ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಗರಣಗಳು ಹೆಚ್ಚಾಗಿವೆ. ಎಸ್.ಸಿ.ಎಸ್.ಟಿ ಅನುದಾನವನ್ನು ಗ್ಯಾರಂಟಿ ಭಾಗ್ಯಗಳಿಗೆ ಬಳಸಿದ್ದಾರೆ. ಮುಡಾ ಹಗರಣದಲ್ಲಿ ಮುಖ್ಯಮುಂತ್ರಿಗಳ ಪಾತ್ರವಿದೆ. ರಾಜ್ಯ ಸರ್ಕಾರ ರೈತ ಹಾಗೂ ಜನವಿರೋಧಿಯಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ಆರೋಪಿಸಿದರು.
ದೊಡ್ಡಬಳ್ಳಾಪುರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯವನ್ನು ಸಂತೃಪ್ತಿಪಡಿಸುವ ಬರದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕರಾವಳಿಯಲ್ಲಿ ಹಿಂದೂಪರ ಹೋರಾಟಗಾರರನ್ನು ಗಡಿಪಾರು ಮಾಡುವ ಹಾಗೂ ಇಲ್ಲಸಲ್ಲದ ದೂರುಗಳನ್ನು ದಾಖಲಿಸುವ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಮುಂದುವರಿಸಿದರೆ ಬಿಜೆಪಿ ಯುವ ಘಟಕದಿಂದ ಜೈಲ್ ಬರೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ದುರಾಡಳಿತ ತಾಂಡವಾಡುತ್ತಿದೆ…ಸರ್ಕಾರದ ತಿಜೋರಿಯಿಂದ 187ಕೋಟಿ ಲೂಟಿ ಮಾಡಿದ ತಪ್ಪಿತಸ್ಥರಿಗೆ ಯಾವ ಶಿಕ್ಷೆ ವಿಧಿಸಿದ್ದೀರಿ…? ಇದರಲ್ಲಿ ಭಾಗಿಯಾಗಿದ್ದ ಎಷ್ಟು ಜನ ಅಧಿಕಾರಿಗಳನ್ನು ವಜಾ ಮಾಡಿದ್ದೀರಿ…? ಕಾಂಗ್ರೆಸ್ ಸರ್ಕಾರ ಲಜ್ಜೆ ಗೆಟ್ಟ ಸರ್ಕಾರ ಎಂದು ಗುಡುಗಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜನ ಸಾಮಾನ್ಯರಿಗೆ, ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ… ಕೊಳ್ಳೆ ಹೊಡೆಯುವವರಿಗೆ ರಕ್ಷಣೆ, ಬಡವರ ಹೊಟ್ಟೆ ಮೇಲೆ ಬರೆ ಎಳೆಯುವುದೇ ಸರ್ಕಾರದ ಧೋರಣೆಯಾಗಿದೆ… ಇದೂವರೆಗೆ ಸಾಮಾನ್ಯ ಜನರು, ಬಡವರ, ರೈತರ, ವಿದ್ಯಾರ್ಥಿಗಳ ಪರ ಯಾವ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಒಂದು ಕೊಟ್ಟು ಮತ್ತೊಂದನ್ನು ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದರು…
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾವಳಿ ಮಿತಿಮೀರುತ್ತಿದೆ… ಒಂದು ಎಕರೆ ಗ್ರಾಂಟ್ ಮಾಡಿಸಿಕೊಳ್ಳಬೇಕಾದರೆ ಲಕ್ಷಗಳು ಕೊಡಬೇಕು. ಸಾಮಾನ್ಯ ರೈತ ಎಲ್ಲಿಂದ ಅಷ್ಟು ಹಣ ತರುತ್ತಾನೆ. ಕಂದಾಯ ಇಲಾಖೆ ದುಬಾರಿಯಾಗಿದೆ…. ರಾಜ್ಯದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು…
ಇದೂವರೆಗೆ ಮೂಲಭೂತ ಸೌಕರ್ಯಗಳಿಗಾಗಿ ನಮಗೆ ಸ್ಪೆಷಲ್ ಗ್ರಾಂಟ್ ಕೊಟ್ಟಿಲ್ಲ. ಒಂದು ಲಕ್ಷ ಕೋಟಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇಟ್ಟಿದ್ದಾರೆ ಎಂದು ಹೇಳುತ್ತಾರೆ. ನಮಗೆ ಯಾವ ಅನುದಾನವೂ ಬಂದಿಲ್ಲ. ಬಡವರು, ಮಹಿಳೆಯರು, ಯುವಕರು ಏನಾದರು ಕೇಳಿದ್ರಾ ಗ್ಯಾರಂಟಿ ಯೋಜನೆಗಳನ್ನು ತನ್ನಿ ಅಂತಾ… ಇದು ಎಲೆಕ್ಷನ್ ಗಿಮಿಕ್ ಅಷ್ಟೆ ಎಂದು ಹೇಳಿದರು.