
ಐ ಪಿ ಎಲ್……
ಐ ಪಿ ಎಲ್ ಹಬ್ಬವೋ – ತಿಥಿಯೋ – ಶಾಪವೋ……
ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಇದೇ ಮಾರ್ಚ್ 28 ರಿಂದ ಪ್ರಾರಂಭ……
ಕ್ರಿಕೆಟ್ ಆಟಗಾರರು – ಫ್ರಾಂಚೈಸಿಗಳು – ಕ್ಲಬ್, ಬಾರ್ ಗಳು – ಜಾಹೀರಾತುದಾರರು – ಅದರ ಪ್ರಚಾರ ರಾಯಭಾರಿಗಳು – ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ…..
ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ…….
ಈ ಆಟ ಒಂದು ದೊಡ್ಡ ಆರ್ಥಿಕ ಚಟುವಟಿಕೆಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅಷ್ಟೇ ಸಮಾಜ ಘಾತಕವೂ ಆಗಿದೆ.
ಆರ್ಸಿಬಿಯ ಐ ಪಿ ಎಲ್ ಗೆಲುವಿನ ಸಂಭ್ರಮದ ಸಾವುಗಳ ಘಟನೆಯ ನೆನಪು ಇನ್ನೂ ಹಸಿರಾಗಿರುವಾಗ……
ಐಪಿಎಲ್ ಎಂಬುದು ಒಂದು ಕ್ರೀಡಾ ಚಟುವಟಿಕೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ ನೊಂದಾಯಿಸಿಕೊಂಡು, ಅದರ ನಿಯಮದ ಪ್ರಕಾರ ಫ್ರಾಂಚೈಸಿ ಅಥವಾ ಕ್ಲಬ್ ರೂಪದ ಆಕಾರ ಪಡೆದು, ವಿಶ್ವದ ಪ್ರಖ್ಯಾತ ಕ್ರಿಕೆಟ್ ಆಟಗಾರರನ್ನು ವಸ್ತುವಿನ ರೀತಿಯಲ್ಲಿ ಹರಾಜಿನಲ್ಲಿ ಬೆಲೆ ನೀಡಿ, ತಂಡ ಕಟ್ಟಿ, ಆ ಮುಖಾಂತರ ಕೇವಲ 120/120 ಎಸೆತಗಳ ಆಟವನ್ನು ಆಡಿಸಿ, ಜನರನ್ನು ಹುಚ್ಚೆಬ್ಬಿಸಿ ದುಡ್ಡು ಮಾಡುವ ವ್ಯಾಪಾರ, ಮನರಂಜನೆ, ವಿಕೃತತೆಯ ಒಂದು ರೂಪ. ಇದರಿಂದ ಐಪಿಎಲ್ ಎಂಬ ಜೂಜಾಟ ಮಾತ್ರವಲ್ಲ, ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್, ಪೆಪ್ಸಿ, ಕೋಕ್, ಅನೇಕ ಕ್ಲಬ್, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಕ್ಯಾಸಿನೊ ಮುಂತಾದ ಮನರಂಜನಾ ಉದ್ಯಮಗಳ ಆರ್ಥಿಕ ಲಾಭ ಹಾಗೂ ಇಂದಿನ ಯುವ ಜನಾಂಗದ ಸೀಡ್ಲೆಸ್ ಮನಸ್ಥಿತಿಯ ಸಂಪೂರ್ಣ ಉಪಯೋಗ ಪಡೆಯುವ ಒಂದು ವಿಸ್ತೃತ ರೂಪ.
