ಕಾನೂನು ಬಾಹಿರವಾಗಿ ದಸ್ತಾವೇಜುಗಳನ್ನು ನೋಂದಣಿ ಮಾಡಿರುವ ಹಾಗೂ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಎಚ್.ಎಸ್. ಸತೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಕರಣ:-1
ಉಲ್ಲೇಖ (1)ರಲ್ಲಿ ಆರ್.ಜಿ.ಎನ್. ಶಾಖೆಯ ಕಡತದಲ್ಲಿ ಗಣೇಶ್ ಆದಿತ್ಯ ಇವರು ದಿನಾಂಕ:06-03-2024 ಮತ್ತು 15-03-2025 ರ ತಮ್ಮ ದೂರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ, ಉಪ್ಪುಕುಂಟಹಳ್ಳಿ ಗ್ರಾಮದ ರೀ ಸರ್ವೆ ನಂ.45(ಹಳೇ ಸರ್ವೆ ನಂ.5) ವಿಸ್ತೀರ್ಣ:02 ಎಕರೆ 36 ಗುಂಟೆ ಸ್ವತ್ತನ್ನು ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿಯಲ್ಲಿ ನೋಂದಣಿಯಾದ ದಸ್ತಾವೇಜು ಸಂಖ್ಯೆ:15260/2023-24 ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಬಾಕಿಯಿದ್ದರೂ ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿಗಳು ನೋಂದಾಯಿಸಿದ್ದು, ಉಪನೋಂದಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿರುತ್ತಾರೆ.
ಉಲ್ಲೇಖ (2)ರಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಚೇರಿ, ಬೆಂಗಳೂರು ಗ್ರಾಮಾಂತರ ರವರು ದಿನಾಂಕ:17-03-2025ರ ತಮ್ಮ ವರದಿಯಲ್ಲಿ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನೋಂದಣಾಧಿಕಾರಿಗಳು ದೊಡ್ಡಬಳ್ಳಾಪುರ ಇವರು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ನೋಂದಣಿ ಮಾಡಿರುತ್ತಾರೆ, ದಸ್ತಾವೇಜಿನ ನೋಂದಣಿ ವೇಳೆ ಪ್ರಶ್ನಿತ ಸ್ವತ್ತು ಆರ್ಟಿಸಿಯಲ್ಲಿ ಕೃಷಿ ಜಮೀನಾಗಿರುವುದು ಕಂಡುಬರುತ್ತದೆ.
ಕ್ರಯಪತ್ರದ ಸ್ವತ್ತಿನಲ್ಲಿ ವರ್ಗಾವಣೆಯಾಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಜೆ-ಸ್ಲಿಪ್ ರವಾನೆಯಾಗಿರುವುದನ್ನು ಪರಿಶೀಲಿಸಲಾಗಿ ನೋಂದಣಿ ವೇಳೆ Non Agriculture Property Type ಎಂದು Select ಮಾಡಿರುವುದರಿಂದ ಜೆ-ಸ್ಲಿಪ್ ರವಾನೆಯಾಗಿರುವುದು ಕಂಡುಬಂದಿರುವುದಿಲ್ಲ. ಹಾಗೂ ಆರ್.ಟಿ.ಸಿಯಲ್ಲಿ ಈಗಲೂ ಸಹ ಕ್ರಯಪತ್ರ ಬರೆದುಕೊಟ್ಟವರಾದ ಗೋಪಾಲಪ್ಪ ಬಿನ್ ಕೊರಾಲಾ ವೆಂಕಟರಾಯಪ್ಪ ರವರ ಹೆಸರಿನಲ್ಲಿ ದಾಖಲೆ ಇರುವುದು ಕಂಡುಬಂದಿರುತ್ತದೆ. ಅದೇ ವರದಿ ಸಲ್ಲಿಸಿರುತ್ತಾರೆ.
