ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ -ಎಸ್.ವರಲಕ್ಷ್ಮೀ

ಕೋಲಾರ: ಎಕ್ಷಿಡಿ ಕಂಪನಿ ಮಾಲೀಕರ ಶೋಷಣೆಯ ವಿರುದ್ದದ ಕಾರ್ಮಿಕರ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ. ಕೂಡಲೇ ಕಂಪನಿ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಇತ್ಯರ್ಥಕ್ಕೆ ಮುಂದಾಗಬೇಕು ಇಲ್ಲದೇ ಹೋದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಒತ್ತಾಯಿಸಿದರು.

ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಎಕ್ಷಿಡಿ ಕಂಪನಿಯ ಎದುರು ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಾ ಇರುವ ಸತತ 5 ನೇ ದಿನದ ಅನಿರ್ದಿಷ್ಟಾವಧಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಕಾರ್ಮಿಕರ ಬದುಕಿನ ಪ್ರಶ್ನೆಯಾಗಿದೆ ಕಾನೂನು ಬದ್ದವಾಗಿ ಕಾರ್ಮಿಕರ ಬೇಡಿಕೆಗಳ ಪಟ್ಟಿಯನ್ನು ಮಾಲೀಕರಿಗೆ ಸಲ್ಲಿಸಿದ್ದಾರೆ ಮಾಲೀಕರು ಷರತ್ತುಗಳ ಮೇಲೆ ಕಾರ್ಮಿಕರನ್ನು ಬೆದರಿಸುವ ಪ್ರವೃತ್ತಿಯನ್ನು ಬಿಟ್ಟು ಕಾರ್ಮಿಕರು ಕಾನೂನು ಕೈ ತೆಗೆದುಕೊಳ್ಳುವ ಮುಂಚೆ ಮುಖಾಮುಖಿ ಬಗೆಹರಿಸಿಕೊಳ್ಳಬೇಕು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಈ ಕೈಗಾರಿಕಾ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕಳೆದುಕೊಂಡ ಸಾವಿರಾರು ರೈತರು ಉದ್ಯೋಗಕ್ಕಾಗಿ ಕೈಕಟ್ಟಿ ಮಾಲೀಕನ ಮುಂದೆ ನಿಲ್ಲಬೇಕಾಗಿದೆ ಕಾರ್ಮಿಕರನ್ನು ಎದುರು ಹಾಕಿಕೊಂಡು ಕಂಪನಿ ಅಭಿವೃದ್ಧಿಯಾದ ಉದಾಹರಣೆ ಇಲ್ಲ ಕಾರ್ಮಿಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕಂಪನಿಯಲ್ಲಿನ ಯಂತ್ರೋಪಕರಣಗಳನ್ನು ನಿಲ್ಲಿಸುವ ತಾಕತ್ತು ಅವರಿಗಿದೆ ಮಾಲೀಕನಿಗೆ ಒಂದೇ ಕಂಪನಿ ಆದರೆ ದುಡಿಯುವ ಕಾರ್ಮಿಕರಿಗೆ ನೂರಾರು ಕಂಪನಿ ಎಂಬುದನ್ನು ಮರೆಯಬಾರದು ಎಂದರು.

ಕಂಪನಿಯೊಂದಿಗೆ ಸುಮಾರು ಬಾರಿ ಕಾರ್ಮಿಕರ ಬೇಡಿಕೆ ಪಟ್ಟಿಯನ್ನು ಇಟ್ಟುಕೊಂಡು ಸಭೆಗಳನ್ನು ನಡೆಸಿದ್ದರೂ ಪ್ರಯೋಜನವಾಗಲಿಲ್ಲ ಕಾರ್ಮಿಕರನ್ನು ಕಟ್ಟಿಹಾಕಿದರೆ ಸಾಕು ಎಂಬುದನ್ನು ಮರೆತು ಬಿಡಿ ಇವತ್ತು ಸಿಐಟಿಯು ಸಂಘಟನೆ ಬಂದು ಬೆಂಬಲ ಕೊಟ್ಟಿದೆ ಕೋಲಾರ ಜಿಲ್ಲೆ ಚಳುವಳಿಗಳ ತವರು ಎಂಬುದನ್ನು ಮರೆಯಬಾರದು ದಿನನಿತ್ಯ ರೈತ, ಕಾರ್ಮಿಕ, ಮಹಿಳಾ, ಯುವಜನ ಸಂಘಟನೆಗಳು ನಿಮ್ಮ ಹೋರಾಟಕ್ಕೆ ಬೆಂಬಲಿಸಲಿದ್ದಾರೆ ನಮ್ಮ ಬೇಡಿಕೆಗಳು ನ್ಯಾಯಯುತವಾಗಿ ಇದ್ದು ನಮ್ಮ ಹಕ್ಕನ್ನು ಕೇಳಲು ಬಂದಿದ್ದೇವೆ ಉತ್ಪಾದನೆಗೆ ತಕ್ಕಂತೆ ವೇತನ ಸೌಲಭ್ಯಗಳನ್ನು ಕೊಡುವುದು ಮಾಲೀಕರ ಜವಾಬ್ದಾರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಕ್ಷಿಡಿ ಕ್ಲಚ್ ಇಂಡಿಯಾ ಕಂಪನಿಯ ಯೂನಿಯನ್ ಅಧ್ಯಕ್ಷ ಹರೀಶ್ ಮಾತನಾಡಿ, ಸುಮಾರು ಒಂದುವರೆ ವರ್ಷದ ಹಿಂದೆಯಿಂದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿಕೊಂಡು ಬಂದಿದ್ದೇವೆ ಸೌಲಭ್ಯಗಳನ್ನು ಕೊಡದೇ ಇದ್ದರಿಂದ ಅನಿರ್ದಿಷ್ಟಾವಧಿ ಧರಣಿಗೆ ಹೋಗಬೇಕಾಗಿದೆ ಎಷ್ಟೇ ದಿನವಾದರೂ ನಮ್ಮ ಬೇಡಿಕೆಗಳನ್ನು ಪಡೆದೇ ಪಡೆಯುತ್ತೇವೆ ಇಲ್ಲಿಯೇ ಅಡಿಗೆ ಮಾಡಿಕೊಂಡು ಧರಣಿ ಮುಂದುವರೆಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು

ಈ ಧರಣಿಯ ನೇತೃತ್ವವನ್ನು ಎಕ್ಷಿಡಿ ಕ್ಲಚ್ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಉಪಾಧ್ಯಕ್ಷರಾದ ರಮೇಶ್, ಶರತ್ ಖಜಾಂಚಿ ಮಂಜುನಾಥ್, ಸಹಕಾರ್ಯದರ್ಶಿ ಪೃಥ್ವಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಷ, ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್ ಅಂಗನವಾಡಿ ನೌಕರರ ಸಂಘದ ಲೋಕೇಶ್ವರಿ, ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *