ಕಷ್ಟಾಪಟ್ಟು ಮೇಯಿಸಿದ್ದ ಕುರಿ ಮಾರಾಟದ ಹಣ ಕೇಳಿದಕ್ಕೆ ಮರ್ಡರ್

ಆಕೆ ದಿನಪೂರ್ತಿ ಕಷ್ಟಾಪಟ್ಟು ದುಡಿದು ಇದ್ದ ನಾಲ್ಕು ಕುರಿಗಳನ್ನ ಮೇಯಿಸುತ್ತಾ ಜೀವನ ಸಾಗಿಸುತ್ತಿದ್ಲು. ಜೊತೆಗೆ ಕಳೆದ ಗಣೇಶನ ಹಬ್ಬದ ಸಮಯದಲ್ಲಿ ಕುರಿಯನ್ನ ಮಾರಿದ್ದು, ಹಣಕ್ಕಾಗಿ ಒತ್ತಾಯಿಸಿದ್ಲು. ಆದ್ರೆ ಕಷ್ಟಪಟ್ಟು ಸಾಕಿದ್ದ ಕುರಿ ಮಾರಿದ್ದ ವೃದ್ದೆಯನ್ನೆ ಯಾಮಾರಿಸಲು ಹೋದ ಭೂಪ ಕೊನೆಗೆ ಜಸ್ಟ್ ಐದಾರು ಸಾವಿರಕ್ಕಾಗಿ ಮರ್ಡರ್ ಮಾಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇವನ ಮುಖವನ್ನೊಮ್ಮೆ ಸರಿಯಾಗಿ ನೋಡಿ ಮೂತಿ ಮೇಲೆ ಇನ್ನೂ ನೆಟ್ಟಗೆ ಮೀಸೆ ಸಹ ಚಿಗುರಿಲ್ಲ. ಆದ್ರೆ, ಅಷ್ಟರಲ್ಲೆ ಹಗಲು ರಾತ್ರಿ ಅನ್ನದೆ ಕಷ್ಟಾಪಟ್ಟು ದುಡಿಯುತ್ತಿದ್ದ ವರಲಕ್ಷ್ಮೀ ಅನ್ನೂ ಈ ವೃದ್ದೆಗೆ ಚಟ್ಟ ಕಟ್ಟಿದ್ದಾನೆ. ಕಷ್ಟಕಾಲಕ್ಕೆ ಅಂತ ಇಟ್ಟುಕೊಂಡಿದ್ದ ಕುರಿಯನ್ನ ಮಾರಾಟ ಮಾಡಿಸುವುದಾಗಿ ವೃದ್ದೆಯನ್ನ ಪುಸಲಾಯಿಸಿದವನು ನಂತರ ಹಣ ಕೇಳ್ತಿದ್ದಂತೆ ಆಕೆಯನ್ನೆ ಶಿವನ ಪಾದ ಸೇರಿಸಿ ಇವನು ಮಾತ್ರ ಪಾಪ ತೊಳೆದುಕೊಳ್ಳಲು ದೇವರ ಮೊರೆ ಹೋಗಿದ್ದಾನೆ.

