ಪ್ರಣಾಳಿಕೆಯಲ್ಲಿ ಹೇಳಿದಂತಹ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸುವ ಭರವಸೆಗಳಲ್ಲ ಐದು ವರ್ಷದಲ್ಲಿ ಹಂತಹಂತವಾಗಿ ಈಡೇರಿಸುವಂತಹವು, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು. ಈ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ.
ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಐದು ಗ್ಯಾರಂಟಿಗಳ ಜಾರಿಗೆ ವಾಗ್ದಾನ ನೀಡಿದ್ದೇವೆ. 158 ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವ ಜೊತೆಗೆ ಇತರೆ ಭರವಸೆಗಳನ್ನು ಸಹ ಜಾರಿಗೆ ತಂದು ಜನಪರ ಕೆಲಸ ಮಾಡಿದ್ದೇವೆ ಎಂದರು.
ಐದು ಗ್ಯಾರಂಟಿ ಯೋಜನೆ ಜಾರಿಗಾಗಿ 50 ಸಾವಿರ ಕೋಟಿ ಬೇಕು. ನಮ್ಮ ರಾಜ್ಯದ ಬಜೆಟ್ 3ಲಕ್ಷದ 10ಸಾವಿರ ಕೋಟಿ ಆಗಬಹುದು. ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಿದರೆ ಆದಾಯ ಹೆಚ್ಚಳ ಹೆಚ್ಚಾಗುವ ಸಾಧ್ಯತೆಯಿದೆ. 5495 ಕೋಟಿ ಜಿಎಸ್ ಟಿ ಆದಾಯ ಕೇಂದ್ರದಿಂದ ರಾಜ್ಯಕ್ಕೆ ಬಂದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಭಾರೀ ಅನ್ಯಾಯ ಆಗಿದೆ ಎಂದು ತಿಳಿಸಿದರು.
ಸಾಲದ ಸುಳಿಗೆ ಸಿಲುಕದೆ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ.
ಐದು ಗ್ಯಾರಂಟಿಗಳಿಗೆ ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ ಸೂಚಿಸಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಜಾರಿ ಮಾಡುತ್ತೇವೆ ಎಂದರು.
ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ಗಯಳನ್ನು ಉಚಿತವಾಗಿ ನೀಡಲು ಮಾಹೆಯಾನ 1200 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಪ್ರತಿ ಮನೆಯ ಒಡತಿಗೆ ಮಾಸಿಕ 2000 ರೂ., ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ, ಈ ವರ್ಷ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 3,000 ರೂ.ಗಳನ್ನು ಹಾಗೂ ಡಿಪ್ಲೊಮಾ ಪಾಸಾದವರಿಗೆ 1500 ರೂ.ಗಳನ್ನು ಯುವನಿಧಿಯಡಿ ನೀಡಲಾಗುವುದು. ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಗಳ ಮಾಹಿತಿಯನ್ನೂ ಪಡೆಯಲಾಗುತ್ತಿದ್ದು, ಇವುಗಳನ್ನು ಪುನರಾಂಭಿಸಲಾಗುವುದು ಎಂದರು.
ನಾವು ಈಗ ನೀಡಿರುವ ಗ್ಯಾರಂಟಿ ಭರವಸೆಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ, ರಾಜ್ಯದ ಆರ್ಥಿಕ ದಿವಾಳಿ, ರಾಜ್ಯವನ್ನು ಸಾಲಗಾರ ಮಾಡಲಾಗುವುದೆಂದು ಪ್ರಧಾನ ಮಂತ್ರಿಗಳು ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ, ಗ್ಯಾರೆಂಟಿಗಳನ್ನು ಈಡೇರಿಸಲು ತಕ್ಷಣದ ಲೆಕ್ಕಾಚಾರದ ಪ್ರಕಾರ 50 ಸಾವಿರ ಕೋಟಿ ಬೇಕಾಗುತ್ತದೆ ಎಂದರು.
