ಕಾಲ್ತುಳಿತ‌ ಪ್ರಕರಣ: ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲ- ರಾಜಕೀಯ ಲಾಭದ ದುರುದ್ದೇಶದಿಂದ ಕಾರ್ಯಕ್ರಮ ಆಯೋಜನೆ- ಮೃತರ ಕುಟುಂಬಕ್ಕೆ1 ಕೋಟಿ ನಷ್ಟ ಪರಿಹಾರಕ್ಕೆ ಶಾಸಕ ಧೀರಜ್ ಮುನಿರಾಜ್ ಆಗ್ರಹ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 47 ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ವಾಗ್ದಾಳಿ ನಡೆಸಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ವಿಫಲವಾಗಿದೆ. ಸೂಕ್ತ ವ್ಯವಸ್ಥೆ, ಯೋಜ‌ನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಪರಿಣಾಮ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ವಿಧಾನಸೌಧ ಆವರಣದಲ್ಲಿ ಆರ್ಸಿಬಿ ತಂಡಕ್ಕೆ ಸನ್ಮಾನ ಮಾಡುವುದು ಬೇಡ ಎಂದು ಇದಕ್ಕೂ ಮುನ್ನ ಗುಪ್ತಚರ ಇಲಾಖೆ, ಗೃಹ ಇಲಾಖೆ ಸೇರಿದಂತೆ ಎಲ್ಲಾ ಮೂಲಗಳೂ ಎಚ್ಚರಿಸಿದ್ದರೂ ಅದೆಲ್ಲವನ್ನೂ ಕಡೆಗಣಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಕಾರ್ಯಕ್ರಮ ಆಯೋಜಿಸಿ 11 ಮುಗ್ದ ಅಮಾಯಕರ ಜೀವ ತೆಗೆಯಲಾಗಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಆರ್ಸಿಬಿ ತಂಡವನ್ನು ಅಭಿನಂದಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಆದರೆ, ಇದು ರಾಜ್ಯದ ಕಾರ್ಯಕ್ರಮವಾ ಅಥವಾ ಪಕ್ಷದ ಕಾರ್ಯಕ್ರಮವಾ…? ಇದನ್ನೂ ಕೇವಲ ರಾಜಕೀಯ ಲಾಭಕ್ಕಾಗಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿರೋಧಪಕ್ಷದ ನಾಯಕರಿಗಾಗಲಿ ಅಥವಾ ಶಾಸಕರಿಗಾಗಲಿ ಆಹ್ವಾನ ನೀಡಿಲ್ಲ, ಕಾಂಗ್ರೆಸ್ ಮುಖಂಡರು ಅವರ ಮಕ್ಕಳು, ಮೊಮ್ಮಕ್ಕಳು ಮಾತ್ರ ವೇದಿಕೆಯಲ್ಲಿದ್ದರು ಇದನ್ನು ಪಾರ್ಟಿ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಂಡುಬಂದಿದೆ….

ಮೃತರ ಕುಟುಂಬಕ್ಕೆ 1 ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹ:

ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ತಮ್ಮ ನೆಚ್ಚಿನ ತಂಡದ ಆಟಗಾರರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿದ್ದರು. ಸ್ಥಳದಲ್ಲಿ ಉಂಟಾದ ನೂಕುನುಗ್ಗಲಿನಿಂದ 11 ಜನರ ಸಾವಿಗೀಡಾಗಿದ್ದಾರೆ. ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ, ಸದ್ಯ ಈಗ ಘೋಷಿಸಿರುವ 10 ಲಕ್ಷ ಪರಿಹಾರದಿಂದ ಯುವಕರ ಸಾವಿಗೆ ನ್ಯಾಯ ಸಿಗುವುದಿಲ್ಲ ಹೀಗಾಗಿ ಕನಿಷ್ಟ 1 ಕೋಟಿ ಪರಿಹಾರ ಜೊತೆಗೆ ಮೃತರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ವಕ್ತಾರರಾದ ಪುಷ್ಪಶಿವಶಂಕರ್, ದೊಡ್ಡಬಳ್ಳಾಪುರ ಬಿಜೆಪಿ ನಗರಾಧ್ಯಕ್ಷ ಮುದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಮುಖಂಡರಾದ ಮಂಜಣ್ಣ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!