ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಶೀರ್ಷಿಕೆಯಡಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಕಾರದ ವತಿಯಿಂದ ಜುಲೈ 1 ರಿಂದ ಅಕ್ಟೋಬರ್ 7ರವರೆಗೆ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಕರಣದ ಶೀಘ್ರ ಇತ್ಯರ್ಥ ಇಬ್ಬರು ಪಕ್ಷದಾರರೂ ಸಹ ಗೆಲುವಿನ ಸಮಾಧಾನ ಪಡೆದುಕೊಳ್ಳುವಲ್ಲಿ ಈ ಅಭಿಯಾನ ನೆರವಾಗಲಿದ್ದು, ಪಕ್ಷಗಾರರು ಈ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಕಾರದ ತಾಲೂಕು ಸದಸ್ಯ ಕಾರ್ಯದರ್ಶಿ ದಾಸರಿ ಕ್ರಾಂತಿ ಕಿರಣ್ ಅವರು ತಿಳಿಸಿದರು.
ನಗರದ ನ್ಯಾಯಾಲಯ ಆವರಣದಲ್ಲಿರುವ ತಾಲೂಕು ವಕೀಲರ ಸಂಘದ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧ್ಯಸ್ಥಿಕೆಯು ನ್ಯಾಯಾಲಯಗಳಲ್ಲಿ ನಡೆಯುವ ಪ್ರಕ್ರಿಯೆಗಳಿಗಿಂತ ಭಿನ್ನವಾಗಿರಲಿದೆ. ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಲ್ಲಿ ವಕೀಲರು ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷಿಗಳು, ದಾಖಲೆಗಲನ್ನು ಪರಿಗಣಿಸಲಾಗುತ್ತದೆ. ಆದರೆ, ಮಧ್ಯಸ್ಥಿಕೆ ಅಭಿಯಾನದಲ್ಲಿ ಪ್ರಕರಣಕ್ಕೆ ಸಂಬಂಧಪಡದ, ಕಾನೂನು ಸೇವೆಗಳ ಪ್ರಾಧಿಕಾರದಿಂದ ತರಬೇತಿ ಪಡೆದ ಅಕೃತ ವ್ಯಕ್ತಿಯು ಮಧ್ಯಸ್ಥಿಕೆ ವಹಿಸಲಿದ್ದು, ಇವರು, ಕಾನೂನು ಹಾಗೂ ಪ್ರಕರಣಗಳ ವಿಚಾರದಲ್ಲಿ ಪರಿಣಿತಿ ಹೊಂದಿರುತ್ತಾರೆ. ಅವರು ಪಕ್ಷದಾರರ ಮಧ್ಯಸ್ಥಿಕೆ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣ ಇತ್ಯರ್ಥಗೊಳಿಸಲು ಸೂಚಿಸುತ್ತಾರೆ. 60 ದಿನಗಳ ಕಾಲಾವಕಾಶದಲ್ಲಿ ಇಬ್ಬರೂ ಪಕ್ಷಗಾರರು ಒಪ್ಪಿದ್ದಲ್ಲಿ ಈ ಪ್ರಕರಣ ಸುಲಭವಾಗಿ ಇತ್ಯರ್ಥವಾಗಿ, ಶೀಘ್ರ ನ್ಯಾಯ ದೊರೆಯುತ್ತದೆ. ಕಡಿಮೆ ಅವಧಿ, ಕಡಿಮೆ ಖರ್ಚಿನಲ್ಲಿ ನ್ಯಾಯ ದೊರೆಯಲಿದ್ದು, ಇಬ್ಬರೂ ಪಕ್ಷಗಾರರು ಗೆಲ್ಲುವ ಅವಕಾಶವಿದೆ ಎಂದರು.