ಇಂತಹ ಜೂಜಾಟವನ್ನು ಇಡೀ ರಾಷ್ಟ್ರಕ್ಕೆ ಹುಚ್ಚಿನಂತೆ ಹಬ್ಬಿಸಿ, ಅದೊಂದು ಮಹಾನ್ ಸಾಧನೆಯಂತೆ ಬಿಂಬಿಸಿ, ಜನರನ್ನು ಮರಳು ಮಾಡುವ ದಂಧೆ. ಏಕೆಂದರೆ ಇದರಲ್ಲಿ ಭಾಗವಹಿಸಿದ ಆಟಗಾರರು ಬಹುತೇಕ ಜೂಜುಕೋರರು, ಜೂಜನ್ನು ಪ್ರೇರೇಪಿಸುವವರು, ಪೆಪ್ಸಿ ಕೋಲಾಗಳ ಜಾಹೀರಾತು ಮಾಡೆಲ್ ಗಳು ಇತ್ಯಾದಿಗಳು. ಇವರು ಒಂದು ದಿನಕ್ಕೂ ಈ ವ್ಯವಸ್ಥೆಯ ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ, ಸಿರಿಧಾನ್ಯಗಳ ಜ್ಯೂಸ್ ಅಥವಾ ಇನ್ಯಾವುದೇ ಆರೋಗ್ಯಕರ ಪೇಯಗಳ ಬಗ್ಗೆ ಜಾಹೀರಾತು ನೀಡಿಲ್ಲ. ಯಾವುದೇ ಸಾಮಾಜಿಕ ಜವಾಬ್ದಾರಿ ಮೆರೆದಿಲ್ಲ. ಕೇವಲ ಹೊಡಿಬಡಿ ಆಟ ಮತ್ತು ಹಣದ ಹಿಂದೆ ಹೋದವರು. ಜನರ ಈ ಹುಚ್ಚು ಕಳೆದ ಬಾರಿ 11 ಜನರ ಸಾವಿಗೆ, 25 ಕ್ಕೂ ಹೆಚ್ಚು ಜನರ ಗಾಯಕ್ಕೆ ಕಾರಣವಾಗಿದೆ.
ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ – ಕಾರ್ಪೊರೇಟ್ ವ್ಯವಸ್ಥೆ, ಜನರ ದುರಾಸೆಯ ಪ್ರವೃತ್ತಿ, ಸುಲಭವಾಗಿ ಹಣ ಮಾಡಬೇಕು ಎಂಬ ಮನೋಭಾವ ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯಾಗಿ ಗುರುತಿಸಬೇಕು.
ವಿವಿಧ ರೀತಿಯ ಆಕರ್ಷಕ ಲಾಭದ ಬೆಟ್ಟಿಂಗ್ ಆ್ಯಪ್ ಗಳು ಮೊಬೈಲ್ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ. ಸಾಕಷ್ಟು ಮಧ್ಯಮ ವರ್ಗದ ಜನರೇ ಇದರಲ್ಲಿ ಹಣ ಹೂಡುತ್ತಾರೆ. ಈ ಜೂಜಿನಲ್ಲಿ ಲಾಭ ಮಾಡಿ ಯಶಸ್ವಿಯಾದವರು ತುಂಬಾ ತುಂಬಾ ಕಡಿಮೆ. ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡವರು ಕೊನೆಗೆ ಪ್ರಾಣವನ್ನೂ ಕಳೆದುಕೊಂಡವರೇ ಹೆಚ್ಚು.
ಪ್ರಾರಂಭದಲ್ಲಿ ಸರಳವಾಗಿ ಖುಷಿ ಖುಷಿಯಾಗಿ ಇದು ನಮ್ಮನ್ನು ಸೆಳೆಯತೊಡಗುತ್ತದೆ. ಹಾಗೆಯೇ ಮುಂದುವರೆದಂತೆ ಆಳಕ್ಕೆ ಎಳೆದೊಯ್ಯುತ್ತದೆ. ಕೊನೆಗೆ ನಮ್ಮ ಅಸ್ತಿತ್ವವನ್ನೇ ಮರೆಸುತ್ತದೆ. ನಮ್ಮ ಭಾವನೆಗಳನ್ನು ಬೆಟ್ಟಿಂಗ್ ನಿಯಂತ್ರಿಸುತ್ತದೆ. ಮಾನ ಮರ್ಯಾದೆ ಕುಟುಂಬದ ಜವಾಬ್ದಾರಿ ಭವಿಷ್ಯದ ಕಷ್ಟಗಳು ಯಾವುದೂ ಆ ಕ್ಷಣದಲ್ಲಿ ನೆನಪಾಗದಂತೆ ಮಾಡುತ್ತದೆ.
