ಕೊಹ್ಲಿ – ಡುಪ್ಲೆಸಿ ಭರ್ಜರಿ ಬ್ಯಾಟಿಂಗ್ : ಆರ್ ಸಿಬಿ ಶುಭಾರಂಭ

ಬೆಂಗಳೂರು: ಮೂರು ವರ್ಷಗಳ ಬಳಿಕ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹದಿನಾರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ನಾಯಕ ಪಾಫ್ ಡುಪ್ಲೆಸಿ ಅವರ ಶತಕದ ಜೊತೆಯಾಟದಿಂದ ಎಂಟು ವಿಕೆಟ್ ಗಳ ಭರ್ಜರಿ ಗೆಲುವು ಪಡೆಯಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ತಂಡದ ನಾಯಕ ಪಾಫ್ ಡುಪ್ಲೆಸಿ ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಆದರೆ ಶಿಸ್ತು ಬದ್ಧ ಬೌಲಿಂಗ್ ನಡೆಸಿದ ಆರ್ ಸಿಬಿ ಎದುರು ಬಲಿಷ್ಠ ಮುಂಬೈ ತಂಡದ ಬ್ಯಾಟಿಂಗ್ ಪಡೆ ಮಂಕಾಗಿತ್ತು.

ಆರಂಭಿಕ ಜೋಡಿ ನಾಯಕ ರೋಹಿತ್ ಶರ್ಮಾ (1), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (10) ಕ್ರಮವಾಗಿ ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಕೆಮರೂನ್ ಗ್ರೀನ್ ಹೆಚ್ಚು ಕಾಲ ನಿಲ್ಲಲಿಲ್ಲ, ಬೌಲರ್ ಟೊಪ್ಲಿಗೆ ವಿಕೆಟ್ ಒಪ್ಪಿಸಿದರು.

20 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದವರು ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಾದ ಸೂರ್ಯ ಕುಮಾರ್ ಯಾದವ್ (15) ಹಾಗೂ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (84) ರನ್ ಗಳಿಸಿ ತಂಡದ ಮೊತ್ತವನ್ನು 170 ರ ಗಡಿ ದಾಟಿಸಿದರು.

172 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ತಂಡಕ್ಕೆ ಈ ಮೊತ್ತ ಸವಾಲು ಎನಿಸಲಿಲ್ಲ, ಛೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ (82) ಹಾಗೂ ನಾಯಕ ಪಾಫ್ ಡುಪ್ಲೆಸಿ (73) ಮೊದಲ ವಿಕೆಟ್ ಜೊತೆಯಾಟಕ್ಕೆ 143 ರನ್ ಗಳಿಸಿದರು, ನಂತರ ಬಂದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (0) ನಿರಾಸೆ ಮೂಡಿಸಿದರು.

ವಿರಾಟ್ ಕೊಹ್ಲಿ ಜೊತೆಯಾದ ಮ್ಯಾಕ್ಸ್ ವೆಲ್ (12) ಗೆಲುವಿನ ದಡ ಸೇರಿಸಿದರು, ಮುಂಬೈ ತಂಡದ ಎಲ್ಲಾ ಬೌಲರ್‌ಗಳು ದುಬಾರಿಯಾದರು, ಉತ್ತಮ ಪ್ರದರ್ಶನ ತೋರಿದ ನಾಯಕ ಪಾಫ್ ಡುಪ್ಲೆಸಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *