ಲೈಂಗಿಕ ಕಿರುಕುಳದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸಿ ಹಾಗೂ ಲೈಂಗಿಕ ಕಿರುಕುಳದ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಡಾ.ಬಿಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಿತು
ಈ ವೇಳೆ ಮಾತನಾಡಿದ ಪ್ರಾಂತ ರೈತ ಸಂಘದ ಆರ್ ಚಂದ್ರತೇಜಸ್ವಿ, ಒಲಂಪಿಕ್ ಪದಕ ವಿಜೇತರು ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಹೆಮ್ಮೆಯ ಕುಸ್ತಿ ಕ್ರೀಡಾಪಟುಗಳು: 2023 ಏಪ್ರಿಲ್ 24 ರಿಂದ ನವದೆಹಲಿಯ ಜಂತರ್ ಮಂಥರ್ ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪೊಲೀಸ್ ದೂರು ನೀಡಿದ್ದರೂ ಎಫ್.ಐ.ಆರ್ ದಾಖಲಾಗಿರಲಿಲ್ಲ ಸುಪ್ರೀಂ ಕೋರ್ಟ್ ನ ಮಧ್ಯ ಪ್ರವೇಶದ ನಂತರವಷ್ಟೇ ಎಫ್ ಐ ಆರ್ ದಾಖಲಾಗಿದೆ. ಈ ಪ್ರತಿಭಟನಾನಿರತ ಕುಸ್ತಿಪಟುಗಳು ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಮಾತ್ರ ಕೇಳುತ್ತಿದ್ದಾರೆ ಹಾಗೂ ಕುಸ್ತಿ ಪಟುಗಳ ಆರೋಪದ ಹಿನ್ನೆಲೆಯಲ್ಲಿ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅವಗಾಹನೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿಗಳು, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಪ್ರಖ್ಯಾತ ಮಹಿಳಾ ಕುಸ್ತಿ ಪಟುಗಳನ್ನು ಲೈಂಗಿಕ ಕಿರುಕುಳ ಹಾಗೂ ಹಿಂಸೆಗೆ ಒಳಪಡಿಸಿರುವುದು ಅತ್ಯಂತ ಅಘಾತಕಾರಿ ಮತ್ತು ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ.
‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಪ್ರಚಾರ ಮಾಡುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹೀನ ಅಪರಾಧದ ಆರೋಪಿ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ದೂರಿನ ಆಧಾರದಲ್ಲಿ ಕಾನೂನು ಕ್ರಮ ಜರುಗಿಸಿ ನೊಂದ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ಮೇಲೆ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ.
ಒಂದು ವಾರದ ಹಿಂದೆ ದೆಹಲಿ ಪೊಲೀಸರು ಕುಡಿದು ಬಂದು ಪ್ರತಿಭಟನಾ ಕಾರರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಷ್ಟೆಲ್ಲಾ ಕಿರುಕುಳದ ಮಧ್ಯೆಯೂ ನ್ಯಾಯ ಸಿಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟಿಸುತ್ತಿರುವುದು ಅತ್ಯಂತ ಪ್ರಶಂಸನೀಯ ಹಾಗೂ ಅಭಿನಂದನಾರ್ಹವಾಗಿದೆ ಎಂದರು
ನೂತನ ಸಂಸತ್ ಕಟ್ಟಡ ಉದ್ಘಾಟನೆ ದಿನ ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ ಬೆಂಬಲದೊಂದಿಗೆ ಮಹಿಳಾ ಗೌರವ ರಕ್ಷಣೆಗಾಗಿ ಮಹಾ ಪಂಚಾಯತ್ ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗಿತ್ತು. ಸಂಸತ್ ನ ನೂತನ ಕಟ್ಟಡದ ಒಳಗಡೆ ಆರೋಪಿ ಬಿಜೆಪಿ ಸಂಸದ ಅತಿ ಗಣ್ಯ ಅತಿಥ್ಯ ಪಡೆಯುತ್ತಿರುವಾಗಲೇ ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ಹೀನಾಯ ದೌರ್ಜನ್ಯ ನಡೆಸಲಾಗಿದೆ.
ಪ್ರಜಾಪ್ರಭುತ್ವದ ಹೆಮ್ಮೆಯ ಸಂಸ್ಥೆಯಾದ ಸಂಸತ್ತಿನಲ್ಲಿ ಸಂವಿಧಾನದ ನೀತಿ: ಸಡಾವಳಿಗೆ ವಿರುದ್ಧವಾಗಿ, ಪುರುಷ ಅಹಂಕಾರವನ್ನು ಸಮರ್ಥಿಸುವ ಪುರೋಹಿತಶಾಹಿ ಯಜಮಾನಿಕೆಯನ್ನು ಸಂಕೇತಿಸುವ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದಾರೆ.
ರಾಜಸತ್ತೆಯ ಸಂಕೇತದ ಮ್ಯೂಸಿಯಂ ನಲ್ಲಿದ್ದ ರಾಜದಂಡವನ್ನು ಸಂಸತ್ತಿನ ಸ್ಪೀಕರ್ ಪೀಠ ದ ಬಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ನ್ಯಾಯ ಹಾಗೂ ಕಾನೂನು ಜಾರಿಗೆ ಅಗ್ರಹಿಸುತ್ತಾ ಸುಮಾರು ಕಳೆದ ಒಂದೂವರೆ ತಿಂಗಳಿಂದ ಪ್ರತಿಭಟಿಸುತ್ತಿರುವ ದೇಶದ ಹೆಮ್ಮೆಯ ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಇದು ಹೊಸ ಸಂಸತ್ತಿನ ಮುಂದಿನ ಕಾರ್ಯವಿಧಾನದ ಸಂಕೇತದಂತೆ ಗೋಚರಿಸುತ್ತಿದೆ. ಇದು ನಮ್ಮ ಸಂವಿಧಾನ ಪರಂಪರೆಗೆ ಆಗಿರುವ ಗಂಭೀರ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಲೈಂಗಿಕ ಕಿರುಕುಳ ಹಾಗೂ ಹಿಂಸೆ ಕೊನೆಗಾಣಬೇಕು ಇದಕ್ಕಾಗಿ ದೇಶದ ಎಲ್ಲಾ ನಾಗರಿಕರು ಈ ಪ್ರತಿಭಟನೆಯನ್ನು ಬೆಂಬಲಿಸಬೇಕು. ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದು ನಮ್ಮ ದೇಶಕ್ಕೆ ಕೀರ್ತಿ ತಂದವರ ಮೇಲೆ ಇಷ್ಟು ಕಿರುಕುಳ ಅದರೆ ಇನ್ನು ಸಾಮಾನ್ಯ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಹೇಳುವುದು ಹೇಗೆ ಎಂಬ ಪ್ರಶ್ನೆ ಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕಾಗುತ್ತದೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ಹೆಮ್ಮೆಯ ಪದಕಗಳನ್ನು ದೇಶಕ್ಕಾಗಿ ಗೆದ್ದವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಅತ್ಯಂತ ನಾಟೀಕೆಗೇಡಿನ ಸಂಗತಿಯಾಗಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ನೊಂದ ಕ್ರೀಡಾಪಟುಗಳು ಬಿಜೆಪಿ ಸರ್ಕಾರದ ಬೇಜವಾಬ್ದರಿ ಕ್ರಿಮಿನಲ್ ದೌರ್ಜನ್ಯ ದಿಂದ ಮತ್ತಷ್ಟು ನೊಂದು ಕಣ್ಣೀರು ಹಾಕುತ್ತಿದ್ದಾರೆ. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುವ ನಮ್ಮ ದೇಶಕ್ಕೆ ಇದು ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲ್ಲೂಕು ಕಚೇರಿಗೆ ತೆರಳಿ ದೇಶಕ್ಕೆ ಕೀರ್ತಿ ತರುವ ಸಾಮಾರ್ಥ್ಯದ ಕ್ರೀಡಾಪಟುಗಳ ಸ್ಥೈರ್ಯ ಕುಂದಿಸುವ ಕೆಲಸವನ್ನು ಈ ಕೂಡಲೇ ಬಿಜೆಪಿ ಸರ್ಕಾರ ನಿಲ್ಲಿಸಬೇಕು . ಈ ಕೂಡಲೇ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನಡೆಸಿರುವ ಅರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ರನ್ನು ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಪೋಕ್ಸೋ ಕಾಯ್ದೆಯಡಿ ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ರವರ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಡಾ.ಶ್ರೀನಿವಾಸ್, ಸಿ.ರಾಮಕೃಷ್ಣ ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ, ಪ್ರಜಾವಿಮೋಚನಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಗೂಳ್ಯ ಹನುಮಣ್ಣ, ಸಿಪಿಐಎಂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡರಾದ ರೇಣುಕಾರಾಧ್ಯ, ಪತ್ರಕರ್ತ ರಾಜುಸಣ್ಣಕ್ಕಿ, ಮಾಜಿ ನಗರಸಭಾ ಸದಸ್ಯೆ ವಸುಂದರಾರೆಡ್ಡಿ, ಯುಶಕ್ತಿ ಕರ್ನಾಟಕದ ಜೆ.ಆಶಾರಾಣಿ, ಮಹಿಳಾ ಮುಖಂಡರಾದ ಕವಿತ, ಸರೋಜ, ದೇವಕಿ ರಾಜ್ಯ ಮಟ್ಟದ ಕ್ರೀಡಾಪಟು ಡಿಆರ್.ಸಂಗೀತಾ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಡಿಹೆಚ್ಎಸ್ನ ಮಂಜುನಾಥ್, ಎಸ್ಎಫ್ಐನ ತಾಲ್ಲೂಕು ಅಧ್ಯಕ್ಷ ನಟರಾಜು ದಲಿತ ಸಂಘಟನೆಯ ಮೈಲಾರಪ್ಪ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು, ಕ್ರೀಡಾಪಟುಗಳು ಭಾಗವಹಿಸಿದ್ದರು