ಕುಡಿಯುವ ನೀರು ನೀಡದಿದ್ದರೆ ಚುನಾವಣಾ ಬಹಿಷ್ಕಾರ ಗ್ಯಾರಂಟಿ- ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರ ಎಚ್ಚರಿಕೆ

ತಾಲೂಕಿನ ಅರ್ಕಾವತಿ ನದಿಪಾತ್ರದ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಚಿಕ್ಕತುಮಕೂರಿನ ಕೆರೆಗಳು ಕಲುಷಿತವಾಗಿರುವುದಷ್ಟೇ ಅಲ್ಲದೇ ಕೊಳವೆಬಾವಿಗಳ ನೀರು, ಶುದ್ಧೀಕರಣದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಶುದ್ಧೀಕರಣ ಮಾಡುವ ಬಗ್ಗೆ ನಿರಂತರ ಹೋರಾಟಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದು, ಸಮಸ್ಯೆ ಬಗೆಹರಿಯುವ ಲಿಖಿತ ಭರವಸೆ ದೊರೆಯದಿದ್ದರೆ, ಚುನಾವಣಾ ಪ್ರಚಾರಕ್ಕೆ ಯಾರನ್ನೂ ಗ್ರಾಮಕ್ಕೆ ಬಿಡುವುದಿಲ್ಲ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಟಿ.ಎಚ್.ಆಂಜಿನಪ್ಪ, ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮತ್ತು ಕಾರ್ಖಾನೆಗಳ ತ್ಯಾಜ್ಯ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ಧೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಬರಿ ಕೆರೆ ನೀರು ಅಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ಧೀಕರಣದ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ ಎಂದರು.

ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ನೀರು ಶುದ್ಧೀಕರಿಸುವ ಕಾರ್ಯ ಇನ್ನು ಕೈಗೊಂಡಿಲ್ಲ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರು. ಅದು ಈವರೆಗೂ ಭರವಸೆಯಾಗಿಯೇ ಉಳಿದಿದೆ. ರಾಸಾಯನಿಕಯುಕ್ತ ಕಲುಷಿತ ನೀರಿನಿಂದಾಗಿ ಕ್ಯಾನ್ಸರ್,  ಕಿಡ್ನಿ ಸಮಸ್ಯೆಗಳು ಕಾಡುತ್ತಿವೆ. ಇದು ಮುಂದಿನ ಪೀಳಿಗೆಗೂ ಹರಡುವ ಅಪಾಯಗಳಿವೆ. ಒಳಚರಂಡಿ ನೀರಿಗೆ ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದರು.

ನಂತರ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಣ್ಣ ಪ್ರಕರಣಗಳಿಗೆ ಗ್ರಾಮಗಳಿಗೆ ಧಾವಿಸುವ ಅಕಾರಿಗಳು ಇಂತಹ ಗಂಭೀರ ಸ್ಥಿತಿ ಇದ್ದರೂ ಏಕೆ ಬರುತ್ತಿಲ್ಲ. ಚುನಾವಣಾ ಬಹಿಷ್ಕಾರ ಶತಸಿದ್ಧವಾಗಿದ್ದು,  ನಮ್ಮ ಕೂಗು ಕೇಂದ್ರಕ್ಕೆ ಮುಟ್ಟಬೇಕಿದೆ ಎಂದರು.

ಹಿರಿಯ ಮುಖಂಡರಾದ ತಿ.ರಂಗರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಹರಿಸುತ್ತಿರುವ ಕೆ.ಸಿ.ವ್ಯಾಲಿ ನೀರು ಸಹ ಕಲುಷಿತವಾಗಿರುವ ವರದಿಗಳು ಬಂದಿವೆ. ಈ ದಿಸೆಯಲ್ಲಿ ಶುದ್ಧೀಕರಣ ಮೂರು ಹಂತದಲ್ಲಿ ಆಗಲೇಬೇಕಿದೆ ಎಂದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಮಳೆ ನೀರಿನ ಹೊರತಾಗಿ ಇಲ್ಲಿನ ಯಾವುದೇ ಕೊಳವೆ ಬಾವಿ ನೀರು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಹಸುಗಳ ಹಾಲು ಸಹ ಕಲುಷಿತವಾಗಿದ್ದು, ಸಮಸ್ಯೆ ತೀವ್ರವಾಗಿದೆ ಎಂದರು.

ಮಜರಾಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ನಾರಾಯಣಮೂರ್ತಿ ಮಾತನಾಡಿ, ಗ್ರಾಮಸ್ಥರಿಂದ ಕಲುಷಿತ ನೀರಿನ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದ್ದು, ಹೋರಾಟಕ್ಕೆ ತಮ್ಮ ಸಹಮತವಿರುವುದಾಗಿ ತಿಳಿಸಿದರು.

ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರಾದ ಸತೀಶ್, ವಸಂತ ಕುಮಾರ್, ರಮೇಶ್ ಮಾತನಾಡಿ,  ಕಲುಷಿತ ನೀರಿನಿಂದ ಹಲವಾರು ರೋಗ ರುಜಿನಗಳು ಹರಡುತ್ತಿವೆ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರೂ ಭರವಸೆ ಈಡೇರಿಲ್ಲ. ಎರಡನೇ ಹಂತದ ಶುದ್ಧೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಎರಡನೇ ಹಂತದ ಶುದ್ಧೀಕರಣ ಘಟಕವನ್ನು ಕೈ ಬಿಟ್ಟು ಮೂರನೇ ಹಂತದ ಶುದ್ಧೀಕರಣ ಘಟಕ ಮಾಡಬೇಕು. ನೀರು ನಮ್ಮ ಮೂಲಭೂತ ಹಕ್ಕು ಆಗಿರುವುದರಿಂದ ಸರ್ಕಾರ ಜನರಿಗೆ ಶುದ್ಧೀಕರಣದ ಕುಡಿಯುವ ನೀರು ಕೊಡಲು ಸಾಧ್ಯವಾಗದೇ ಇರುವುದರಿಂದ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಪಕ್ಷಾತೀತವಾಗಿ, ಗ್ರಾಮದ ರಾಜಕೀಯ ಮುಖಂಡರು, ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆಯಲ್ಲಿನ ಹಕ್ಕೊತ್ತಾಯಗಳು : 

ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರನ್ನು ಮೂರನೇ ಹಂತ ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು, ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆ  ಮಾಡಬೇಕೆಂದು ತಿಳಿಸಿದ್ದರೂ ಕೆಲವೇ ಹಳ್ಳಿಗಳಿಗೆ ಮಾತ್ರ ನೀರು ದೊರೆಯುತ್ತಿದ್ದು, ಎಲ್ಲಾ ಹಳ್ಳಿಗಳಿಗೂ ದೊರೆಯಬೇಕು.

ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ದು ಪದ್ಧತಿಯನ್ನು ಸಂಪೂರ್ಣ ವೆಚ್ಚ ಸರ್ಕಾರವೇ ಕೊಟ್ಟು ಅಥವಾ ಕಾರ್ಖಾನೆಗಳ ಧನ ಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ದು ಪದ್ಧತಿಯನ್ನು ಮಾಡಿಕೊಡಬೇಕು.

ಎರಡು ಪಂಚಾಯ್ತಿಗಳಲ್ಲಿ ಈಗಾಗಲೇ ಅನೇಕ ಜನಗಳಿಗೆ ಕ್ಯಾನ್ಸರ್ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತವರಿಗೆ ಮತ್ತು ಮುಂದೆ ಯಾರಿಗೆ ಸಮಸ್ಯೆ ಕಂಡು ಬಂದರೂ ಸರ್ಕಾರದಿಂದ ಅಂತವರಿಗೆ ನರವು ನೀಡಬೇಕು.

ಜನ, ಜಾನುವಾರುಗಳಿಗೆ ಈ ಹಿಂದೆ ಸಭೆಯಲ್ಲಿ ತಿಳಿಸಿದಂತೆ 12 ಕಿ.ಮೀ ದೂರದಿಂದ ಕೊಳವೆ ಬಾವಿಗಳ ನೀರನ್ನು ತಂದು ಜನರು ಉಪಯೋಗಿಸಲು ಮತ್ತು ಜನ ಜಾನುವಾರುಗಳು ಕುಡಿಯಲು ಅನುಕೂಲ ಮಾಡಿಕೊಡಬೇಕು.

ಸಭೆಯಲ್ಲಿ ಕೆರೆ ಹೋರಾಟ ಸಮಿತಿಯ ಮುಖಂಡರಾದ ಬಿ.ಎಚ್.ಕೆಂಪಣ್ಣ, ಆದಿತ್ಯ ನಾಗೇಶ್, ಚಿಕ್ಕಣ್ಣಪ್ಪ, ಸಂದೇಶ್, ಷಣ್ಮುಖಾಚಾರ್, ಟಿ.ಜಿ.ಮಂಜುನಾಥ್, ಲೀಲಮ್ಮ ಪಿಳ್ಳೇಗೌಡ, ರಾಮ್‍ದಾಸ್, ಸಂದೇಶ್, ಚೈತ್ರ ಭಾಸ್ಕರ್, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಹಾಜರಿದ್ದರು.

Ramesh Babu

Journalist

Recent Posts

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…

8 hours ago

ಅರಸೇಶ್ವರಿ ದೇವಿಯ ಜಾಗ ಖಾಸಗಿ ವ್ಯಕ್ತಿಗೆ ಖಾತೆ:ಸರ್ಕಾರಿ ಜಮೀನು ಒತ್ತುವರಿ ತೆರವು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟ‌ನೆ

ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ…

9 hours ago

ಕೇಬಲ್ ಕಾರ್ಖಾನೆಗೆ ಬೆಂಕಿ: ಧಗಧಗ ಉರಿಯುತ್ತಿರುವ ಕಾರ್ಖಾನೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…

21 hours ago

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

24 hours ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

1 day ago