ಉಪನೋಂದಣಾಧಿಕಾರಿ ಎಚ್.ಎಸ್. ಸತೀಶ್ ರವರು ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ, ಉಪ್ಪುಕುಂಟಹಳ್ಳಿ ಗ್ರಾಮದ ರೀ ಸರ್ವೆ ನಂ.45(ಹಳೇ ಸರ್ವೆ ನಂ.5) ವಿಸ್ತೀರ್ಣ:02 ಎಕರೆ 36 ಗುಂಟೆ ಸ್ವತ್ತಿಗೆ ಸಂಬಂದಿಸಿದಂತೆ ಆರ್.ಟಿ.ಸಿಯ ಕಾಲಂ 11ರ ಇತರೆ ಹಕ್ಕುಗಳ ಮತ್ತು ಋಣಗಳು ಇರುವ , ಹಕ್ಕುಗಳ ಕಾಲಂ ನಲ್ಲಿ Court Stay As Per Order O.S. No.317/2020-22 dated:02-07-2023, 12:00 AM ಎಂದು ನಮೂದಾಗಿರುತ್ತದೆ. ದೂರುದಾರರು ದಿನಾಂಕ:04-07-2022 ರಂದು ಗುಡಿಬಂಡೆ ಉಪನೋಂದಣಿ ಕಚೇರಿಗೆ ನ್ಯಾಯಾಲಯದ ಮಧ್ಯಂತರ ಆದೇಶದ ಪ್ರತಿಯನ್ನು ಹಾಜರುಪಡಿಸಿರುತ್ತಾರೆ. ಸ್ವತ್ತಿನ ಪರಭಾರೆ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದು ಹಾಗೂ ಭೂಮಿ ತಂತ್ರಾಂಶದಲ್ಲಿ Court Stay ಯನ್ನು Flag ಮಾಡಿರುವುದು ಸಹ ಕಂಡುಬಂದಿರುತ್ತದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸದರಿ ಸ್ವತ್ತನ್ನು ನೋಂದಾಯಿಸುವ ಮೂಲಕ ಸರ್ಕಾರದ ಪತ್ರ ಸಂಖ್ಯೆ:ಆರ್ಡಿ 248 ಮುನೋಮು 96 ದಿನಾಂಕ:27-01-1997 ಮತ್ತು ಸುತ್ತೋಲೆ ಸಂಖ್ಯೆ:ಆರ್.ಜಿ.ಎನ್/21/1999-2000 ದಿನಾಂಕ:07-06-1999 ಮತ್ತು ಜ್ಞಾಪನ ಸಂಖ್ಯೆ:ಸಾದೂವಿ-91/2009-10 ದಿನಾಂಕ:14-12-2010 ಗಳನ್ನು ಉಲ್ಲಂಘಿಸಿ ದಸ್ತಾವೇಜನ್ನು ನೋಂದಣಿ ಮಾಡಿರುವುದು ಕಂಡುಬರುತ್ತದೆ.
ಸದರಿ ದಸ್ತಾವೇಜು ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಬಾರದೇ ಇದ್ದರೂ ನೋಂದಾಯಿಸಿರುವುದು ಕಂಡುಬರುತ್ತದೆ. ಕರ್ನಾಟಕ ನೋಂದಣಿ ನಿಯಮಾವಳಿಗಳು 1965ರ ನಿಯಮ 169 ರಲ್ಲಿನ ಉಪಬಂಧಗಳಂತೆ ತಮ್ಮ ಕಚೇರಿಯಲ್ಲಿ ಅಚಾರ್ತುಯದಿಂದ ದಸ್ತಾವೇಜು ನೋಂದಾಯಿಸಲ್ಪಟ್ಟಿದ್ದರೆ ನೋಂದಣಿ ಅಧಿಕಾರಿ ವಿಷಯವನ್ನು ಬರೆದುಕೊಡುವ ಮತ್ತು ಹಕ್ಕು ಸಾಧಿಸುವ ಪಕ್ಷಕಾರರಿಗೆ ತಿಳಿಸತಕ್ಕದ್ದು ಮತ್ತು ಹೊಸದಾಗಿ ಸರಿಯಾದ ಕಚೇರಿಯಲ್ಲಿ ನೋಂದಣಿ ಮಾಡುವುದಕ್ಕೆ ನಿರ್ದೇಶಿಸುವಂತೆ ಜಿಲ್ಲಾ ನೋಂದಣಾಧಿಕಾರಿ ರವರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸತಕ್ಕದ್ದು ಎಂಬ ಕಾನೂನು ಇರುತ್ತದೆ. ಆದರೆ ಸದರಿಯವರು ಕರ್ನಾಟಕ ನೋಂದಣಿ ನಿಯಮಾವಳಿಗಳು 1965ರ ನಿಯಮ 169 ರಲ್ಲಿನ ಸೂಚನೆಗಳನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸದರಿ ದಸ್ತಾವೇಜನ್ನು ನೋಂದಾಯಿಸಿರುವುದು ಕಂಡುಬಂದಿರುತ್ತದೆ. ಈ ಕುರಿತು ಉಲ್ಲೇಖ (3) ರಲ್ಲಿ ಕಾರಣ ಕೇಳುವ ನೋಟೀಸ್ ಜಾರಿ ಮಾಡಿದ್ದು, ಸದರಿಯವರು ತಮ್ಮ ಲಿಖಿತ ಹೇಳಿಕೆ ಸಲ್ಲಿಸಿರುವುದಿಲ್ಲ.

