ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಕುಂಟೆ ಗ್ರಾಮದಲ್ಲಿ ಬಡತನದಲ್ಲೂ ಲಕ್ಷಾಂತರ ರೂ. ವ್ಯಯ ಮಾಡಿ ರೇಷ್ಮೆ ಗೂಡು ಸಾಕಿದ್ದ ಬಡ ಕುಟುಂಬ. ಇನ್ನೇನು ಒಂದೆರೆಡು ದಿನದಲ್ಲಿ ರೇಷ್ಮೆ ಗೂಡನ್ನ ಮಾರುಕಟ್ಟೆಗೆ ಹಾಕುವಷ್ಟರಲ್ಲಿ, ರಾತ್ರೋರಾತ್ರಿ ರೇಷ್ಮೆ ಗೂಡು ಇದ್ದ ಮನೆ ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಸಂಪೂರ್ಣ ಭಸ್ಮವಾಗಿದೆ. ಅದೇರೀತಿ ಕಾಡುಕುಂಟೆ ಗ್ರಾಮದ ಘಟನೆ ಮಾಸುವ ಮುನ್ನವೇ ಕುಕ್ಕಲಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಸುಮಾರು 8-10 ಲೋಡ್ ಜೋಳದ ಮೇವಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಸುಟ್ಟು ಕರಕಲಾಗಿದೆ. ತಾಲೂಕಿನಲ್ಲಿ ಇಂತಹ ಕುಕೃತ್ಯಗಳು ಮರುಕಳಿಸುತ್ತಿವೆ. ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಇದುವರೆಗೂ ಕಾನೂನು ಶಿಕ್ಷೆಗೆ ಒಳಪಡಿಸಿಲ್ಲ. ಇದರ ಹಿಂದೆ ರಾಜಕೀಯ ಶಡ್ಯಂತ್ರ, ಒತ್ತಡ ಇರಬಹುದೇ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅನುಮಾನ ವ್ಯಕ್ತಪಡಿಸಿದರು.
ಶನಿವಾರ ಘಟನಾ ಸ್ಥಳಗಳಿಗೆ ಭೇಟಿ ನೀಡಿ ನಷ್ಟಕ್ಕೆ ಒಳಗಾದ ರೈತರೊಂದಿಗೆ ಮಾತುಕತೆ ನಡೆಸಿ, ಸಮಾಧಾನಪಡಿಸುವ ಮೂಲಕ ಧೈರ್ಯ ತುಂಬಿದರು. ನಂತರ ಪರಿಹಾರ ಧನವನ್ನ ನೀಡುವ ಭರವಸೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಾಲೂಕಿಗೆ ರಾತ್ರಿ 7ಗಂಟೆಗೆ ಬಂದು ಟಾರ್ಚ್ ಹಾಕಿಕೊಂಡು ಕಾಟಾಚಾರಕ್ಕೆ ಬರ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಇಂತಹ ನೈಜ ಘಟನೆಗಳ ಸ್ಥಳಗಳಿಗೆ ಬಂದು ಪರಿಶೀಲಿಸಿ ರೈತರಿಗೆ ಪರಿಹಾರ ಒದಹಿಸುವ ಕಾರ್ಯ ಮಾಡಬೇಕು ಎಂದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಹಾಲಿ ಹಾಗೂ ಮಾಜಿ ಶಾಸಕರು ತಲೆಕೆಡಿಸಿಕೊಳ್ಳುತ್ತಿಲ್ಲ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಸಾವು ನೋವಿಗೆ ಕೊನೆಯೇ ಇಲ್ಲದಂತಾಗಿದೆ. ಸಣ್ಣ ಪುಟ್ಟ ಕಾರಣಕ್ಕೆ ಕೊಲೆ, ಹಲ್ಲೆ ನಡೆಯುತ್ತಿದ್ದು, ದುಷ್ಕರ್ಮಿಗಳು ಮೂಕ ಗೋವುಗಳು ತಿನ್ನುವ ಮೇವಿಗೆ ಬೇಕಂತಲೇ ಬೆಂಕಿ ಹಚ್ಚಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.
ಸಂದರ್ಭದಲ್ಲಿ ಮುಖಂಡರಾದ ನಾರಾಯಣಪ್ಪ, ಶಾಂತಿನಗರ ಪ್ರವೀಣ್, ಶ್ರೀನಿವಾಸ್, ಅಜ್ಜಪ್ಪ, ಗಂಗಾಧರ್, ತಿಪ್ಪರಾಜು, ಲಕ್ಷ್ಮೀಕಾಂತ್ ಸೇರಿದಂತೆ ಮತ್ತಿತರರಿದ್ದರು.