ಮಧ್ಯಸ್ಥಿಕೆದಾರನು ವಿವಾದವಿರುವ ಇಬ್ಬರು ಪಕ್ಷಗಾರರ ಮೇಲೆ ತನ್ನ ನಿರ್ಧಾರವನ್ನು ಹೇರುವುದಿಲ್ಲ ಮತ್ತು ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಒತ್ತಾಯಪಡಿಸುವುದಿಲ್ಲ. ಮಧ್ಯಸ್ಥಿಕೆದಾರನು ಇಬ್ಬರು ಪಕ್ಷಗಾರರ ಒಮ್ಮತದ ನಿರ್ಧಾರವನ್ನು ಒಪ್ಪಂದ ಪತ್ರದಲ್ಲಿ ನಮೂದಿಸಿ, ಅದರ ಮೇಲೆ ಇಬ್ಬರು ಪಕ್ಷಗಾರರ ಸಹಿಗಳನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಒಪ್ಪಂದ ಪತ್ರದಲ್ಲಿರುವ ಷರತ್ತುಗಳು ಕಾನೂನಿಗೆ ಪೂರಕವಾಗಿದ್ದರೆ ನ್ಯಾಯಾಲಯ ಒಪ್ಪಂದ ಪತ್ರವನ್ನು ಅಂಗೀಕರಿಸಿ ತೀರ್ಪನ್ನು ನೀಡುತ್ತದೆ. ಒಪ್ಪಂದ ಪತ್ರದಲ್ಲಿರುವ ಯಾವುದೇ ಅಂಶ ಕಾನೂನಿಗೆ ವಿರುದ್ಧವಾಗಿದ್ದರೆ ಅಥವಾ ಪಕ್ಷಗಾರರ ಗಮನಕ್ಕೆ ತರದೇ ತಯಾರಿಸಿದ್ದರೆ ನ್ಯಾಯಾಲಯ ಅಂತಹ ಒಪ್ಪಂದ ಪತ್ರವನ್ನು ತಿರಸ್ಕರಿಸಬಹುದು. ನ್ಯಾಯಾಲಯದಲ್ಲಿರುವ ಬಾಕಿ ಇರುವ ಪ್ರಕರಣವನ್ನು ಯಾವುದೇ ಹಂತದಲ್ಲಿ ಮಧ್ಯಸ್ಥಿಕೆಗೆ ಕಳುಹಿಸಬಹುದು. ಇಬ್ಬರು ಪಕ್ಷಗಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ಪರಸ್ಪರ ಸಂವಹನದ ಮೂಲಕ ಪೂರಕ ವಾತವರಣವನ್ನು ನಿರ್ಮಿಸಿ ಅತಿ ಶೀಘ್ರವಾಗಿ ಹಾಗೂ ಅಂತಿಮ ಪ್ರಕರಣವನ್ನು ಸಂವಹನದ ಮೂಲಕ ಇತ್ಯರ್ಥಗೊಳಿಸಲು ಮಧ್ಯಸ್ಥಿಕೆ ಪ್ರಕ್ರಿಯೆ ಒಂದು ಸುವರ್ಣ ಅವಕಾಶವಾಗಿದೆ ಎಂದರು.
ಮಧ್ಯಸ್ಥಿಕೆಗೆ ಒಳಪಡುವ ಪ್ರಕರಣಗಳು:
ವೈವಾಹಿಕ ಪ್ರಕರಣಗಳು, ಕೌಟಂಬಿಕ ದೌರ್ಜನ್ಯದ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ವಾಣಿಜ್ಯ ಪ್ರಕರಣಗಳು, ನೌಕರರ ಸೇವಾ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳು, ರಾಜಿ ಆಗಬಹುದಾದಂತಹ ಅಪರಾಧ ಪ್ರಕರಣಗಳು, ಗ್ರಾಹಕರ ಪರಿಹಾರದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಕರಣದ ಪ್ರಕರಣಗಳು, ಪಾಲು ವಿಭಾಗ ಪ್ರಕರಣಗಳು, ಮನೆ ಬಾಡಿಗೆ ಅಥವಾ ಬಾಡಿಗೆದಾರನನ್ನು ಹೊರಹಾಕುವಿಕೆಗೆ ಸಂಬಂಧಿಸಿದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರದ ಪ್ರಕರಣಗಳು, ಕಾರ್ಮಿಕ ವಿವಾದಗಳು, ಇತರೆ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ತಾಲೂಕಿನಲ್ಲಿ ಈವರೆಗೆ 43 ಪ್ರಕರಣಗಳು ವಿಶೇಷ ಮಧ್ಯಸ್ಥಿಕೆ ಮೂಲಕ ಬಂದಿದ್ದು, ಈವರೆಗೆ 15 ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.
ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ ಮಾತನಾಡಿ, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು ಬಾಧ್ಯತೆಗಳ ಉಳಿವಿಗಾಗಿ ಕಾನೂನು ಸೇವೆಗಳ ಪ್ರಾಕಾರ ಕಾನೂನು ಸೇವೆಗಳನ್ನು ನೀಡುತ್ತಿದೆ. ಈ ದಿಸೆಯಲ್ಲಿ ವಿಶೇಷ ಮಧ್ಯಸ್ಥಿಕೆ ಅಭಿಯಾನ ರಾಷ್ಟ್ರವ್ಯಾಪ್ತಿ ನಡೆಯುತ್ತಿದೆ. ನ್ಯಾಯಾಲಯದಲ್ಲಿ ವಕೀಲರಂತೆ ಪ್ರಜೆಗಳ ಪಾತ್ರವೂ ಮುಖ್ಯವಾಗಿದೆ. ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು ಹಾಗೂ ಪದಾಕಾರಿಗಳು ಇದ್ದರು.
ಬಾಂಗ್ಲಾ......... ಒಂದು ಎಚ್ಚರಿಕೆಯ ಪಾಠ......... ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ...... ಬಾಂಗ್ಲಾದೇಶದಲ್ಲಿ…
ಜೆಸಿಬಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ…
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…
View Comments
Namma jaminina sarve number chakkubandi tappagiruvudu, sir..