ಪಕರಣ:-2
ಉಲ್ಲೇಖ (4)ರಲ್ಲಿ ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಕಾನೂನು ಉಲ್ಲಂಘಿಸಿ ನೋಂದಾಯಿಸಿರುವ ಕುರಿತು ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಲು ತಂಡವನ್ನು ರಚಿಸಲಾಗಿತ್ತು.
ಸದರಿ ತಪಾಸಣಾ ತಂಡದವರು ತಪಾಸಣಾ ವರದಿಯನ್ನು ಉಲ್ಲೇಖ (5)ರ ಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಿರುತ್ತಾರೆ. ಸದರಿ ವರದಿಯನ್ನು ಪರಿಶೀಲಿಸಲಾಗಿ ಉಪನೋಂದಣಾಧಿಕಾರಿ ಎಚ್.ಎಸ್. ಸತೀಶ್ ಅವರು ಒಟ್ಟು 06 ದಸ್ತಾವೇಜುಗಳಲ್ಲಿನ ಆಸ್ತಿಗಳಿಗೆ ಏಕ ನಿವೇಶನದ ಇ-ಸ್ವತ್ತು ಪಡೆದು ಅದರ ಪೈಕಿ ನಿವೇಶನವನ್ನು ನೋಂದಾಯಿಸಿರುವುದು ಕಂಡುಬಂದಿರುತ್ತದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ನೋಂದಣಿ ಮಾಡಿಸಿಕೊಳ್ಳುವುದನ್ನು ತಡೆಯಲು ಸರ್ಕಾರದ ಆದೇಶ :/20/2/2023 22:02-09-2024, 12-09-2024, 17-09-2024 ಮತ್ತು 23-09-2024 ರಂತೆ ಕಾವೇರಿ 2.0 ಮತ್ತು ಇ-ಆಸ್ತಿ, ಇ-ಸ್ವತ್ತು ಮತ್ತು ಯು.ಎಲ್.ಎಂ.ಎಸ್. ಇಂಟಿಗ್ರೇಷನ್ ಮಾಡಿ ಆದೇಶ ಹೊರಡಿಸಲಾಗಿರುತ್ತದೆ. ದಿನಾಂಕ:30-10-2024 ರ ನಂತರ ಯಾವುದೇ ಮ್ಯಾನ್ಯುಯಲ್ ಖಾತೆ ಬಳಸಿ ನೋಂದಣಿ ಮಾಡಲು ಅವಕಾಶವಿರುವುದಿಲ್ಲ. ಆದಾಗ್ಯೂ ದೊಡ್ಡಬಳ್ಳಾಪುರ ಉಪನೋಂದಣಿ ಕಚೇರಿಯಲ್ಲಿ 06 ದಸ್ತಾವೇಜುಗಳನ್ನು ಕಾನೂನು ಬಾಹಿರವಾಗಿ ನೋಂದಣಿಯಾಗಿರುತ್ತದೆ. 2-3 ಪಿಐಡಿ ನಂಗಳ ಖಾತೆಗಳ ಕ್ಷೇತ್ರಗಳನ್ನು ಒಗ್ಗೂಡಿಸಿ ಅವುಗಳ ಪೈಕಿ ನಿವೇಶನಗಳನ್ನು ನೋಂದಾಯಿಸಲಾಗಿದೆ. ನಿವೇಶನಕ್ಕೆ ಪ್ರತ್ಯೇಕ ಪಿಐಡಿ ನಂಬರ್ ಇರುವ ಖಾತಾಗಳನ್ನು ಪಡೆದಿರುವುದಿಲ್ಲ. ನಿವೇಶನದ ಭೌತಿಕ ಖಾತಾ ದಾಖಲೆಗಳನ್ನು ಅಪಲೋಡ್ ಮಾಡಿ ಯಾವುದೇ ಇ-ಖಾತಾ ದಾಖಲೆಯ ಪಿಐಡಿ ಸಂಖ್ಯೆಯನ್ನು ಬಳಸದೇ ಅಪಲೋಡ್ ಮಾಡಿ ಇ-ಖಾತಾ ದಾಖಲೆ ಇಲ್ಲದ ಸ್ವತ್ತುಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಾಯಿಸಲಾಗಿದೆ.
ಈ ಕುರಿತು ಉಲ್ಲೇಖ (6)ರಲ್ಲಿ ಉಪನೋಂದಣಾಧಿಕಾರಿಗೆ ಕಾರಣ ಕೇಳುವ ನೋಟೀಸ್ ಜಾರಿ ಮಾಡಲಾಗಿರುತ್ತದೆ. ಉಪನೋಂದಣಾಧಿಕಾರಿ ತಮ್ಮ ಲಿಖಿತ ಸಮಜಾಯಿಷಿ ಸಲ್ಲಿಸಿರುವುದಿಲ್ಲ.
ಉಲ್ಲೇಖ (7)ರಲ್ಲಿ ಸರ್ಕಾರದ ಆದೇಶ ಸಂಖ್ಯೆ:ಕಂಇ/20/ಎಂಎನ್ಎಂಯು/2023 ದಿನಾಂಕ:12-09-2024 ರ ಆದೇಶದಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆಯ ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ಸ್ವತ್ತಿನ ಮಾಹಿತಿಯನ್ನು ಪಡೆದು ದಿನಾಂಕ:30-10-2024 ರಿಂದ ಜಾರಿಗೆ ಬರುವಂತೆ ದಸ್ತಾವೇಜುಗಳನ್ನು ನೋಂದಾಯಿಸುವಂತೆ ಆದೇಶಿಸಿರುತ್ತಾರೆ.
ಉಲ್ಲೇಖ (8)ರಲ್ಲಿ ಸರ್ಕಾರದ ಸುತ್ತೋಲೆ ಸಂಖ್ಯೆ:ಕಂಇ 06 ಮುನೋಮು 2013 ದಿನಾಂಕ:18-07-2014 ರ ಸುತ್ತೋಲೆಯಲ್ಲಿ ಕಾವೇರಿ ತಂತ್ರಾಂಶವನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ವತ್ತುಗಳಿಗೆ ಇರುವ ಇ-ಸ್ವತ್ತು ತಂತ್ರಾಂಶದೊಂದಿಗೆ ಸಂಯೋಜನೆಗೊಳಿಸಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೋಂದಾಯಿಸುವಾಗ ಇ-ಸ್ವತ್ತು ತಂತ್ರಾಂಶದಿಂದ ಸ್ವತ್ತಿನ ಮಾಹಿತಿ ಪಡೆದು ನೋಂದಣಿ ಮಾಡಲು ಆದೇಶಿಸಿರುತ್ತಾರೆ.
