ಕೆಪಿಟಿಸಿಎಲ್ ನೌಕರಿ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ

ಹೊನ್ನಾವರ: ಇಂಧನ ಇಲಾಖೆಯಲ್ಲಿ (KPTCL) ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆ ಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಪಡೆದು ವಂಚಿಸಿದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2022ನೇ ಸಾಲಿನಲ್ಲಿ ಈ ಪ್ರಕರಣ ನಡೆದಿದ್ದು ಆರೋಪಿಗಳು ದೂರುದಾರರ ಅಕ್ಕನ ಮಗನಿಗೆ ಕೆಪಿಟಿಸಿಎಲ್ ಇಲಾಖೆಯಲ್ಲಿ ‘ಸೆಕೆಂಡ್ ಡಿವಿಷನ್ ಕ್ಲರ್ಕ್’ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ದೂರುದಾರರಿಂದ ಹಂತ ಹಂತವಾಗಿ ಬ್ಯಾಂಕ್ ಮೂಲಕ ಹಾಗೂ ನಗದು ರೂಪದಲ್ಲಿ ಒಟ್ಟು 15,00,000 ರೂ. ಹಣವನ್ನು ಪಡೆದುಕೊಂಡಿದ್ದರು.

ಆದರೆ, ಹಣ ಪಡೆದ ನಂತರ ಆರೋಪಿಗಳು ಯಾವುದೇ ಕೆಲಸವನ್ನೂ ಕೊಡಿಸದೆ, ಪಡೆದ ಹಣವನ್ನೂ ಮರಳಿಸದೆ ಸತಾಯಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಹೊನ್ನಾವರ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ನವೆಂಬರ್ 15 ರಂದು ಬೆಂಗಳೂರಿಗೆ ತೆರಳಿದ ತಂಡವು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ವಿಜಯ ಕುಮಾರ್ ಕೆ (44): ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ (ವೃತ್ತಿ: ಕೆಟರಿಂಗ್ ಕೆಲಸ) ಮತ್ತು ವಿಜಯ ಸಿ (46): ಬೆಂಗಳೂರಿನ ಜಯನಗರ/ಬನಶಂಕರಿ ನಿವಾಸಿ (ವೃತ್ತಿ: ಫುಡ್ ಡೆಲಿವರಿ) ಬಂಧಿತ ಆರೋಪಿಗಳು.

ಆರೋಪಿಗಳನ್ನು ನವೆಂಬರ್ 16 ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಹಣ ಪಡೆದು ವಂಚಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿಗಳಾದ ಜಿ. ಕೃಷ್ಣಮೂರ್ತಿ, ಎಮ್. ಜಗದೀಶ್ ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ ಕೆ ಅವರ ಮಾರ್ಗದರ್ಶನದಲ್ಲಿ, ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ತಂಡದಲ್ಲಿ ಎಎಸ್‌ಐ ಗಿರೀಶ ಶೆಟ್ಟಿ, ಸಿಬ್ಬಂದಿಗಳಾದ ಮನೋಜ ಡಿ, ರವಿ ನಾಯ್ಕ, ಗಜಾನನ ನಾಯ್ಕ, ವಿಠಲ ಗೌಡ ಮತ್ತು ಚಂದ್ರಶೇಖರ ನಾಯ್ಕ ಅವರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!