ಕೋಲಾರ: ಕಾಡಾನೆಗಳ ಹಾವಳಿಯಿರುವ ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡಿ ನಿರಂತರ ಜ್ಯೋತಿಯಲ್ಲಿ ರಾತ್ರಿ ವೇಳೆ ವಿದ್ಯುತ್ ನೀಡಿ ರೈತರ ಪ್ರಾಣ ಹಾಗೂ ಬೆಳೆಯನ್ನು ರಕ್ಷಣೆ ಮಾಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ರೈತಸಂಘದಿಂದ ಮನವಿ ನೀಡಿ ಒತ್ತಾಯಿಸಲಾಯಿತು.
ಪ್ರತಿ ವರ್ಷ ಬೇಸಿಗೆ ಪ್ರಾರಂಭವಾಯಿತು ಎಂದರೆ ರೈತರಿಗೆ ನೀಡುವ ವಿದ್ಯುತ್ ನಲ್ಲಿ ಕಡಿತ ಮಾಡಿ ಸಂಸ್ಥೆಗೆ ಉಳಿತಾಯ ಮಾಡಿದರೆ ಬೆಸ್ಕಾಂ ಅಧಿಕಾರಿಗಳಿಗೆ ಇಂಧನ ಸಚಿವರು ಚಿನ್ನದ ಪದಕ ನೀಡುತ್ತಾರೆಯೇ ಎಂದು ಗ್ರಾಮೀಣ ಪ್ರದೇಶದ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳನ್ನು ರೈತಸಂಘದ ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್ ಪ್ರಶ್ನೆ ಮಾಡಿದರು
ಹದಗೆಟ್ಟಿರುವ ರಸ್ತೆಗಳು ಮೂಲಭೂತ ಸೌಕರ್ಯಗಳಿಲ್ಲದ ಗಡಿಭಾಗದ ರೈತರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಮನೆ, ಸಂಸಾರ ಬಿಟ್ಟು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಕೊಳವೆಬಾವಿಗಳ ಹತ್ತಿರ ರಾತ್ರಿ ಪೂರ್ತಿ ಶಿವರಾತ್ರಿ ಜಾಗರಣೆ ಮಾಡುವ ೬ನೇ ಭಾಗ್ಯವನ್ನು ಬೆಸ್ಕಾಂ ಅಧಿಕಾರಿಗಳು ನೀಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿ ವ್ಯಂಗ್ಯವಾಡಿದರು.
ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ರಾತ್ರಿ ಹಗಲು ಎನ್ನದೆ ಬೆವರು ಸುರಿಸಿ ಕೃಷಿ ಭೂಮಿಯಲ್ಲಿ ಬೆಳೆ ತೆಗೆಯುವ ರೈತ ಸ್ವಾರ್ಥಕ್ಕಾಗಿ ವ್ಯವಸಾಯ ಮಾಡುತ್ತಿಲ್ಲ. ಈ ದೇಶಕ್ಕೆ ಅನ್ನ ಹಾಕುವ ಅನ್ನದಾತನನ್ನು ದೇವರು ಎಂದು ಪೂಜಿಸಬೇಕಾದ ಬೆಸ್ಕಾಂ ಅಧಿಕಾರಿಗಳು ರೈತರು ಬೆಳೆದ ಅನ್ನವನ್ನು ತಿಂದು ರೈತರಿಗೇ ದ್ರೋಹ ಮಾಡುವುದೆಂದರೆ ಸಮರ್ಪಕವಾದ ವಿದ್ಯುತ್ ನೀಡದೆ ಅವರ ಜೀವನದ ಜೊತೆ ಚೆಲ್ಲಾಟವಾಡುವುದು ಅಧಿಕಾರಿಗಳ ಘನತೆಗೆ ಗೌರವವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಒಂದು ಕಡೆ ಕಾಡಾನೆಗಳ ಹಾವಳಿ ಮತ್ತೊಂದೆಡೆ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಮಧ್ಯೆ ಬೆಳೆಯನ್ನು ಮಗುವಂತೆ ಸಾಕಿ ಇನ್ನೇನು ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇದೆ ನಮ್ಮ ಕಷ್ಟ ತೀರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ರೈತನಿಗೆ ಒಂದೇ ರಾತ್ರಿ ಬೆಸ್ಕಾಂ ಅಧಿಕಾರಿಗಳ ರೈತ ವಿರೋಧಿ ಧೋರಣೆಯಿಂದ ಸಮರ್ಪಕವಾದ ವಿದ್ಯುತ್ ಇಲ್ಲದೆ ಬೆಳೆಗೆ ನೀರು ಸಾಕಾಗದೆ ಕಣ್ಣ ಮುಂದೆಯೇ ಬೆಳೆ ನಷ್ಟವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ನಾಶವಾಗುತ್ತಿರುವ ಬೆಳೆ ನೋಡಿ ರೈತನಿಗೆ ಹೃದಯಾಘಾತ ಇಲ್ಲವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಭಾಗ್ಯವನ್ನು ಬೆಸ್ಕಾಂ ಅಧಿಕಾರಿಗಳು ನೀಡುತ್ತಿದ್ದಾರೆಂದು ಆರೋಪಿಸಿದರು.
ಕೊಡುವ ವಿದ್ಯುತ್ ಅನ್ನು ಸಮರ್ಪಕವಾಗಿ ಗುಣಮಟ್ಟವಿಲ್ಲದೆ ನೀಡಿ ಕೃಷಿ ಪಂಪ್ ಸೆಟ್ ಗಳು
ಸುಟ್ಟು ಅದನ್ನು ರಿಪೇರಿ ಮಾಡಲು ಸಾವಿರಾರು ರೂಪಾಯಿ ಸುರಿಯುವ ಜೊತೆಗೆ ಟಿಸಿ ಸುಟ್ಟರೆ 24 ಗಂಟೆಯಲ್ಲಿ ಅಳವಡಿಸದೆ ನಷ್ಟದಲ್ಲಿರುವ ರೈತರ ಹತ್ತಿರ ಹಣ ವಸೂಲಿ ಮಾಡುವ ಮೂಲಕ ಬೆಸ್ಕಾಂ ಇಲಾಖೆಯಲ್ಲಿ ರೈತರ ಶೋಷಣೆ ಭ್ರಷ್ಟಾಚಾರ ನಿರಂತರವಾಗಿದೆ ಎಂದು ಆರೋಪಿಸಿದರು.
ಹಿರಿಯ ಅಧಿಕಾರಿಗಳು ಗಡಿಭಾಗದ ಕಾಡಾನೆಗಳ ಹಾವಳಿಯಿರುವ ಗ್ರಾಮೀಣ ಪ್ರದೇಶಗಳಿಗೆ
ಗುಣಮಟ್ಟದ 10 ತಾಸು ರೈತರ ಬೇಡಿಕೆಯಂತೆ ವಿದ್ಯುತ್ ನೀಡಬೇಕು. ನಿರಂತರ ಜ್ಯೋತಿಯಲ್ಲಿ ರಾತ್ರಿ ವೇಳೆ ವಿದ್ಯುತ್ ಕಡಿತ ಆಗದಂತೆ ಜಾಗೃತಿವಹಿಸಿ ರೈತರ ಪ್ರಾಣ ಬೆಳೆಯನ್ನು ರಕ್ಷಣೆ ಮಾಡಬೇಕೆಂದು ಮಾನ್ಯರಲ್ಲಿ ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಅಧಿಕಾರಿಗಳಾದ ಮೋಹನ್ ಅವರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.