ನಾಗಮಂಗಲ ನಗರದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ನಡೆಸಿದ ದಾಳಿ ಖಂಡಿಸಿ ಇಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಗಣೇಶ ಮೂರ್ತಿ ಸಮೇತ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು.
ಈ ಘಟನೆ ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯ ಸದಸ್ಯರು ಟೌನ್ ಹಾಲ್ ಬಳಿ ಗಣೇಶ ಮೂರ್ತಿಯೊಂದಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಪ್ರತಿಭಟನಾನಿರತರೊಂದಿಗೆ ‘ಗಣಪತಿ ಮೂರ್ತಿಯನ್ನೂ ಪೊಲೀಸ್ ವಾಹನದಲ್ಲಿ ಬಂಧಿಸಿಟ್ಟಿದ್ದು’ ಹಿಂದೂ ಸಮಾಜದ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.
ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿ ಗಣೇಶ ಮೂರ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾಳಜಿವಹಿಸಬಹುದಾಗಿದ್ದ ಪೊಲೀಸರು ಅತ್ಯಂತ ಉಡಾಫೆಯಾಗಿ ವರ್ತಿಸಿರುವ ರೀತಿ ಸರ್ವಥಾ ಖಂಡನೀಯ, ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ಬಗ್ಗೆ ತೋರುವ ತಾತ್ಸಾರ ದೋರಣೆಯನ್ನು ಈ ಘಟನೆ ಪ್ರತಿಬಿಂಬಿಸಿದೆ, ಈ ಕೂಡಲೇ ಸರ್ಕಾರ ಹಿಂದೂ ಸಮಾಜದ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.
ಗಣೇಶೋತ್ಸವ ಹಿಂದೂಗಳ ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ಸಂಗಮದ ದ್ಯೋತಕ. ಈ ಉತ್ಸವದ ಆಚರಣೆಗೆ ಎಲ್ಲೆ, ಕಟ್ಟುಪಾಡುಗಳನ್ನು ಮೀರಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸವದ ಹಬ್ಬ. ಹಿಂದೂಗಳ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಮೊದಲ ಪೂಜೆ ವಿಘ್ನ ನಿವಾರಿಸುವ ವಿನಾಯಕನಿಗೆ ಸಲ್ಲಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಗಣೇಶನಿಗೆ ಎಲ್ಲಿಲ್ಲದ ಮಹತ್ವ ಎಂದು ಹೇಳಿದ್ದಾರೆ.
ಜನರ ಭಾವೊದ್ವೇಗಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಾರದು ಎಂಬುದನ್ನು ಒಪ್ಪಬಹುದಾದರೂ ಅದರ ಹೆಸರಿನಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುವ ಮಾರ್ಗಸೂಚಿಗಳನ್ನು ಅಳವಡಿಸಿ ಉತ್ಸವ ಆಚರಣೆಯ ಸಡಗರದ ಸ್ವಾತಂತ್ರ್ಯಕ್ಕೆ ತೊಂದರೆ ನೀಡುವುದನ್ನು ಒಪ್ಪಲಾಗದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸುವ ಮಾರ್ಗಸೂಚಿಗಳು ಉದ್ದೇಶಪೂರ್ವಕ ಎಂಬ ಭಾವನೆ ಹಿಂದೂ ಸಮಾಜದಲ್ಲಿ ಬಲವಾಗಿ ಬೇರೂರಿದೆ ಇದಕ್ಕೆ ನಾಗಮಂಗಲದಂತಹ ಘಟನೆ ಸಾಕ್ಷಿಯಾಗಿದೆ, ದುರ್ಘಟನೆ ಉದ್ಭವಿಸುವುದಕ್ಕೆ ಆಸ್ಪದ ನೀಡುವ ನಿಟ್ಟಿನಲ್ಲಿ ಉತ್ಸವ ವಿರೋಧಿ ದುಷ್ಟ ಗುಂಪುಗಳು ಗಣೇಶ ಮೆರವಣಿಗೆ ಸಂದರ್ಭದಲ್ಲಿ ದಾಂಧಲೆ ನಡೆಸಿ ಅಟ್ಟಹಾಸ ಮೆರೆಯುವ ಪರಿಸ್ಥಿತಿಯ ಸೃಷ್ಟಿಗೆ ಕಾನೂನು ಸುವ್ಯವಸ್ಥೆಯ ನಿಷ್ಕ್ರೀಯತೆ ಅವಕಾಶ ಮಾಡಿಕೊಡುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.