
ಕೋಲಾರ: ಹಾಲು ಒಕ್ಕೂಟದಲ್ಲಿ ರಾಜಕೀಯ ಮಾಡದೆ ಸರ್ಕಾರದ ಮೇಲೆ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಒತ್ತಡ ಹಾಕಿ ಚುನಾವಣೆ ನಡೆಸಿ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಒಕ್ಕೂಟವನ್ನು ಉಳಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮೂಲಕ ಸ್ಥಳೀಯ ಜನಪ್ರಿಯ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿರವರನ್ನು ಒತ್ತಾಯಿಸಿದರು.
ಕೋಚಿಮುಲ್ನ ಅವ್ಯವಹಾರದ ಬಗ್ಗೆ ಶಾಸಕರ ಪ್ರತಿಕ್ರಿಯೆಗೆ ಹೇಳಿಕೆ ನೀಡಿದ ರವರು ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹಾಲು ಒಕ್ಕೂಟದಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ದಾಖಲೆ ಸಮೇತ ಹೇಳುತ್ತಿರುವ ಶಾಸಕರೇ ಎಂ.ವಿ.ಕೆ ಗೋಲ್ಡನ್ ಡೈರಿ ಹಾಗೂ ಹೊಳಲಿ ಗ್ರಾಮದ ಸರ್ಕಾರಿ 50 ಎಕರೆ ಗೋಮಾಳ ಮೇವು ಬೆಳೆಯಲು ಮೀಸಲಿಡಲು ಹಾಗೂ ಉದ್ಘಾಟನೆ ಸಮಯದಲ್ಲಿ ತಾವುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಭ್ರಷ್ಟಚಾರ ನಡೆಯುತ್ತಿದೆಯೆಂದು ಅವತ್ತಿನ ಕಾರ್ಯಕ್ರಮದಲ್ಲಿ ದ್ವನಿ ಎತ್ತದೆ ಇರಲು ಕಾರಣ ಏನೂ ಎಂದು ಶಾಸಕರನ್ನು ಪ್ರಶ್ನೆ ಮಾಡಿದರು.
ಸುಮಾರು 210 ಕೋಟಿ ಅನುದಾನದಲ್ಲಿ ಅಭಿವೃದ್ದಿಪಡಿಸುತ್ತಿರುವ ಎಂ.ವಿ.ಕೆ ಗೋಲ್ಡನ್ ಡೈರಿಯನ್ನು ನಿರ್ಮಾಣ ಮಾಡುತ್ತಿರುವುದರಲ್ಲಿ ಬಾರಿ ಅಕ್ರಮ ನಡೆಯುತ್ತಿದೆ ಜೊತೆಗೆ ಗುತ್ತಿಗೆದಾರರೇ ಒಕ್ಕೂಟದ ಪ್ರಭಾವಿಗಳು ಎಂದು ಆರೋಪ ಮಾಡುತ್ತಿರುವುದು ನ್ಯಾಯವೇ ನಿಜವಾದ ಗುತ್ತಿಗೆದಾರ ಆಂಧ್ರ ಮೂಲದವರಲ್ಲವೇ ಎಂದರು.
ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎಂದು ಹೇಳುತ್ತಿರುವ ತಾವುಗಳು ಅವ್ಯವಸ್ಥೆ ಬಗ್ಗೆ ರೈತ ಸಂಘ ನಿರಂತರವಾಗಿ ಹೋರಾಟ ಮಾಡುತ್ತಿರುವಾಗ ತಾವು ಏಕೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಒಕ್ಕೂಟದ ಅವ್ಯವಸ್ಥೆ ಬಗ್ಗೆ ಗಮನ ಸೆಳೆಯಲಿಲ್ಲ ಈಗ ಒಕ್ಕೂಟ ವಿಭಜನೆ ಆದ ನಂತರ ಕೊಚಿಮುಲ್ನಲ್ಲಿ ಬಾರಿ ಅವ್ಯವಹಾರ ನಡೆಯುತ್ತಿದೆ ಎಂದು ದಾಖಲೆ ಬಿಡುಗಡೆ ಮಾಡುತ್ತಿರುವ ಇಂದಿನ ರಹಸ್ಯವೇನು? ಒಕ್ಕೂಟ ವಿಭಜನೆ ಆದ ನಂತರ ಸರ್ಕಾರದ ಮೇಲೆ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಒತ್ತಡ ಹಾಕಿ ಹೆಚ್ಚಿನ ಅನುದಾನವನ್ನು ಒಕ್ಕೂಟವನ್ನು ಅಭಿವೃದ್ದಿಪಡಿಸದನ್ನು ಬಿಟ್ಟು ಒಂದೇ ಪಕ್ಷದ ಶಾಸಕರು ಆರೋಪ ಪ್ರತ್ಯಾರೋಪ ಮಾಡಿಕೊಂಡರೆ ಇನ್ನೂ ಒಕ್ಕೂಟವನ್ನು ಉಳಿಸುವವರು ಯಾರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಬಯಲುಸೀಮೆಯ ಲಕ್ಷಾಂತರ ರೈತ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ನೀಡಿರುವ ಒಕ್ಕೂಟ ಹಾಳಾಗದಂತೆ ಎಲ್ಲಾ ಶಾಸಕರು ಎಚ್ಚರ ವಹಿಸಬೇಕು ಏನೇ ಸಮಸ್ಯೆ ಇದ್ದರು ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಿ ಒಕ್ಕೂಟದ ಅಭಿವೃದ್ದಿಗೆ ಶ್ರಮಿಸಬೇಕೆಂದು ಕಿವಿ ಮಾತು ಹೇಳುವ ಜೊತೆಗೆ ಬಂಗಾರಪೇಟೆ ಶಿಬಿರ ಕಚೇರಿಗೆ ನೀಡಿರುವ ಜಾಗದಲ್ಲೂ 0.20 ಗುಂಟೆ ಸರ್ಕಾರಿ ಗೋಮಾಳ ಇದೆ. ಹಾಗಂತ ಶಿಬಿರ ಕಚೇರಿಯನ್ನು ನೆಲಸಮ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಒಕ್ಕೂಟದಿಂದ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಎಂ.ವಿ.ಕೆ ಗೋಲ್ಡನ್ ಡೈರಿ ಅಭಿವೃದ್ದಿಪಡಿಸುವ ಜೊತೆಗೆ 50 ಎಕರೆ ಜಮೀನಿನಲ್ಲಿ ಸೋಲರ್ ಘಟಕ, ಐಸ್ಕ್ರೀಂ ಘಟಕ, ಅದರಲ್ಲೂ ಪ್ರಮುಖವಾಗಿ ಮೊಟ್ಟಮೊದಲ ಬಾರಿಗೆ ಉಭಯ ಜಿಲ್ಲೆಗಳ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಧುನಿಕ 250 ಜನರ ವಿದ್ಯಾರ್ಥಿಗಳ ಸಾಮಾರ್ಥ್ಯದ ವಸತಿ ನಿಲಯವನ್ನು ಅಭಿವೃದ್ದಿಪಡಿಸುತ್ತಿರುವ ಒಕ್ಕೂಟದ ಉಳಿವಿಗಾಗಿ ಆರೋಪ ಪ್ರತ್ಯಾರೋಪಗಳನ್ನು ಬಿಟ್ಟು ಒಗ್ಗಟ್ಟಾಗಿ ಶ್ರಮಿಸುವ ಜೊತೆಗೆ ಆಕ್ರಮ ನಡೆದಿದ್ದರೆ ಸೂಕ್ತ ದಾಖಲೆಗಳೊಂದಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳುವ ಜೊತೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಅಗ್ರಹಿಸಿದರು.
ಪತ್ರಿಕಾ ಹೇಳಿಕೆ ನೀಡುವಾಗ ರಾಜ್ಯ ಮುಖಂಡ ಬಂಗವಾದಿ ನಾಗರಾಜ್ಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಪಾರಂಡಹಳ್ಳಿ ಮಂಜುನಾಥ್, ಅಪ್ಪೋಜಿರಾವ್, ಲಕ್ಷ್ಮಣ್, ರಾಮಸಾಗರ ವೇಣು, ಬಾಬು, ಕಾಮಸಮುದ್ರ ಮುನಿಕೃಷ್ಣ ಮುಂತಾದವರಿದ್ದರು.