ಕೊನಘಟ್ಟ ಗ್ರಾಮದಲ್ಲಿ ನಿಡುಗಲ್ ಚೋಳರ ಶಿಲಾಶಾಸನ ಪತ್ತೆ

ದೊಡ್ಡಬಳ್ಳಾಪುರ: ನಿಡುಗಲ್ ಚೋಳರು ಕ್ರಿ.ಶ.1556 ರಲ್ಲಿ ಯಲಹಂಕ ನಾಡನ್ನು ಅಮರನಾಯಕರಾಗಿ ಆಳ್ವಿಕೆ ನಡೆಸಿದ ಶಿಲಾಶಾಸನ ತಾಲ್ಲೂಕಿನ ಕೋನಘಟ್ಟ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಸಂಶೋಧಕ ಕೆ.ಆರ್.ಮಧುಸೂದನ್ ತಿಳಿಸಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊನಘಟ್ಟ ಗ್ರಾಮದ ಶಾಂತಮ್ಮ ಎಂಬುವವರ ಖಾಸಗಿ ನಿವೇಶನದಲ್ಲಿ ವಿಜಯನಗರ ಅರಸರಾದ ಸದಾಶಿವರಾಯರ ಕಾಲದ ಏಳು ಅಡಿ ಎತ್ತರ, 5 ಅಡಿ ಅಗಲ, 16 ಸಾಲುಗಳ ಶಿಲಾಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ, ಮಧ್ಯದಲ್ಲಿ ಶಂಖ, ಚಕ್ರ ಮತ್ತು ತಿರುನಾಮದ ಉಬ್ಬು ಶಿಲ್ಪವಿದೆ. ಇದರ ಕೆಳಗೆ ಶಾಸನದ ಪಾಠ ಪ್ರಾರಂಭವಾಗುತ್ತದೆ. ಈ ಪಾಠದಲ್ಲಿ ಶುಭಮಸ್ತು ಸಖ ವಿಜಯಾಭ್ಯುದಯ ಶಾಲಿವಾಹನ ಸಖ ವರುಷ 1478ನೇಯ ನಳ ಸಂವತ್ಸರದ ವಯಿಶಾಖ ಶ್ರೀಮನಂಹಾಮಂಡಲೆಸ್ಟ ಆಪ್ರತಿಕಮಲ್ಲ ಮನು ಬವಿಸವಯ ದೇವ ಚೋಳ ಮಹಾ ಅರಸುಗಳು ಬೊಳ ಚಪ್ಪರದ ನಾರಾಯಣ ಕಾಸಯ ಭಟರಿಗೆ ಕೊಟ್ಟ ಧರ್ಮ ಸಾಸನದ ಕ್ರಮವೆಂ ತೆಂದಡೆ ಶ್ರೀಮನಂ ಮಹಾ ರಾಜಾಧಿರಾಜ ರಾಜ ಪರಮೇಶ್ವರ ಶ್ರೀವೀರ ಪ್ರತಾಪ ಶ್ರೀ ಸದಾಶಿವರಾಯ ಮಹಾರಾಯರು ಪ್ರಿಥುವೀ ರಾಜ್ಯಂಗೆ ಯುಊತಿರೆ ಶ್ರೀ ಮನಂಹಾಮಂಡಳೇಶ್ವರ ರಾಮರಾಜಯ್ಯತ್ತಿರಲು ಮಹಾ ಅರಸುಗಳು ನಮಗೆ ಅಮರನಾಯಕತನಕ್ಕೆ ಪಾಲಿಸಿದ ಎಲಹಕ್ಕನಾಡ ನಾಡ.. .. ಸಲುವ ಕೊಣವರ ಆದ ಗ್ರಾಮದೊಳಗೆ ಸಲುವ ಚತುಸ್ತೀ ಮೆಯೊಳಗಾದ ನಿಧಿ ನಿಕ್ಷೇಪ ಜಲ ಪಾಠಾಣ ಅಕ್ಷಿಣಿ ಆಗಾಮಿಸಿಧಿ ಸಾಧ್ಯ ಅಷ್ಟಭೋಗ ತೇಜಸಾಮ್ಯವನ್ನು ಅನುಮಾಡಿಕೊಂಡು … ಆರ ಲರನು ತಿರು ವಂಗಳನಾತನ ತಿ..ಯಾದ.. ಬೊಳಚಪ್ಪಾರ ಪರುಸೆಯನ್ನು ನಡೆಸಿಕೊಂಡು ಸ್ವಾಮಿಯ ಸೇವೆಯನ್ನು ಮಾಡಿಕೊಂಡು ಪುತ್ರ ಪಉತ್ರ ಪರಂಪರೆ ಆ ಚಂದ್ರಾ ರ್ಕಸ್ಥಾಯಿಯಾಗಿ ಅನುಭವಿಸಿಉದುಕೊಂಡು ಕೊಟ್ಟ ಧರ್ಮ ಸಾಸನ ದಾನ ಪಾಲನ ಯೋರ್ಮಧೈದಾನಾ ಛೇಯೋನ ಪಾಲನಂದಾನಾಡ್ನರ್ಗಮ ಮುಂದೆ ಕಾಣುವುದಿಲ್ಲ ಮಣ್ಣಿನಲ್ಲಿ ಮುಚ್ಚಿದೆ.

ಶಿಲಾ ಶಾಸನದ ಸಾರಾಂಶ:

ವಿಜಯನಗರ ಅರಸರಾದ ಸದಾಶಿವರಾಯರು ರಾಜ್ಯ ಆಳ್ವಿಕೆಯ ಮಾಡುವಾಗ ಮಹಾಮಂಡಲೇಶ್ವರನಾದ ಶ್ರೀಮನ್ ರಾಮರಾಯರು ಯಲಹಂಕನಾಡಿನ ಅಮರನಾಯಕತನವನ್ನು ಆಪ್ರತಿಕಮಲ್ಲ ಬಿರುದಾಂಕಿತ ಮಹಾಮಂಡಲೇಶ್ವರನಾದ ಬವಿಸವಯದೇವ ಚೋಳ ಮಹಾ ಅರಸು ಇವರಿಗೆ ನೀಡಿರುವುದು ದಾಖಲಿಸಲಾಗಿದೆ. ಬವಿಸವಯ ದೇವಚೋಳ ಮಹಾ ಅರಸರು ಯಲಹಂಕ ನಾಡಿನ ಕೊಣವರ ಅಂದರೆ ಇಂದಿನ ಕೋನಘಟ್ಟ ಗ್ರಾಮದ ಚತುರ್ಸಿಮೆಯನ್ನು ಇಲ್ಲಿನ ಬೊಳಚಪ್ಪರದ ನಾರಾಯಣ ಕಾಸಯ ಭಟರಿಗೆ ತಿರುವೆಂಗಳನಾಥನ ಬೋಳಚಪ್ಪರದ ಪರುಷೆಯನ್ನು, ಸ್ವಾಮಿಯ ಸೇವೆಯನ್ನು ಮಾಡಿಕೊಂಡು ಪುತ್ರ ಪಉತ್ರ ಪರಂಪರೆ ಆ ಚಂದ್ರಾರ್ಕಸ್ಥಾಯಿಯಾಗಿ ಅನುಭವಿಸಿಕೊಂಡು ಹೋಗಲು ಕೊಟ್ಟ ಧರ್ಮ ಶಾಸನ, ಕೊನೆಯಲ್ಲಿ ಸಂಸ್ಕೃತದಲ್ಲಿ ಶಾಪಾಶಯ ಇದೆ.

ಚೋಳ ಮಹಾ ಅರಸುರುಗಳು ಈ ಶಿಲಾಶಾಸನದಲ್ಲಿ ಮಹಾಮಂಡಲೇಶ್ವರನಾಗಿರುವ ಬವಿಸವಯದೇವ ಚೋಳ ಮಹಾಆರಸು ಈತನಿಗೂ ನಿಡುಗಲ್ ಚೋಳರ ವಂಶಾವಳಿಯಲ್ಲಿ ಸಂಪರ್ಕ ಇಲ್ಲದೇ ಇದ್ದರೂ ಸಹ ನಿಡುಗಲ್ಲಿನ ಚೋಳರ ಮೂಲದವರೆಂದು ಗುರುತಿಸಬಹುದಾಗಿದೆ. ನಿಡುಗಲ್ ಚೋಳರನ್ನು ಕರ್ನಾಟಕದ ಕನ್ನಡ ಚೋಳರೆಂದು ಗುರುತಿಸಬಹುದಾಗಿದೆ. ರಾಜ್ಯದ ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ ಪರಿಸರದಲ್ಲಿ 8ನೇ ಶತಮಾನದಿಂದ 16ನೇ ಶತಮಾನದವರೆಗೆ ಆಳ್ವಿಕ ಪ್ರಾರಂಭಿಸಿ ವಿಜಯನಗರದ ಅರಸರ ಕಾಲಘಟ್ಟದಲ್ಲಿಯೂ ಆಳ್ವಿಕೆ ಮಾಡಿರುವುದು ಶಾಸನೋಕ್ತವಾಗಿ ದಾಖಲಾಗಿರುತ್ತದೆ. ಇವರು ಗಂಗ ಮತ್ತು ಪಲ್ಲವರ ಸಮಕಾಲೀನರು. ಇವರ ಶಾಸನಗಳಲ್ಲಿ ಕರಿಕಾಲನಚೋಳನ ವಂಶಸ್ಥರು, ಕರ್ನಾಟ ಕರ್ಣರತ್ನ ಮೇಲಂಕಕಾರ, ಅರವತ್ನಾಲ್ಕು ಮಾಡಲೀಕರ ತಲೆಗೊಂಡಗಂಡ, ಭಂಟರಬಾವ, ಸಿಂಘಲಾಂಛನ, ಸಿಖಿಸಿಖಾ ಧ್ವಜ(ಅಗ್ನಿ-ದ್ವಜ), ಮಹಾಆರಸರುಗಳು ಇನ್ನೂ ಅನೇಕ ಬಿರುದುಗಳನ್ನು ಧರಿಸಿ ಆಳ್ವಿಕೆಯ ಮಾಡಿರುವ ಹಲವಾರು ಶಾಸನಗಳು ದಾಖಲಾಗಿವೆ.