ಕಟ್ಟುನಿಟ್ಟಾಗಿ ತೆರಿಗೆಯ ವಸೂಲಾತಿ
ನಮ್ಮ ರಾಜ್ಯದ ಆಯವ್ಯಯದ ಒಟ್ಟು ಗಾತ್ರ 3.10 ಲಕ್ಷ ಕೋಟಿ ರೂ. ಪ್ರತಿ ವರ್ಷ ಇದರ ಗಾತ್ರ ಶೇ. 10 ರಷ್ಟು ಹೆಚ್ಚುತ್ತದೆ. ತೆರಿಗೆಯ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಜಿಎಸ್ ಟಿ ಮೊತ್ತ ರಾಜ್ಯಕ್ಕೆ ನೀಡುವುದು ಕೇಂದ್ರ ಸರ್ಕಾರದ ತೀರ್ಮಾನ. ರಾಜ್ಯಕ್ಕೆ ಪೆಟ್ರೋಲ್ ಡೀಸೆಲ್, ಅಬಕಾರಿ, ಮೋಟರು ವಾಹನಗಳ ತೆರಿಗೆ, ಸ್ಟ್ಯಾಂಪ್ ಮತ್ತು ರಿಜಿಸ್ಟ್ರೇಷನ್ ಗಳಿಂದ ರಾಜ್ಯಕ್ಕೆ ಪ್ರಮುಖವಾಗಿ ಆದಾಯ ಸಂಗ್ರಹವಾಗುತ್ತದೆ.
ಈ ಸಾಲಿನ ಬಜೆಟ್ ನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದಿಂದ ಕೇವಲ 50 ಸಾವಿರ ಕೋಟಿ ಬರುವುದಾಗಿ ಹೇಳಲಾಗಿದೆ. ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ.ಗಳು ಬರಬೇಕಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರುವ ಪಾಲನ್ನು ದೊರಕಿಸಿಕೊಳ್ಳುವಲ್ಲಿ ಹಿಂದಿನ ಸರ್ಕಾರ ಬೇಜವಾಬ್ದಾರಿತನ ತೋರಿದೆ. ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ ಎಂದು ವಿವರಿಸಿದರು.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಂತೆ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಸಹಾಯಧನ ಬರಬೇಕಾಗಿತ್ತು. ಅದನ್ನು ಪಡೆದುಕೊಳ್ಳಲು ರಾಜ್ಯದ ಸಂಸದರು, ಹಿಂದಿನ ಸರ್ಕಾರ ವಿಫಲವಾಗಿದೆ ಎಂದರು.
ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತದ ಮೇಲಿನ ಸಾಲ 52,11,000 ಕೋಟಿ ರೂ. ಇತ್ತು. ಈಗ ದೇಶದ ಮೇಲಿನ ಸಾಲ 155 ಲಕ್ಷ ಕೋಟಿ ರೂ.ಆಗಿದೆ. ಕಳೆದ 9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2018ರ ನಮ್ಮ ಸರ್ಕಾರದ ಅವಧಿಯವರೆಗೆ ರಾಜ್ಯದ ಮೇಲೆ 2,42,000 ಕೋಟಿ ಸಾಲ ಇತ್ತು.
ಈಗ 2023-24ರಲ್ಲಿ ತಿಳಿಸಿರುವಂತೆ 5,64,000 ಕೋಟಿ ಸಾಲ ರಾಜ್ಯದ ಮೇಲಿದೆ. ಅಂದರೆ ಅವರ ಅವಧಿಯಲ್ಲಿ 3,22,000 ಕೋಟಿ ಸಾಲ ಪಡೆದಿದ್ದಾರೆ. ಈ ರೀತಿಯ ಆರ್ಥಿಕ ಪರಿಸ್ಥಿತಿ ರಾಜ್ಯದಲ್ಲಿದೆ. ನಮ್ಮ ಸರ್ಕಾರ ಆರ್ಥಿಕ ದಿವಾಳಿಯಾಗಲು ಬಿಡದಂತೆ, ಜನರಿಗೆ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ ಎಂದರು.
2023-24ರಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಅಸಲು ತೀರಿಸಲು 56 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.ತೆರಿಗೆ ಸಂಗ್ರಹ, ಅನಗತ್ಯ ವೆಚ್ಚಗಳ ನಿಯಂತ್ರಣ, ಬಡ್ಡಿಯನ್ನು ಕಡಿಮೆ ಮಾಡುವುದು, ಸಾಲ ತೆಗೆದುಕೊಳ್ಳದೇ ಇರುವುದು, ಇನ್ನೂ ಹೆಚ್ಚಿನ ಕ್ರಮಗಳ ಮೂಲಕ ವರ್ಷಕ್ಕೆ 15,000 ಕೋಟಿ ರೂ.ಗಳನ್ನು ಗಳಿಸಬಹುದು ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.