ಕುವೆಂಪು ಅವರ ಸಾಹಿತ್ಯವು ವೈಚಾರಿಕತೆಯಿಂದ ಹಿಡಿದು ಆಧ್ಯಾತ್ಮಿಕತೆಯ ತನಕ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಜನಸಾಮಾನ್ಯರನ್ನು ಶ್ರೀಸಾಮಾನ್ಯ ಎಂದು ಕರೆದ ಕುವೆಂಪು ಅವರು ಶತಮಾನದ ಶ್ರೇಷ್ಠ ಸಾಹಿತಿಯಾಗಿದ್ದಾರೆ ಎಂದು ದೊಡ್ಡಬಳ್ಳಾಪುರ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಜಿ.ಎಸ್.ಸ್ಮಿತಾ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ಡಾ.ಹುಲಿಕಲ್ ನಟರಾಜು ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಕನ್ನಡದ ಗಾನ ಪಯಣ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಕುರಿತು ಮಾತನಾಡಿದರು.
ಸಮಸಮಾಜ ನಿರ್ಮಾಣವಾಗಬೇಕು, ಸಾಹಿತ್ಯ ಜನಸಾಮಾನ್ಯರನ್ನು ತಲುಪುಬೇಕು. ಮೌಢ್ಯತೆ, ಕಂದಾಚಾರ, ಅಂಧಭಕ್ತಿಯಿಂದ ಜನರು ಹೊರಬಂದು ನಿಜ ದೇಶಭಕ್ತಿ ಮತ್ತು ವಿಶ್ವಮಾನವ ಪ್ರಜ್ಞೆ. ನಾಡು ನುಡಿ, ದೇಶಪ್ರೇಮ, ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಸಾಮಾಜಿಕ ಪ್ರಜ್ಞೆ, ಜನಸಾಮಾನ್ಯರ ಬದುಕು ಬವಣೆಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಅನಾವಣಗೊಳಿಸಿದ್ದಾರೆ ಎಂದರು.
ಮಕ್ಕಳ ಸಾಹಿತ್ಯ ಬೊಮ್ಮನಹಳ್ಳಿ ಕಿಂದರಜೋಗಿಯಿಂದ ಹಿಡಿದು ಮಹಾಕಾವ್ಯ ಶ್ರೀರಾಮಾಯಣದರ್ಶನಂ ತನಕ ಕುವೆಂಪು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಕುವೆಂಪು ಅವರ ಸಾಹಿತ್ಯ ಸಮಾಜಮುಖಿ, ಸಮಾಜ ಪರಿವರ್ತನೆ ಸಹಕಾರಿಯಾಗಿದೆ ಎಂದರು.
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ನೇಗಿಲಮೇಲೆ ನಿಂತಿದೆ ಧರ್ಮ, ಮಂತ್ರಮಾಂಗಲ್ಯ, ವಿಶ್ವ ಮಾನವ ಸಂದೇಶ ಮುಂತಾದ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ವಿಶ್ವಮಾನ್ಯಗೊಳಿಸಿದರು ಎಂದರು.
ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಕನ್ನಡ ಅಧ್ಯಾಪಕ ಹೆಗಡೆ ಮಾತನಾಡಿ, ಕುವೆಂಪು ಅವರ ಸೃಜನಶೀಲ ಪ್ರತಿಭೆ ಸಾಕ್ಷಿ ಎಂದರೆ ಪಕ್ಷಿಗಳ ಹಾರಾಟ ನೋಡಿದ ದೇವರು ರುಜು ಮಾಡಿದನು ಎಂಬ ರೂಪಕದಲ್ಲಿ ನೋಡಬಹುದಾಗಿದೆ. ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ಪೂಜಿಸುವ ಬಾರಾ ಕವಿತೆಯ ಸಾಲು ನಿಜದೇಶಭಕ್ತಿಯನ್ನು ಪ್ರತಿಪಾದಿಸುತ್ತವೆ. ಜೀವಪರವಾದ ಕುವೆಂಪು ಸ್ತ್ರೀಪರ ನಿಲುವುಗಳನ್ನು ಮಹಾಕಾವ್ಯದಲ್ಲಿ ಬರುವ ಮಂಥರೆ, ಊರ್ವಿಳೆ ಪಾತ್ರಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರ ಸಾಹಿತ್ಯ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ ಎಂದರು.
ಕುವೆಂಪು ಅವರ ಭಾವಗೀತೆಗಳನ್ನು ಕಲಾವಿದರಾದ ರವಿರಾಜ್, ನಾಗರತ್ಮಮಹಾಬಲೇಶ್ವರ್, ಚಂದ್ರಶೇಖರ್, ನಾಗರತ್ನಮ್ಮ, ಎಂ.ಪಿ.ಸಿ.ವೆಂಕಟೇಶ್, ಷಫೀರ್, ನಾಗದಳ ನಟರಾಜ್, ದರ್ಗಾಜೋಗಿಹಳ್ಳಿ ಮಲ್ಲೇಶ್ ಮುಂತಾದವರು ಹಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೋಟೋಗ್ರಾಫರ್ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಪತ್ತಕುಮಾರ್ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಗೌರವ ಅಧ್ಯಕ್ಷ. ಕಂಟನುಕುಂಟೆ ಕೃಷ್ಣಮೂರ್ತಿ, ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್, ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್, ಲಯನ್ಸ್ ಕ್ಲಬ್ ಕೋಶಾಧ್ಯಕ್ಷ ಕೆ.ಪಿ.ಲಕ್ಷ್ಮೀನಾರಾಯಣ್, ಮಾಜಿ ಅಧ್ಯಕ್ಷ ಆರ್
ಎಸ್.ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮತ್ತು ಪದಾಧಿಕಾರಿಗಳು, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್ ಮತ್ತು ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.