ನಮ್ಮಲ್ಲಿ ಸೋಮಾರಿತನ ಬೆಳೆಸುತ್ತದೆ. ಹಣಕ್ಕಾಗಿ ಯಾರನ್ನು ಬೇಕಾದರೂ ಅಂಗಲಾಚುವ, ಏನನ್ನೂ ಬೇಕಾದರೂ ಮಾಡುವ, ಯಾವುದನ್ನು ಬೇಕಾದರೂ ಮಾರುವ ಮನಸ್ಥಿತಿ ಸೃಷ್ಟಿ ಮಾಡುತ್ತದೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರು ಇದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಕೆಲವರು ದುಷ್ಚಟಗಳಿಗೆ ಬಲಿಯಾದರೆ, ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡು ತೀರಾ ಕೆಳಹಂತಕ್ಕೆ ಕುಸಿದರೆ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಊರು ಬಿಟ್ಟು ಓಡಿ ಹೋಗುವವರು, ಸಂಸಾರದಿಂದ ವಿಚ್ಚೇದಿತರಾಗುವವರು, ಮಾನಸಿಕ ಖಿನ್ನತೆಗೆ ಒಳಗಾಗುವವರು ಸಹ ಸಾಕಷ್ಟು ಜನರಿದ್ದಾರೆ.
ಇದು ಅಧೀಕೃತವಾದರು – ಅನಧೀಕೃತವಾದರು ಪರಿಣಾಮಗಳಲ್ಲಿ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ಕಾರಣ ಈ ನೆಲದ ಸಂಸ್ಕೃತಿಗೆ ಈ ಬೆಟ್ಟಿಂಗ್ ಒಗ್ಗುವುದಿಲ್ಲ. ಶ್ರಮ ಸಂಸ್ಕೃತಿ, ಕಾಯಕವೇ ಕೈಲಾಸ, ಉದ್ಯೋಗಂ ಪುರುಷ ಲಕ್ಷಣಂ, ಎಂಬ ಮಾತುಗಳ ಜೊತೆಗೆ ಅನೇಕ ಗಾದೆ ಮಾತುಗಳು ಈ ರೀತಿ ಸುಲಭವಾಗಿ ಬಂದ ಹಣ ಉಳಿಯುವುದಿಲ್ಲ ಅಥವಾ ಅದು ನಮ್ಮನ್ನು ದಾರಿ ತಪ್ಪಿಸುತ್ತದೆ ಎಂದೇ ಅನುಭವದಿಂದ ಸಾಬೀತಾಗಿದೆ.
ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ, ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಜನರ ಹುಚ್ಚು ಮನಸ್ಸಿನ ಹೊಳೆಯಲ್ಲಿ ಬೆಟ್ಟಿಂಗ್ ನಿಲ್ಲಿಸುವುದು ಅಥವಾ ಇಲ್ಲದಂತೆ ಮಾಡುವುದು ಕಷ್ಟ. ಅದಕ್ಕೆ ಬದಲಾಗಿ ನಾವುಗಳೇ ಆ ಚಟಕ್ಕೆ ಬಲಿಯಾಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಮತ್ತು ನಮ್ಮ ಸುತ್ತಮುತ್ತಲಿನ ಪರಿಚಿತರು ಸ್ನೇಹಿತರು ಇದಕ್ಕೆ ಬಲಿಯಾಗದಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.
ಸಂಘ ಸಂಸ್ಥೆಗಳನ್ನು ನಡೆಸುವವರು ತಮ್ಮ ಸದಸ್ಯರುಗಳಿಗೆ ಸಾಧ್ಯವಾದಷ್ಟು ಎಚ್ಚರಿಕೆ ನೀಡಬೇಕು…….
ಒಂದು ಅತ್ಯುತ್ತಮ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದು ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು ಒಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ದುರ್ಗತಿಗೆ ಕಾರಣವಾಗುತ್ತಿರುವುದು ನಮ್ಮ ಸಮಾಜದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ.
