ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಪ್ರಯಾಣಿಕನಿಂದ ₹ 3.44 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಆರೋಪಿಯೂ ಕುರುಡನಾಗಿದ್ದು (ಕಣ್ಣು ಇಲ್ಲದವ) ಕಳೆದ ಮಂಗಳವಾರ (ಮಾರ್ಚ್ 4) ದಂದು 3 ಕೆ.ಜಿ 995 ಗ್ರಾಂ ಚಿನ್ನದ ಆಭರಣವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದಿದ್ದಾನೆ.
ಕುರುಡನಾಗಿರುವುದನ್ನೇ ಅನುಕೂಲ ಮಾಡಿಕೊಂಡಿದ್ದ ಆರೋಪಿಯೂ, ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನವನ್ನು ಸಾಗಿಸುವ ಸಂಚು ರೂಪಿಸಿದ್ದು, ಆತನು ಧರಿಸಿದ್ದ ಅಂಗಿಯ ಒಳಗೆ ಮುಚ್ಚಿಟ್ಟು ಕೊಂಡು ಚಿನ್ನವನ್ನು ಕಳ್ಳ ಸಾಗಣೆಗೆ ಯತ್ನಿಸಿದ್ದ.
ಇತನ ವರ್ತನೆ ಮೇಲೆ ಅನುಮಾನ ಬಂದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.