ಚಿತ್ರದುರ್ಗದ ಹಿರಿಯೂರು ಶಾಸನ-22 ಕ್ರಿ.ಶ.1554ರಲ್ಲಿ ಮಹಾ ಮಂಡಲೇಶ್ವರನಾದ ಅಪ್ರತಿಕಮಲ್ಲ ಸೂರ್ಯವಂಶಾಧಿಶ್ವರನಾದ ಅಹುಭಳರಾಜನ ಮೊಮ್ಮಗ,ವೆಂಗಳರಾಜನ ಮಗ ಪಾಪೈದೇವ ಚೊಳ ಮಹಾಆರಸು ದಾನ ನೀಡಿರುವುದರ ಬಗ್ಗೆ ದಾಖಲಾಗಿದೆ. ಅದೇ ರೀತಿ ಬೆಂಗಳೂರು ಶಾಸನ ಸಂಪುಟ ನೆಲಮಂಗಲ ಶಾಸನ 72 ಕ್ರಿಶ. 1551ರಲ್ಲಿ ಬಿಲ್ಲಿನಕೋಟೆ ಶಾಸನದಲ್ಲಿ ಸದಾಶಿವರಾಯರಿಗೆ ತಮ್ಮ ತಂದೆತಾಯಿಗಳಿಗೆ ಪುಣ್ಯವಾಗಲೆಂದು ಮಹಾ ಮಂಡಲೇಶ್ವರನಾದ ಶ್ರೀರಾಜಅಹುಬಳರಾಜ ಮಹಾಆರಸು ದಾನ ನೀಡಿರುವುದು ದಾಖಲಾಗಿದೆ. ಇವರ ಬಗ್ಗೆ ಮೈಸೂರು ಗ್ಯಾಸೆಟಿಯರ್ನಲ್ಲಿ ನಿಡುಗಲ್ ಚೋಳರ ವಂಶಿಕರು ಎಂದು ಹಯವದನರಾವ್ರವರು ವಿವರಿಸಿದ್ದಾರೆ.

ಅದೇ ರೀತಿಯಾಗಿ ಕೋನಘಟ್ಟ ಅಪ್ರಕಟಿತ ಶಿಲಾಶಾಸನದಲ್ಲಿ ಮಹಾಮಂಡಲೇಶ್ವರ ಬವಿಸವಯದೇವ ಚೋಳ ಮಹಾ ಅರಸುರುಗಳು ಎಂದು ದಾಖಲಾಗಿರುವುದನ್ನು ಗಮನಿಸಿದರೆ ಈತನೂ ಸಹ ಇದೇ ನಿಡುಗಲ್ ಚೋಳರ ವಂಶಿಕ ಎಂದು ದೃಡವಾಗಿ ಪರಿಗಣಿಸಬಹುದಾಗಿದೆ. ಅಂದರೆ ಕ್ರಿಶ. 1556ರಲ್ಲಿ ನಿಡುಗಲ್ ಚೋಳ ಮಹಾ ಅರಸರುಗಳಿಗೆ ಸದಾಶಿವರಾಯರ ಕಾಲದಲ್ಲಿ ಯಲಹಂಕನಾಡಿನ ಅಮರನಾಯತನ ದೊರಕಿರುವುದರ ವಿಶೇಷವಾದ ಶಾಸನವೆಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.

Ramesh Babu

Journalist

Recent Posts

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

43 seconds ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

8 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

10 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

21 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

1 day ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

1 day ago