ಆಡಳಿತಾತ್ಮಕ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ. ಐ ಪಿ ಎಲ್ ಅಥವಾ ಅದರಿಂದಾಗುವ ಬೆಟ್ಟಿಂಗ್ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿ……
ನಾನು ಆಗಾಗ ಹೇಳುವಂತೆ ಇದು ಸೀಡ್ಲೆಸ್ ಯುವ ಜನಾಂಗ. ಯೋಚನಾ ಶಕ್ತಿಗೆ ಬದಲು ಗುಲಾಮಿ ಮನಸ್ಥಿತಿ ಬೆಳೆದಿದೆ. ಕಳೆದ ವರ್ಷ ಆರ್ಸಿಬಿ ಪ್ರಶಸ್ತಿ ಗೆದ್ದಾಗ 18 ವರ್ಷ ಕಾದಿದ್ದೇವೆ ಎಂಬ ಹುಚ್ಚನ್ನು, ಕಿಚ್ಚನ್ನು ಎಬ್ಬಿಸಿದ್ದು ಈ ಮಾಧ್ಯಮಗಳು. ಆದರೆ ವಾಸ್ತವವೇನು ಗೊತ್ತೆ…
ಫುಟ್ಬಾಲ್ ಆಟದಲ್ಲಿ ಭಾರತ ವಿಶ್ವಕಪ್ ಸ್ಪರ್ಧೆಯ ಅಂತಿಮ ಹಂತಕ್ಕೆ ತಲುಪುವುದನ್ನು ನೋಡಲು ನಾವು ಸಹ 70 ವರ್ಷಗಳಿಂದ ಕಾಯುತ್ತಿದ್ದೇವೆ…
ಹಾಕಿಯಲ್ಲಿ ಮತ್ತೆ ಭಾರತ ಒಲಂಪಿಕ್ ಸ್ವರ್ಣ ಪದಕ ಗೆಲ್ಲಲು 40 ವರ್ಷಗಳಿಂದ ಕಾಯುತ್ತಿದ್ದೇವೆ……
ಒಲಂಪಿಕ್ 100/200 ಮೀಟರ್ ಓಟದಲ್ಲಿ ಚಿನ್ನ ಗೆಲ್ಲಲು ನೂರು ವರ್ಷದಿಂದ ಕಾಯುತ್ತಿದ್ದೇವೆ….
ಭಾರತದ ಚಿತ್ರವೊಂದು ಆಸ್ಕರ್ ಪ್ರಶಸ್ತಿ ಗೆಲ್ಲಲು 50 ವರ್ಷಗಳಿಂದ ಕಾಯುತ್ತಿದ್ದೇವೆ….
ಸಾಹಿತ್ಯದಲ್ಲಿ ಮತ್ತೆ ನೊಬೆಲ್ ಪ್ರಶಸ್ತಿ ಗಳಿಸಲು 60 ವರ್ಷದಿಂದ ಕಾಯುತ್ತಿದ್ದೇವೆ..
ಅಷ್ಟೇ ಏಕೆ ಈ ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಲು ಸಾವಿರಾರು ವರ್ಷಗಳಿಂದ ಕಾಯುತ್ತಿದ್ದೇವೆ……
ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಿ ಸಾಮಾನ್ಯರಿಗೆ ನ್ಯಾಯ ದೊರೆಯಲು 75 ವರ್ಷಗಳಿಂದ ಕಾಯುತ್ತಿದ್ದೇವೆ…..
ಈ ದೇಶದಲ್ಲಿ ಮಹಿಳಾ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಅನೇಕ ಶತಮಾನಗಳಿಂದ ಕಾಯುತ್ತಿದ್ದೇವೆ…..
ಅಂತಹುದರಲ್ಲಿ ಐಪಿಎಲ್ ಟ್ರೋಪಿ ಗೆಲ್ಲಲು 18 ವರ್ಷ ಎಂಬುದು ಎಷ್ಟೊಂದು ಕ್ಷುಲ್ಲಕ ಯೋಚಿಸಿ ನೋಡಿ.
ದಯವಿಟ್ಟು ಕನಿಷ್ಠ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಮಾಡಬೇಕು, ಯಾವುದು ಮಾಡಬಾರದು, ಯಾವುದು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಎಂಬುದನ್ನಾದರೂ ಆಲೋಚಿಸುವ ಪ್ರಬುದ್ಧತೆ ನಮ್ಮ ಜನರಿಗೆ ಬರಲಿ ಎಂದು ಆಶಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ.