ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ಕೊಂಬುವುಳ್ಳ 7 ವರ್ಷ ವಯಸ್ಸಿನ ಗಂಡು ಚುಕ್ಕಿ ಜಿಂಕೆಯೊಂದು ಕಾಡಿನಿಂದ ದಾರಿತಪ್ಪಿ ಬಂದ ಘಟನೆ ಶನಿವಾರ ಸಂಜೆ ನಡೆದಿದೆ.
ಕಾಡಂಚಿನ ಚನ್ನಪ್ಪಾಜಿ ಬೆಟ್ಟದ ಕಡೆಯಿಂದ ದಾರಿ ತಪ್ಪಿ ಬಂದ ಚುಕ್ಕಿ ಜಿಂಕೆಯನ್ನು ಗ್ರಾಮದ ನಾಯಿಗಳು ಓಡಿಸಿಕೊಂಡು ಬಂದಾಗ ಜಿಂಕೆಯು ಹೆದರಿ ಗ್ರಾಮದ ವಸಂತಮ್ಮ ಎಂಬುವರ ಮನೆಗೆ ನುಗ್ಗಿದೆ.
ಭಯದಿಂದ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದೆ. ಜಿಂಕೆಯನ್ನು ನೋಡಿ ಮನೆಯವರು ಸಹ ಗಾಬರಿಗೊಂಡಿದ್ದಾರೆ.
ಇದನ್ನು ಕಂಡ ಗ್ರಾಮದ ಮುಖಂಡರಾದ ಎಂ.ರಾಮಕೃಷ್ಣ, ಎಂ.ಪುಟ್ಟೇಗೌಡ, ಎಚ್.ಎಸ್.ಸಿದ್ದರಾಜು ಇತರರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದರೆ.
ಜಿಂಕೆಗೆ ತೊಂದರೆಯಾಗದಂತೆ ಅದನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿದರು. ನಂತರ ಅದಕ್ಕೆ ನೀರು ಕುಡಿಸಿದರು. ಆನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಾತನೂರು ವಿಭಾಗದ ಸಿಬ್ಬಂದಿ ಕಾಂತರಾಜು, ರಿಜ್ವಾನ್ ಅವರು ಜಿಂಕೆಯನ್ನು ವಶಕ್ಕೆ ಪಡೆದುಕೊಂಡರು.
ಕುಡಿಯುವ ನೀರು ಅರಸಿಕೊಂಡು ಈ ಜಿಂಕೆ ಕಾಡಿನಿಂದ ನಾಡಿಗೆ ಬಂದಿದೆ. ಇದಕ್ಕೆ ಆರೋಗ್ಯ ತಪಾಸಣೆ ನಡೆಸಿ ಆನಂತರ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿ, ಜೊತೆಯಲ್ಲಿ ಕೊಂಡೊಯ್ದರು.