ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಯ ಭೀಕರ ಕೊಲೆ: ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿದ್ದೇ ಕೊಲೆಗೆ ಕಾರಣವಾಯ್ತಾ?‌ ಚುರುಕುಗೊಂಡ ತನಿಖೆ

ಬೆಂಗಳೂರು ನಗರ ಜಿಲ್ಲೆಯ ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯನ್ನ  ಭೀಕರ ಕೊಲೆ ಮಾಡಿರುವ ಘಟನೆ ಬೆಂಗಳೂರು‌ ನಗರದ ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಯ ಕುವೆಂಪು ನಗರದ ಅಪಾರ್ಟ್ಮೆಂಟಿನಲ್ಲಿ ತಡರಾತ್ರಿ ನಡೆದಿದೆ.

ಕೆ.ಎಸ್.ಪ್ರತಿಮಾ(ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ) ಕೊಲೆಯಾದ ಸರ್ಕಾರಿ ಅಧಿಕಾರಿ. ಕಳೆದ ರಾತ್ರಿ ಡ್ರೈವರ್ 8ಗಂಟೆ ಸುಮಾರಿಗೆ ಪ್ರತಿಮಾ ಅವರನ್ನು ಕಚೇರಿಯಿಂದ ಮನೆಗೆ ಬಿಟ್ಟು ಬಂದಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಪ್ರತಿಮಾ ಸಹೋದರ ಕರೆ ಮಾಡಿದರೂ ಅದನ್ನು ಸ್ವೀಕರಿಸಿರಲಿಲ್ಲ. ಬಳಿಕ ಫ್ಲ್ಯಾಟ್ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಒಬ್ಬಂಟಿಯಾಗಿ ವಾಸವಿದ್ದ ಪ್ರತಿಮಾ ಅವರನ್ನು ಗಮನಿಸಿರುವ ದುಷ್ಕರ್ಮಿಗಳು ಏಕಾಏಕಿ ಮನೆಯ ಒಳಗೆ ನುಗ್ಗಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕುತ್ತಿಗೆಯಲ್ಲಿ ಹಗ್ಗ ಬಿಗಿದಿರೊ ಗುರುತು ಪತ್ತೆಯಾಗಿದೆ. ಇಬ್ಬರು ದುಷ್ಕರ್ಮಿಗಳಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೊಡ್ಲೂರು ಸಮೀಪದ ಕಲ್ಕಟ್ಟೆಯ ಸುಬ್ಬಯ್ಯ ಗೌಡರ ಪುತ್ರಿ. ತುಡ್ಕಿಯ ಸತ್ಯನಾರಾಯಣ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ 13 ವರ್ಷದ ಓರ್ವ ಮಗ  ಇದ್ದಾನೆ. ಸದ್ಯ ಒಬ್ಬೊಂಟಿಯಾಗಿ ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಯ ಕುವೆಂಪು ನಗರದ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗೆ ಒಬ್ಬರೇ ವಾಸವಾಗಿದ್ದರು.

ಅಕ್ರಮ ಕಲ್ಲು ಗಣಿಗಾರಿಕೆಯನ್ನ ನಿಲ್ಲಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಡ್ರೈವರ್, ಇಲಾಖಾ‌ ಸಿಬ್ಬಂದಿ, ಇಂಜಿನಿಯರ್, ಸ್ನೇಹಿತರು  ಸೇರಿದಂತೆ ಇತರರಿಂದ ಇಂಚಿಇಂಚೂ ಮಾಹಿತಿ, ಸಿಸಿಟಿವಿ ಫೂಟೇಜ್ ಪಡೆಯುತ್ತಿರುವ ಪೊಲೀಸರು.

ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿದ್ದಕ್ಕೆ ನನಗೆ ಜೀವ ಬೆದರಿಕೆ ಇದೆ ಎಂದು ನಿನ್ನೆ ರಾತ್ರಿ ಸ್ನೇಹಿತರೊಬ್ಬರಿಗೆ ಕರೆ ಮಾಡಿ ತಿಳಿಸಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!