ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣೆಯು ದೇಶದ ಅತ್ತುತ್ತಮ 10ನೇ ಪೊಲೀಸ್ ಠಾಣೆಯಾಗಿ ಆಯ್ಕೆಯಾಗಿದೆ.
ಕೇಂದ್ರ ಗೃಹ ಸಚಿವಾಲಯ ನೀಡುವ ವಾರ್ಷಿಕ ಪ್ರಶಸ್ತಿಗೆ ಈ ಠಾಣೆ ಪಾತ್ರವಾಗಿದೆ. ಈ ಬಗ್ಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ತೆಕ್ಕಲಕೋಟೆ ಠಾಣೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಾರ್ಯದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾರ್ವಜನಿಕ ವಲಯದಲ್ಲೂ ಸಹ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೇಂದ್ರದಿಂದ ಪ್ರಶಸ್ತಿ ಪತ್ರ ಬರುವುದಷ್ಟೇ ಬಾಕಿ ಇದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಒಬ್ಬರು ಪಿಎಸ್ಐ, ಇಬ್ಬರು ಎಎಸ್ಐ, 6 ಹೆಡ್ ಕಾನ್ಸ್ಟೇಬಲ್, 10 ಜನ ಪೊಲೀಸ್ ಕಾನ್ಸ್ಟೇಬಲ್, ಮೂವರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದಲ್ಲಿರುವ 17,535 ಪೊಲೀಸ್ ಠಾಣೆಗಳ ಪೈಕಿ 78 ಠಾಣೆಗಳನ್ನು ಟಾಪ್ 10ರ ಆಯ್ಕೆಗಾಗಿ ಅಂತಿಮಗೊಳಿಸಲಾಗಿತ್ತು. ಇದರಲ್ಲಿ ಕರ್ನಾಟಕದಿಂದ ತೆಕ್ಕಲಕೋಟೆ, ಹಚೊಳ್ಳಿ ಪೊಲೀಸ್ ಠಾಣೆ ಮತ್ತು ಬೆಂಗಳೂರಿನ ಯಲಹಂಕ ನ್ಯೂ ಟೌನ್ ಠಾಣೆಗಳು ಸ್ಥಾನ ಪಡೆದಿದ್ದವು. ಅಂತಿಮವಾಗಿ ತೆಕ್ಕಲಕೋಟೆ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಅತ್ಯುತ್ತಮ ಠಾಣೆಯ ಪಟ್ಟಿಯಲ್ಲಿ ಸ್ಥಾನ ಪಡೆಯಲು ಹಲವು ಮಾನದಂಡಗಳಿವೆ. ಠಾಣೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪರಾಮರ್ಶೆಗೆ ಒಳಪಡಿಸಿ, ಕೇಂದ್ರ ಗೃಹ ಇಲಾಖೆ ಈ ಪ್ರಶಸ್ತಿ ನೀಡುತ್ತದೆ.
ಪ್ರಶಸ್ತಿಗೆ ಇರುವ ಮಾನದಂಡಗಳು : ಪೊಲೀಸ್ ಠಾಣೆಯ ಸಮಗ್ರ ಕಾರ್ಯನಿರ್ವಹಣೆಯನ್ನು ಇದಕ್ಕಾಗಿ ಪರಿಗಣಿಸಲಾಗುತ್ತದೆ. ಜನಸ್ನೇಹಿಯಾಗಿ ಠಾಣೆಯೊಂದು ಎಷ್ಟು ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂಬುದರ ಕುರಿತು ಪರಿಗಣನೆಯಾಗುತ್ತದೆ.
ಸಿಬ್ಬಂದಿ ವರ್ತನೆ, ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಇತ್ಯರ್ಥದ ಶೇಕಡಾವಾರು, ಇತ್ಯರ್ಥವಾದ ಪ್ರಕರಣಗಳ ಸಮರ್ಪಕತೆ, ಪೊಲೀಸ್ ಠಾಣೆ ವತಿಯಿಂದ ಮಾಡಿರುವ ದಾಳಿಗಳ ಪ್ರಮಾಣ, ಠಾಣೆಯ ಮೂಲ ಸೌಕರ್ಯ, ಸಾರ್ವಜನಿಕರೊಂದಿಗಿನ ಠಾಣಾ ಸಿಬ್ಬಂದಿ ವ್ಯವಹಾರ, ವಿಶೇಷವಾಗಿ ಅಶಕ್ತರು, ವಿಕಲಚೇತನರು, ಮಹಿಳೆಯರೊಂದಿಗೆ ಪೊಲೀಸ್ ಠಾಣೆ ಎಷ್ಟು ಸ್ನೇಹಪೂರ್ವಕವಾಗಿ ವರ್ತಿಸುತ್ತಿದೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಕೂಡಾ ಸಂಗ್ರಹಿಸಲಾಗುತ್ತದೆ. ಒಟ್ಟಾರೆ ಠಾಣೆಯ ದೈನಂದಿನ ಕಾರ್ಯ ನಿರ್ವಹಣೆ ಮತ್ತು ಅಂತರ್ಜಾಲ ಹಾಗೂ ಸೈಬರ್ ತಂತ್ರಜ್ಞಾನದ ಅಳವಡಿಕೆ, ಹೀಗೆ ಹತ್ತು ಹಲವು ಮಾನದಂಡಗಳು ಇವೆ.
ಪೊಲೀಸ್ ಠಾಣೆಯ ಕುರಿತಾದ ಎಲ್ಲಾ ವಿವರಗಳನ್ನು ಹಾಗೂ ಪ್ರಶಸ್ತಿಗೆ ಬೇಕಾಗಿರುವ ಮಾನದಂಡಗಳನ್ನು ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಹಾಗೂ ಖಾಸಗಿ ಏಜೆನ್ಸಿಗಳ ಮೂಲಕ ಸಂಗ್ರಹಿಸಿ, ಎಲ್ಲಾ ವಿವರಗಳ ಪರಾಮರ್ಶೆ ಮಾಡಿ ಪ್ರಶಸ್ತಿಯನ್ನು ನೀಡುತ್ತಾರೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.