ಉಲ್ಲೇಖ (9)ರಲ್ಲಿ ಸರ್ಕಾರದ ಸುತ್ತೋಲೆ ಸಂಖ್ಯೆ:ಕಂಇ 344 ಮುನೋಮು 2008 ದಿನಾಂಕ:06-04-2009 ರ ಸುತ್ತೋಲೆಯಲ್ಲಿ ಹಾಗೂ ಸದರಿ ಸುತ್ತೋಲೆಗೆ ನೀಡಲಾದ ತಿದ್ದುಪಡಿ ದಿನಾಂಕ:24-01-2013 ಮತ್ತು ತಿದ್ದೋಲೆ ದಿನಾಂಕ:23-04-2014 ರಲ್ಲಿ ವರ್ಗಾವಣೆ ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಹಾಜರು ಪಡಿಸಬೇಕಾದ ದೃಢೀಕೃತ ದಾಖಲೆಗಳನ್ನು ನಿಗದಿಪಡಿಸಿರುತ್ತಾರೆ. ಇದರಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದ ದಸ್ತಾವೇಜುಗಳ ನೋಂದಣಿ ಸಮಯದಲ್ಲಿ ಗ್ರಾಮ ಪಂಚಾಯಿತಿ ಸಕ್ಷಮ ಪ್ರಾಧಿಕಾದಿಂದ ಡಿಜಿಟಲ್ ಸಹಿ ಮಾಡಿ ನೀಡಲ್ಪಟ್ಟಿರುವ ಸ್ವತ್ತಿನ ಖಾತೆ ಮತ್ತು ಅಸೆಸ್ಮೆಂಟ್ ವಹಿಯ ಗಣಕೀಕೃತ ನಮೂನೆ-9 ಮತ್ತು 11ಎ ಅಥವಾ ಸ್ವತ್ತಿನ ಗಣಕೀಕೃತ ನಮೂನೆ 11ಬಿ ಗಳನ್ನು ಉಪನೋಂದಣಾಧಿಕಾರಿಗಳು ಪಕ್ಷಕಾರರಿಂದ ಹಾಜರು ಪಡಿಸಿಕೊಳ್ಳಬೇಕಾಗಿರುತ್ತದೆ. ಶ್ರೀ ಸತೀಶ್, ಹೆಚ್.ಎಸ್ ಉಪನೋಂದಣಾಧಿಕಾರಿ, ಉಪನೋಂದಣಿ ಕಛೇರಿ, ದೊಡ್ಡಬಳ್ಳಾಪುರ ಇವರು ಉಲ್ಲೇಖ (7) ರಿಂದ (9) ರ ಸರ್ಕಾರದ ಆದೇಶ ಮತ್ತು ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿ 06 ದಸ್ತಾವೇಜುಗಳನ್ನು ಕಾನೂನು ಬಾಹಿರವಾಗಿ ನೋಂದಾಯಿಸಿರುವುದು ದೃಢಪಟ್ಟಿರುತ್ತದೆ.
ಪ್ರಕರಣ-1 ಮತ್ತು 2ಕ್ಕೆ ಸಂಬಂಧಿಸಿದಂತೆ ಉಲ್ಲೇಖ (3) ಮತ್ತು (6)ರಲ್ಲಿ ಸದರಿಯವರಿಗೆ ಕಾರಣ ಕೇಳುವ ನೋಟೀಸ್ ಜಾರಿ ಮಾಡಿದ್ದು, ಸದರಿಯವರು ತಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ. ಸದರಿಯವರು ಕಾನೂನು ಬಾಹಿರವಾಗಿ ದಸ್ತಾವೇಜನ್ನು ನೋಂದಾಯಿಸಿರುವುದು ಕಂಡುಬಂದಿರುತ್ತದೆ. ಇದು ಸರ್ಕಾರಿ ನೌಕರರಿಗೆ ತಕ್ಕುದಲ್ಲವಾಗಿರುತ್ತದೆ. ಇದರಿಂದಾಗಿ ಸದರಿಯವರು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 2021ರ ನಿಯಮ 3 ಅನ್ನು ಉಲ್ಲಂಘಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರಡಿ ಶಿಸ್ತು ಕ್ರಮಕ್ಕೆ ಗುರಿಯಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಉಪನೋಂದಣಾಧಿಕಾರಿ ಸತೀಶ್ ಎಚ್.ಎಸ್ ರವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(1)(ಡಿ) ಸಹಿತಾ 10(3) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಯಾನಂದ.ಕೆಎ, ಭಾ.ಆ.ಸೇ. ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರ, ಸತೀಶ್ ಹೆಚ್.ಎಸ್ ಉಪನೋಂದಣಾಧಿಕಾರಿ, ಉಪನೋಂದಣಿ ಕಚೇರಿ, ದೊಡ್ಡಬಳ್ಳಾಪುರ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಅಮಾನತ್ತಿನಲ್ಲಿಟ್ಟಿರುತ್ತಾರೆ.