಗೀತಂ ಶಿಕ್ಷಣ ಸಂಸ್ಥೆಯ ದೊಡ್ಡಬಳ್ಳಾಪುರ ಸಮೀಪವಿರುವ ಬೆಂಗಳೂರು ಕ್ಯಾಂಪಸ್ ನಲ್ಲಿ 14 ನೇ ಘಟಿಕೋತ್ಸವ ಶನಿವಾರ ನಡೆಯಿತು. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪಡೆದ 610 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ವಿಮರ್ಶಾತ್ಮಕ ಯೋಚನೆ, ಸಂಕೀರ್ಣ ಸಮಸ್ಯೆಗಳ ಪರಿಹಾರ ಮತ್ತು ಉದಯೋನ್ಮುಖ ತಂತ್ರಜ್ಞಾನ ಅಳವಡಿಸಿಕೊಳ್ಳಲು ಉಪಕರಣ ಮತ್ತು ಸಂಪನ್ಮೂಲಗಳೊಂದಿಗೆ ಅವಕಾಶ ನೀಡಬೇಕಾಗುತ್ತದೆ. ಶಿಕ್ಷಣವು ಒಂದು ಗಮ್ಯಸ್ಥಾನವಾಗಿರುವುದಿಲ್ಲ. ಆದರೆ, ಜೀವನ ಪರ್ಯಂತದ ಒಂದು ಪ್ರಯಾಣವಾಗಿರುತ್ತದೆ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಗೀತಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ. ಭರತ್ ಮಾತನಾಡಿ, ಗೀತಂನ ಬೆಂಗಳೂರು ಕ್ಯಾಂಪಸ್ ನಲ್ಲಿ ನಾವು 2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುತ್ತಿರುವುದರ ಹಿಂದೆ ಸಾಕಷ್ಟು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಆಳವಾದ ಆಶಾವಾದಗಳೊಂದಿಗೆ ನಾವು ಪದವೀಧರರು ತಮ್ಮ ಉನ್ನತ ಕೌಶಲ್ಯಗಳು, ನವೀನ ಬಗೆಯ ಆಲೋಚನೆಗಳು ಮತ್ತು ಅಚಲವಾದ ನಿರ್ಣಯಗಳೊಂದಿಗೆ ಜಗತ್ತನ್ನು ರೂಪಿಸಲು ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಮತ್ತು ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕಗಳನ್ನು ಪ್ರದಾನ ಮಾಡಿದರು. 2023 ರಲ್ಲಿ ಗೀತಂ ಸಂಸ್ಥೆಯ ಮೂರು ಕ್ಯಾಂಪಸ್ ಗಳಲ್ಲಿ ಒಟ್ಟು 4470 ವಿದ್ಯಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ.
ಗೀತಂ ವಿವಿ ಉಪಕುಲಪತಿ ಪ್ರೊ.ದಯಾನಂದ ಸಿದ್ದವಟ್ಟಂ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗೀತಂ ಬೆಂಗಳೂರು ಕ್ಯಾಂಪಸ್ ಉಪಕುಲಪತಿ ಪ್ರೊ.ಎಂ.ಎಸ್.ಮೋಹನ್ ಕುಮಾರ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 509 ಎಂಜಿನಿಯರಿಂಗ್ ವಿದ್ಯಾರ್ಥಿಗಳು, 19 ವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 82 ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಗೀತಂ ಅಧ್ಯಕ್ಷರ ಚಿನ್ನದ ಪದಕಗಳನ್ನು ಅತ್ಯುತ್ತಮ ಸಾಧನೆ ಮಾಡಿದ 10 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಗೀತಂ ವಿವಿ ಕಾರ್ಯದರ್ಶಿ ಎಂ.ಭಾರದ್ವಾಜ್, ರಿಜಿಸ್ಟ್ರಾರ್ ಡಾ.ಡಿ.ಗುಣಶೇಖರನ್, ಪ್ರೊ. ಗೌತಂ ರಾವ್ ಮತ್ತು ಬೆಂಗಳೂರು ಕ್ಯಾಂಪಸ್ ವಿಸಿ ಪ್ರೊ.ಎಂ.ಎಸ್.ಮೋಹನ್ ಕುಮಾರ್ , ಗೀತಂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಬೋಧಕ ಸಿಬ್ಬಂದಿ, ಶಿಕ್ಷಣ ತಜ್ಞರು ಹಾಜರಿದ್ದರು.