ತಾಲೂಕಿನ ಸಾಸಲು ಹೋಬಳಿ ಗಡಿ ಭಾಗದಲ್ಲಿರುವುದರಿಂದ ಕ್ಷೇತ್ರದ ಜನಪ್ರತಿನಿಧಿಗಳು, ಆಡಳಿತ ವರ್ಗಕ್ಕೆ ಮಲತಾಯಿಯ ಮಗುವಿನಂತಾಗಿ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ.
ತಾಲೂಕಿನ ಬೇರೆ ಹೋಬಳಿಗಳಿಗೆ ಸಿಗುತ್ತಿರುವ ಪ್ರಾತಿನಿಧ್ಯದಲ್ಲಿ ಸಾಸಿವೆಯಷ್ಟು ಕಾಳಜಿ ಸಾಸಲು ಹೋಬಳಿ ಮೇಲೆ ಕಾಣದಾಗಿದೆ. ಹೋಬಳಿಯಲ್ಲಿ ದಶಕಗಳಿಂದ ಶಿಕ್ಷಣ, ಆರೋಗ್ಯ, ಬಡತನದ ಸಮಸ್ಯೆ ಹಾಸು ಹೊಕ್ಕಾಗಿದೆ. ಆದರೆ, ಜನಪ್ರತಿನಿಧಿಗಳಿಗೆ ಸಾಸಲು ಹೋಬಳಿಯ ಸಮಸ್ಯೆ ಪಂಚವಾರ್ಷಿಕ, ಸಾಂದರ್ಭಿಕ ಚುನಾವಣೆಗಳಲ್ಲಿ ಪ್ರಚಾರದ ಸರಕಾಗಿ ಮಾತ್ರ ಬಳಕೆಯಾಗುತ್ತಿದೆ.
ಸರ್ಕಾರಿ ಸೇವೆಗಳಲ್ಲಿ ತೊಡಗಿಸಿಕೊಂಡ ಅತಿ ಹೆಚ್ಚಿನವರು ಸಾಸಲು ಹೋಬಳಿಯಿಂದ ಹೊರಗಡೆ ಹೋದವರೇ ಆದರೂ ಅಭಿವೃದ್ಧಿ ಕಾಣದಿರುವುದು ಯಕ್ಷಪ್ರಶ್ನೆಯಾಗಿದೆ.
ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಸಬೂಬು ಹೇಳಿಕೊಂಡು ದಿನದೂಡುತ್ತಿದ್ದಾರೆ. ಇನ್ನು ಶ್ರೀರಾಮನಹಳ್ಳಿಯಲ್ಲಿರುವ ಇರುವುದು ಒಂದೇ ಒಂದು ವಿದ್ಯುತ್ ಪರಿವರ್ತಕಕ್ಕೆ ಮನೆಯಲ್ಲಿ ಕೊಳವೆ ಬಾವಿ ಹೊಂದಿದವರೂ ಕೂಡ ಸಂಪರ್ಕ ಪಡೆಯುತ್ತಿದ್ದು, ಮತ್ತಷ್ಟು ಒತ್ತಡದಿಂದ ಜಂಪ್ ಸುಟ್ಟುಹೋಗುವುದು ಸಾಮಾನ್ಯವಾಗಿದೆ.
ವಿದ್ಯುತ್ ಪರಿವರ್ತಕಕ್ಕೆ ಸಂಪರ್ಕ ಪಡೆಯುವ ವಿಚಾರವಾಗಿ ಗ್ರಾಮಸ್ಥರ ಮಧ್ಯೆ ಸಾಕಷ್ಟು ಜಗಳವಾಗಿದೆ. ಗ್ರಾಮಸ್ಥರ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಗ್ರಾಮದ ಹಲವು ರೈತರು 4-5 ವರ್ಷಗಳ ಹಿಂದೆಯೇ ವೈಯಕ್ತಿಕ ವಿದ್ಯುತ್ ಪರಿವರ್ತಕಕ್ಕಾಗಿ ಅರ್ಜಿ ಸಲ್ಲಿಸಿ, ಠೇವಣಿ ಕೂಡ ಕಟ್ಟಿದ್ದಾರೆ. ರೈತ ಸಾಲಗಾರನಾಗಿ ನಷ್ಟ ಅನುಭವಿಸುತ್ತಿದ್ದರೂ ಬೆಸ್ಕಾಂನಿಂದ ಮಾತ್ರ ವಿದ್ಯುತ್ ಪರಿವರ್ತಕ ಬಂದಿಲ್ಲ. ಗ್ರಾಮದ ಅಶ್ವತ್ಥಪ್ಪ ಎಂಬುವರ ಬಳಿ ಲೈನ್ ಮನ್ ಒಬ್ಬರು ಟಿಸಿ ಹಾಗೂ ಕಂಬಕ್ಕಾಗಿ 50 ಸಾವಿರ ಪಡೆದು ಎರಡು ವರ್ಷವಾಗಿದೆ. ಈವರೆಗೂ ಟಿಸಿನೂ ಇಲ್ಲ, ಹಣನೂ ಇಲ್ಲ ಎಂದು 85 ವರ್ಷದ ವೃದ್ಧ ಅಶ್ವತ್ಥಪ್ಪ ಕಣ್ಣೀರು ಹಾಕಿದರು.
ಟಿ.ಸಿಗಾಗಿ ಠೇವಣಿ ಇರಿಸಿದ ಹಲವು ರೈತರ ಪಾಡು ಇದೇ ಹಾಗಿದೆ. ರೈತರ ಸಮಸ್ಯೆ ಕುರಿತು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಜೆಟ್ ಬಂದಿಲ್ಲ. ಮಾರ್ಚ್ ತಿಂಗಳಲ್ಲಿ 63 ಕೆವಿ ಸಾಮರ್ಥ್ಯದ ಇನ್ನೊಂದು ವಿದ್ಯುತ್ ಪರಿವರ್ತಕ ಅಳವಡಿಸುತ್ತೇವೆ. ಸಾಸಲು ಹಾಗೂ ತೂಬಗೆರೆ ಹೋಬಳಿಯ 250 ವೈಯಕ್ತಿಕ ಫಲಾನುಭವಿಗಳಿಗೆ ಟಿಸಿ ಅಳವಡಿಸಲು ಕಾರ್ಯಾದೇಶ ನೀಡಲಾಗಿದೆ. ಶೀಘ್ರವೇ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಇಇ ಇನಾಯತ್ ಅವರು ತಿಳಿಸಿದರು.
30 ಎಕರೆಗೂ ಹೆಚ್ಚು ಬೆಳೆ ನಾಶ
ಶ್ರೀರಾಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಸುಮಾರು 30 ಎಕರೆಗು ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ವಿದ್ಯುತ್ ಪರಿವರ್ತಕದ ಸಮೀಪವೇ ಬೆಳೆದಿರುವ ಅಡಿಕೆ ಸಸಿಗಳು ನೀರಿಲ್ಲದೇ ಒಣಗುತ್ತಿವೆ. ರಾಗಿ ಪೈರು, ಬಾಳೆ ಗಿಡಗಳು ಕೂಡ ಒಣಗಲಾರಂಭಿಸಿವೆ. ಕಳೆದ ವರ್ಷ ಸರಿಯಾದ ಮಳೆಯಾಗದೇ ಬೆಳೆ ನಾಶವಾಯಿತು. ಈ ವರ್ಷ ಬಿಸಿಲು ಹೆಚ್ಚಿದೆ. ವಿದ್ಯುತ್ ಅಭಾವ, ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಜೀವನಾಧಾರವಾದ ಕೃಷಿ ಕೈಕೊಟ್ಟರೆ ನಮ್ಮ ಬದುಕು ಹೇಗೆ ಎಂದು ಗ್ರಾಮಸ್ಥರಾದ ನರಸಿಂಹಮೂರ್ತಿ, ಮಂಜುನಾಥ್ ಹಾಗೂ ರೈತ ಮಹಿಳೆ ಸಂಧ್ಯಾ ಅವರು ಪ್ರಶ್ನಿಸಿದರು.
ಜನರೇಟರ್ ತರಿಸಿ ನೀರು ಹಾಯಿಸುವ ಸಾಹಸ
ವಿದ್ಯುತ್ ಪರಿವರ್ತಕ ಒಮ್ಮೆ ಸುಟ್ಟು ಹೋದರೆ ಅದನ್ನು ದುರಸ್ತಿಗೊಳಿಸಲು ಬೆಸ್ಕಾಂ ಸಿಬ್ಬಂದಿ ಕನಿಷ್ಠ 20 ದಿನ ಸಮಯ ತೆಗೆದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಹೆಜ್ಜಾಜಿ ಸೇರಿ ಹಲವೆಡೆ ಜನರೇಟರ್ ತರಿಸಿ ನೀರು ಹಾಯಿಸುತ್ತೇವೆ. ಒಮ್ಮೆ ಜನರೇಟರ್ ಬಾಡಿಗೆಗೆ ತಂದರೆ ಅವರಿಗೆ ಸಾವಿರಾರು ರುಪಾಯಿ ತೆರಬೇಕಾಗುತ್ತದೆ. ಕಿ.ಮೀ.ಗಟ್ಟಲೇ ತೋಟಗಳಿಗೆ ವೈರ್ ತರಬೇಕಾಗಿದೆ ಹಾಗಾಗ ವೈರ್ ಸುಟ್ಟು ಹೋಗುವುದರಿಂದ ಗಾಯದ ಮೇಲೆ ಬರೆ ಬಿದ್ದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…