
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಟಾಕಿಗಳು ಸಿಡಿದು, ಓರ್ವ ಬಾಲಕ ಮೃತಪಟ್ಟಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಸೇರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸುಮಾರು 8 ಮಂದಿಗೆ ಗಂಭೀರ ಗಾಯಳಾಗಿರುವ ಘಟನೆ ನಿನ್ನೆ(ಆ.29 ಶುಕ್ರವಾರ) ಸಂಜೆ 5:45 ಗಂಟೆಗೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ಸಂಭವಿಸಿದೆ.

ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತನುಷ್ ರಾವ್(15), ಎಂಬ ವಿದ್ಯಾರ್ಥಿ ಮೃತಪಟ್ಟಿರುತ್ತಾನೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ…

ಗಣೇಶ ವಿಸರ್ಜನೆ ವೇಳೆ ಅವಘಡ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಕೆ.ಬಾಬಾ ಹಾಗೂ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದೇರೀತಿ ಆಸ್ಪತ್ರೆಗೆ ತೆರಳಿ ಗಾಯಗೊಂಡಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದವರೊಂದಿಗೆ ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಪಟಾಕಿ ಸಿಡಿತಕ್ಕೆ ತನುಷ್ ರಾವ್ ಎಂಬಾ ಬಾಲಕ ಸಾವನ್ನಪ್ಪಿದ್ದಾನೆ.

ಆಯೋಜಕರ ಮೇಲೆ ಕಾನೂನು ಕ್ರಮ-ಎಸ್ಪಿ ಸಿ.ಕೆ.ಬಾಬಾ
ಯುವಕರು ಗಣೇಶ ಮೂರ್ತಿ ಇದ್ದ ವಾಹನದಲ್ಲಿ ಪಟಾಕಿ ಇಟ್ಟಿದ್ದರು. ವಾಹನದ ಶಾಖಕ್ಕೆ ಏಕಾಏಕಿ ಪಟಾಕಿ ಸ್ಫೋಟಗೊಂಡಿದೆ. ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗಣೇಶ ಪ್ರತಿಷ್ಟಾಪನೆ, ವಿಸರ್ಜನೆ ಸಮಯದಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಹಲವು ಸಭೆಗಳನ್ನು ಆಯೋಜನೆ ಮಾಡಿ ಸಾರ್ವಜನಿಕರಿಗೆ ಹಾಗೂ ಆಯೋಜಕರಿಗೆ ತಿಳಿಸಿದ್ದೇವೆ. ಆದರೂ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇನ್ನು ಮುಂದೆ ಪಟಾಕಿ ಸಿಡಿಸುವುದಕ್ಕೂ ಪ್ರತ್ಯೇಕ ಸ್ಥಳ ಗುರುತಿಸುತ್ತೇವೆ. ಆ ಸ್ಥಳದಲ್ಲಿ ಮಾತ್ರ ಪಟಾಕಿ ಸಿಡಿಸಬೇಕು. ಎಲ್ಲಂದರಲ್ಲಿ ಪಟಾಕಿ ಸಿಡಿಸುವುದಕ್ಕೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಕಾನೂನಿನ ಎಲ್ಲೆ ಮೀರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಘಟನೆ ವಿವರ
ನಿನ್ನೆ ಸಂಜೆ ಫ್ರೆಂಡ್ಸ್ ವಿನಾಯಕ ಗ್ರೂಪ್ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರಾಕ್ಟರ್ನಲ್ಲಿ ಮೆರವಣಿಗೆ ಬರುವ ವೇಳೆ, ಬ್ಯಾನರ್ ಮೆರವಣಿಗೆ ಮಾಡಲು ಪವರ್ ಲಿಫ್ಟರ್ ವಾಹನವನ್ನು ಕರೆಸಲಾಗಿತ್ತು. ಪಟಾಕಿಗಳನ್ನು ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಡಲಾಗಿತ್ತು. ಚಿಕ್ಕ ಕ್ರೇನ್ ನ ಇಂಜಿನ್ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಫೋಟಗೊಂಡಿವೆ ಎನ್ನಲಾಗಿದೆ.
ಘಟನೆಯಲ್ಲಿ ಕ್ರೇನ್ನಲ್ಲಿ ಚಾಲಕನ ಜೊತೆ ಕುಳಿತಿದ್ದ ಇಬ್ಬರು ಮಕ್ಕಳು ಮೇಲೆ ಹಾರಿ ಬಿದ್ದಿದ್ದು, ಪಕ್ಕದಲ್ಲೇ ಸಾಗುತ್ತಿದ್ದ ಭದ್ರತೆಗೆ ನಿಯೋಜನೆ ಮಾಡಲಾಗಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಚಾಲಕನಿಗೆ ಗಂಭೀರ ಪೆಟ್ಟಾಗಿದೆ. ಅಲ್ಲದೆ ಪಟಾಕಿ ಸ್ಪೋಟಗೊಂಡು ಚದುರಿದ ಪರಿಣಾಮ ಮೆರವಣಿಗೆ ಸಾಗುತ್ತಿದ್ದ 8ಕ್ಕೂ ಹೆಚ್ಚು ಯುವಕರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಣೇಶ್(16), ಯೋಗೇಶ್(15), ಮುನಿರಾಜು(27), ಪವರ್ ಲಿಫ್ಟ್ ಚಾಲಕ ನಾಗರಾಜು(35), ಚೇತನ್ ಶಾವಿ(13), ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಸೇರಿದಂತೆ ಇತರರಿಗೆ ಗಂಭೀರ ಗಾಯಗಳಾಗಿವೆ. ಗಾಯಳುಗಳಿಗೆ ಚಿಕಿತ್ಸೆ ಮುಂದುವರಿದಿದೆ…
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.