ಕನ್ನಡ ಸಾಹಿತ್ಯ ತಾಯಿ ಬೇರು- ನಾನು ಅದರ ಒಂದು ಟೊಂಗೆ- ಬೂಕರ್ ಪ್ರಶಸ್ತಿ ವಿಜೇತೆ‌ ಬಾನು ಮುಷ್ತಾಕ್

ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನವು ಬೂಕರ್ ಪ್ರಶಸ್ತಿ ಪಡೆದಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಈ ಗೌರವ ಸಂದಿದೆ. ದೀಪಾ ಭಾಸ್ತಿ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದು, ಇದು ಕನ್ನಡಕ್ಕೆ ಸಂದ ಗೌರವ ಎಂದು ಗಣ್ಯರು ಕೊಂಡಾಡಿದ್ದಾರೆ.

ಕನ್ನಡ ಕಸ್ತೂರಿ ಕಂಪು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸುವಂತೆ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಮಾಡಿ, ಲಂಡನ್ ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡದ ಸಂಭ್ರಮವನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಕನ್ನಡನಾಡಿನಲ್ಲೂ ಸಂಭ್ರಮವನ್ನು ಆಚರಿಸಲು ಇಂದು ಬೆಂಗಳೂರಿಗೆ ಬಂದಿದ್ದೇನೆ. ಲಂಡನ್ ನಲ್ಲಿ ಕನ್ನಡ ವಿರಾಜಮಾನವಾಯ್ತು, ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಸಿದೆವು. ಇದು ನಮಗೆ ವಿಶಿಷ್ಟ ಅನುಭವಾಯಿತು ಎಂದರು‌

ಕನ್ನಡಿಗರ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನೀವು ತೋರಿಸಿದ ಪ್ರೀತಿ, ಅಭಿಮಾನವು ನನಗೆ ಶಕ್ತಿಯಾಯಿತು. ಕನ್ನಡ ಸಾಹಿತ್ಯ ತಾಯಿ ಬೇರು. ನಾನು ಅದರ ಒಂದು ಟೊಂಗೆ ಅಷ್ಟೆ ಎಂದು ಹೇಳಿದರು.

ಸಾಧನೆಗೈದ ಕನ್ನಡತಿಯರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ವೆಂಕಟೇಶ್ ಎಂ ವಿ ಹಾಗೂ ಇಲಾಖೆಯ ನಿರ್ದೇಶಕರಾದ ಕೆ ಎಂ ಗಾಯತ್ರಿ ಸೇರಿದಂತೆ ಇತರರು ಏರ್ಪೋರ್ಟ್ ನಲ್ಲಿ ಭವ್ಯವಾಗಿ ಸ್ವಾಗತ‌ಕೋರಿದರು.

ಈ ವೇಳೆ ಡೊಳ್ಳು ಹಾಗೂ ಯಕ್ಷಗಾನ ತಂಡಗಳು ಅವರ ಸ್ವಾಗತಕ್ಕೆ ಸಾಕ್ಷಿಯಾದವು.

Leave a Reply

Your email address will not be published. Required fields are marked *