ಕುಡಿಯುವ ನೀರು ನೀಡದಿದ್ದರೆ ಚುನಾವಣಾ ಬಹಿಷ್ಕಾರ ಗ್ಯಾರಂಟಿ- ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರ ಎಚ್ಚರಿಕೆ

ತಾಲೂಕಿನ ಅರ್ಕಾವತಿ ನದಿಪಾತ್ರದ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಚಿಕ್ಕತುಮಕೂರಿನ ಕೆರೆಗಳು ಕಲುಷಿತವಾಗಿರುವುದಷ್ಟೇ ಅಲ್ಲದೇ ಕೊಳವೆಬಾವಿಗಳ ನೀರು, ಶುದ್ಧೀಕರಣದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಶುದ್ಧೀಕರಣ ಮಾಡುವ ಬಗ್ಗೆ ನಿರಂತರ ಹೋರಾಟಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದು, ಸಮಸ್ಯೆ ಬಗೆಹರಿಯುವ ಲಿಖಿತ ಭರವಸೆ ದೊರೆಯದಿದ್ದರೆ, ಚುನಾವಣಾ ಪ್ರಚಾರಕ್ಕೆ ಯಾರನ್ನೂ ಗ್ರಾಮಕ್ಕೆ ಬಿಡುವುದಿಲ್ಲ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಟಿ.ಎಚ್.ಆಂಜಿನಪ್ಪ, ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮತ್ತು ಕಾರ್ಖಾನೆಗಳ ತ್ಯಾಜ್ಯ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ಧೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಬರಿ ಕೆರೆ ನೀರು ಅಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ಧೀಕರಣದ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ ಎಂದರು.

ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ನೀರು ಶುದ್ಧೀಕರಿಸುವ ಕಾರ್ಯ ಇನ್ನು ಕೈಗೊಂಡಿಲ್ಲ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರು. ಅದು ಈವರೆಗೂ ಭರವಸೆಯಾಗಿಯೇ ಉಳಿದಿದೆ. ರಾಸಾಯನಿಕಯುಕ್ತ ಕಲುಷಿತ ನೀರಿನಿಂದಾಗಿ ಕ್ಯಾನ್ಸರ್,  ಕಿಡ್ನಿ ಸಮಸ್ಯೆಗಳು ಕಾಡುತ್ತಿವೆ. ಇದು ಮುಂದಿನ ಪೀಳಿಗೆಗೂ ಹರಡುವ ಅಪಾಯಗಳಿವೆ. ಒಳಚರಂಡಿ ನೀರಿಗೆ ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದರು.

ನಂತರ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಣ್ಣ ಪ್ರಕರಣಗಳಿಗೆ ಗ್ರಾಮಗಳಿಗೆ ಧಾವಿಸುವ ಅಕಾರಿಗಳು ಇಂತಹ ಗಂಭೀರ ಸ್ಥಿತಿ ಇದ್ದರೂ ಏಕೆ ಬರುತ್ತಿಲ್ಲ. ಚುನಾವಣಾ ಬಹಿಷ್ಕಾರ ಶತಸಿದ್ಧವಾಗಿದ್ದು,  ನಮ್ಮ ಕೂಗು ಕೇಂದ್ರಕ್ಕೆ ಮುಟ್ಟಬೇಕಿದೆ ಎಂದರು.

ಹಿರಿಯ ಮುಖಂಡರಾದ ತಿ.ರಂಗರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಹರಿಸುತ್ತಿರುವ ಕೆ.ಸಿ.ವ್ಯಾಲಿ ನೀರು ಸಹ ಕಲುಷಿತವಾಗಿರುವ ವರದಿಗಳು ಬಂದಿವೆ. ಈ ದಿಸೆಯಲ್ಲಿ ಶುದ್ಧೀಕರಣ ಮೂರು ಹಂತದಲ್ಲಿ ಆಗಲೇಬೇಕಿದೆ ಎಂದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಮಳೆ ನೀರಿನ ಹೊರತಾಗಿ ಇಲ್ಲಿನ ಯಾವುದೇ ಕೊಳವೆ ಬಾವಿ ನೀರು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಹಸುಗಳ ಹಾಲು ಸಹ ಕಲುಷಿತವಾಗಿದ್ದು, ಸಮಸ್ಯೆ ತೀವ್ರವಾಗಿದೆ ಎಂದರು.

ಮಜರಾಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ನಾರಾಯಣಮೂರ್ತಿ ಮಾತನಾಡಿ, ಗ್ರಾಮಸ್ಥರಿಂದ ಕಲುಷಿತ ನೀರಿನ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದ್ದು, ಹೋರಾಟಕ್ಕೆ ತಮ್ಮ ಸಹಮತವಿರುವುದಾಗಿ ತಿಳಿಸಿದರು.

ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರಾದ ಸತೀಶ್, ವಸಂತ ಕುಮಾರ್, ರಮೇಶ್ ಮಾತನಾಡಿ,  ಕಲುಷಿತ ನೀರಿನಿಂದ ಹಲವಾರು ರೋಗ ರುಜಿನಗಳು ಹರಡುತ್ತಿವೆ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರೂ ಭರವಸೆ ಈಡೇರಿಲ್ಲ. ಎರಡನೇ ಹಂತದ ಶುದ್ಧೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಎರಡನೇ ಹಂತದ ಶುದ್ಧೀಕರಣ ಘಟಕವನ್ನು ಕೈ ಬಿಟ್ಟು ಮೂರನೇ ಹಂತದ ಶುದ್ಧೀಕರಣ ಘಟಕ ಮಾಡಬೇಕು. ನೀರು ನಮ್ಮ ಮೂಲಭೂತ ಹಕ್ಕು ಆಗಿರುವುದರಿಂದ ಸರ್ಕಾರ ಜನರಿಗೆ ಶುದ್ಧೀಕರಣದ ಕುಡಿಯುವ ನೀರು ಕೊಡಲು ಸಾಧ್ಯವಾಗದೇ ಇರುವುದರಿಂದ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಪಕ್ಷಾತೀತವಾಗಿ, ಗ್ರಾಮದ ರಾಜಕೀಯ ಮುಖಂಡರು, ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆಯಲ್ಲಿನ ಹಕ್ಕೊತ್ತಾಯಗಳು : 

ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರನ್ನು ಮೂರನೇ ಹಂತ ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು, ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆ  ಮಾಡಬೇಕೆಂದು ತಿಳಿಸಿದ್ದರೂ ಕೆಲವೇ ಹಳ್ಳಿಗಳಿಗೆ ಮಾತ್ರ ನೀರು ದೊರೆಯುತ್ತಿದ್ದು, ಎಲ್ಲಾ ಹಳ್ಳಿಗಳಿಗೂ ದೊರೆಯಬೇಕು.

ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ದು ಪದ್ಧತಿಯನ್ನು ಸಂಪೂರ್ಣ ವೆಚ್ಚ ಸರ್ಕಾರವೇ ಕೊಟ್ಟು ಅಥವಾ ಕಾರ್ಖಾನೆಗಳ ಧನ ಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ದು ಪದ್ಧತಿಯನ್ನು ಮಾಡಿಕೊಡಬೇಕು.

ಎರಡು ಪಂಚಾಯ್ತಿಗಳಲ್ಲಿ ಈಗಾಗಲೇ ಅನೇಕ ಜನಗಳಿಗೆ ಕ್ಯಾನ್ಸರ್ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತವರಿಗೆ ಮತ್ತು ಮುಂದೆ ಯಾರಿಗೆ ಸಮಸ್ಯೆ ಕಂಡು ಬಂದರೂ ಸರ್ಕಾರದಿಂದ ಅಂತವರಿಗೆ ನರವು ನೀಡಬೇಕು.

ಜನ, ಜಾನುವಾರುಗಳಿಗೆ ಈ ಹಿಂದೆ ಸಭೆಯಲ್ಲಿ ತಿಳಿಸಿದಂತೆ 12 ಕಿ.ಮೀ ದೂರದಿಂದ ಕೊಳವೆ ಬಾವಿಗಳ ನೀರನ್ನು ತಂದು ಜನರು ಉಪಯೋಗಿಸಲು ಮತ್ತು ಜನ ಜಾನುವಾರುಗಳು ಕುಡಿಯಲು ಅನುಕೂಲ ಮಾಡಿಕೊಡಬೇಕು.

ಸಭೆಯಲ್ಲಿ ಕೆರೆ ಹೋರಾಟ ಸಮಿತಿಯ ಮುಖಂಡರಾದ ಬಿ.ಎಚ್.ಕೆಂಪಣ್ಣ, ಆದಿತ್ಯ ನಾಗೇಶ್, ಚಿಕ್ಕಣ್ಣಪ್ಪ, ಸಂದೇಶ್, ಷಣ್ಮುಖಾಚಾರ್, ಟಿ.ಜಿ.ಮಂಜುನಾಥ್, ಲೀಲಮ್ಮ ಪಿಳ್ಳೇಗೌಡ, ರಾಮ್‍ದಾಸ್, ಸಂದೇಶ್, ಚೈತ್ರ ಭಾಸ್ಕರ್, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಹಾಜರಿದ್ದರು.

Ramesh Babu

Journalist

Recent Posts

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

3 hours ago

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…

4 hours ago

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ- ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…

10 hours ago

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್…

11 hours ago

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

16 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

1 day ago