ಹೌದು, ಅಂದಹಾಗೆ ಜಸ್ಟ್ 5 ಸಾವಿರ ಹಣ ಕೇಳಿದಕ್ಕೆ ಚಿಗುರು ಮೀಸೆ ಯುವಕನಿಂದ ಭೀಕರವಾಗಿ ಕೊಲೆಯಾಗಿರುವ ಈಕೆ ವರಲಕ್ಷ್ಮೀ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ನಿವಾಸಿಯಾದ ಈಕೆ ಕಷ್ಟಕಾಲಕ್ಕೆ ಅಂತ ನಾಲ್ಕೈದು ಕುರಿಗಳನ್ನ ಖರೀದಿಸಿದ್ದು ಕೂಲಿ ಮಾಡುತ್ತಾ ಅವುಗಳನ್ನ ಮೇಯಿಸುತ್ತಿದ್ಲು. ಜೊತೆಗೆ ಕಳೆದ ಗಣೇಶ ಹಬ್ಬದ ಹೊಸ ತೊಡಕು ಸಂಧರ್ಭದಲ್ಲಿ ಕುರಿಯನ್ನ ಮಾರಾಟ ಮಾಡಿದ್ರೆ ಹೆಚ್ಚಿನ ಹಣ ಬರುತ್ತೆ ಅಂತ ವೃದ್ದೆಯನ್ನ ಪುಸಲಾಯಿಸಿದ ಪಕ್ಕದ ಮನೆಯ ಯುವಕ ಮಧು ಅನ್ನೋ ಇವನು ವೃದ್ದೆ ಬಳಿ ಕುರಿಗಳನ್ನ ತೆಗೆದುಕೊಂಡು ಹೋಗಿದ್ದು ಹಣ ನೀಡಿರಲಿಲ್ವಂತೆ. ಹೀಗಾಗಿ ಹಲವು ಬಾರಿ ಸಿಕ್ಕ ಸಿಕ್ಕ ಕಡೆಯೆಲೆಲ್ಲ ವೃದ್ದೆ ಹಣ ಕೇಳ್ತಿದಕ್ಕೆ ರೋಸಿಹೋದ ಖದೀಮ ಕೊನೆಗೆ ವೃದ್ದೆಗೆ ಹಣ ನೀಡದೆ ವೃದ್ದೆಯನ್ನೆ ಕೊಲೆ ಮಾಡಿದ್ದಾನೆ ಎಂದು ಮೃತ ವೃದ್ದೆಯ ಸಂಬಂಧಿ ಶ್ವೇತ ಆರೋಪಿಸಿದ್ದಾರೆ.

ಕಳೆದ ತಿಂಗಳು ಗಣೇಶ ಹಬ್ಬದ ಸಂಧರ್ಭದಲ್ಲಿ ವೃದ್ದೆಗೆ ಹಣ ಕೊಡುವುದಾಗಿ ರಸ್ತೆ ಬಳಿಗೆ ಕರೆಸಿಕೊಂಡು ಆಕೆಯನ್ನ ಕಾರು ಹತ್ತಿಸಿಕೊಂಡಿದ್ದ ಭೂಪ ನಂತರ ಅಕೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೇಳಿದ್ನಂತೆ. ಈ ವೇಳೆ ಆಕೆ ಕೊಡಲ್ಲ ನನ್ನ ಹಣ ಕೊಡು ಅಂತ ಗಲಾಟ ಮಾಡಿದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದವನೆ ನಂತರ ಸೀದಾ ವಿಜಯಪುರ ಪಟ್ಟಣದ ಅಮಾನಿಕೆರೆಯ ನೀರಿಗೆ ತಳ್ಳಿ ಎಸ್ಕೇಪ್ ಆಗಿದ್ದ. ಇನ್ನೂ ನೀರಿಗೆ ತಳ್ಳಿದ ಎರಡು ದಿನದ ನಂತರ ಮಹಿಳೆಯ ಮೃತದೇಹ ಹೊರಗಡೆ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕುಟುಂಬಸ್ಥರ ಶಂಕೆ ಮೆರೆಗೆ ಮಧುವನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮೃತಳ ಸಂಬಂಧಿ ಮಂಜುಳಾ ಹೇಳಿದ್ದಾರೆ.

ಒಟ್ಟಾರೆ ಕಷ್ಟಕಾಲಕ್ಕೆ ಅನುಕೂಲವಾಗುತ್ತೆ ಹಬ್ಬಕ್ಕೆ ನಾಲ್ಕು ಕಾಸು ಸಿಗುತ್ತೆ ಅಂತ ಕಷ್ಟಾ ಪಟ್ಟು ಸಾಕಿದ್ದ ಕುರಿಯ ಹಣಕ್ಕಾಗಿ ವೃದ್ದೆ ಕೊಲೆಯಾಗಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನೂ ಐದು ಸಾವಿರ ಹಣಕ್ಕಾಗಿ ಕೊಲೆ ಮಾಡಿದ ಆರೋಫಿ ಇದೀಗ ಮಾಡಿದುಣ್ಣೋ ಮಾರಾಯ ಅಂತ ಮುದ್ದೆ ಮುರಿಯಲು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

Leave a Reply

Your email address will not be published. Required fields are marked *

error: Content is protected !!