ಏರುಗತಿಯಲ್ಲಿ ರಾಜ್ಯದ ಆರ್ಥಿಕತೆ: ರೂ.1,03,683 ಕೋಟಿ ಆದಾಯ ಸಂಗ್ರಹ- ಸಿಎಂ ಸಿದ್ದರಾಮಯ್ಯ

ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, ರೂ.1,03,683 ಕೋಟಿ ಆದಾಯ ಸಂಗ್ರಹ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ.1,95,525 ಕೋಟಿ ಆದಾಯ ಸಂಗ್ರಹ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ ಶೇ.53 ರಷ್ಟು ಗುರಿಯನ್ನು ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯ ಆದಾಯ ಸಂಗ್ರಹದಲ್ಲಿ ಶೇ.11.2ರಷ್ಟು ಪ್ರಗತಿಯನ್ನು ದಾಖಲಿಸಿದ್ದು, ಗ್ರಾಹಕರ ಬೇಡಿಕೆ ಹೆಚ್ಚಳ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿರುವುದನ್ನು ಸ್ಪಷ್ಟಪಡಿಸಿದೆ.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನ:

ಕರ್ನಾಟಕ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಹಾಗೂ ಉತ್ತಮ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. 2024-25 ರ ಪ್ರಥಮ ತ್ರೈಮಾಸಿಕದಲ್ಲಿ  ರಾಜ್ಯ 2.2 ಬಿಲಿಯನ್‌ ರೂ. ನೇರ ವಿದೇಶಿ ಬಂಡವಾಳ ಆಕರ್ಷಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಗುಜರಾತ್‌ ರಾಜ್ಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ.

ಬಜೆಟ್‌ ಅನುದಾನ ವೆಚ್ಚ ಸಾಧನೆ:

ರಾಜ್ಯ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅನುದಾನದ ಶೇ.46 ರಷ್ಟು ವೆಚ್ಚ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42 ರಷ್ಟು ವೆಚ್ಚ ದಾಖಲಾಗಿತ್ತು. ಬಜೆಟ್‌ ಅಂದಾಜಿಗಿಂತ ಬಂಡವಾಳ ವೆಚ್ಚ ಸಹ ಶೇ.24.7ರಿಂದ ಶೇ.29 ಕ್ಕೆ ಏರಿಕೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತದೆ.

ದೀರ್ಘಕಾಲೀನ ಅಭಿವೃದ್ಧಿಗೆ ಮೂಲಸೌಕರ್ಯಗಳ ಮೇಲೆ ಹೂಡಿಕೆ:

ಬಂಡವಾಳ ಹೂಡಿಕೆಗಳ ಮೇಲೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯ ಜಿಎಸ್‌ಡಿಪಿ ಅಭಿವೃದ್ದಿ ದರವನ್ನು ಶೇ.14 ರಷ್ಟು ಸಾಧಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಯೋಜನೆಗಳಿಗೆ ರೂ.16,750 ಕೋಟಿ ಸಹಾಯ ಪಡೆಯುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ ಮತ್ತು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಜತೆ ಮಾತುಕತೆ ನಡೆಸುತ್ತಿದೆ. ಇದರಲ್ಲಿ ಬೆಂಗಳೂರು ವಿಪತ್ತು ನಿರ್ವಹಣೆಗೆ ರೂ.3500 ಕೋಟಿ, ನಗರ ನೀರು ಸರಬರಾಜು ಆಧುನೀಕರಣಕ್ಕೆ ರೂ.1200 ಕೋಟಿ, ಕರಾವಳಿ ಕರ್ನಾಟಕದಲ್ಲಿ ಸಾಗರ ಸಂಬಂಧಿ ಆರ್ಥಿಕತೆ ಅಭಿವೃದ್ಧಿಗೆ ರೂ.600 ಕೋಟಿ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ರೂ.3650 ಕೋಟಿ, ಹವಾಮಾನ ಪೂರಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ.3600, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕಾಗಿ ರೂ.2800 ಕೋಟಿ, ಸಾರ್ವಜನಿಕ ಸಾರಿಗೆಗೆ ಇಲೆಕ್ಟ್ರಿಕ್‌ ಬಸ್‌ಗಳಿಗಾಗಿ ರೂ.1400 ಸೇರಿದೆ.

ಬೆಂಗಳೂರು ನಗರದಲ್ಲಿ ರೂ.1,31,500 ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ ಚಿತ್ರಣ ಬದಲಾಗಲಿದೆ. ಇವುಗಳಲ್ಲಿ ರೂ.12ಸಾವಿರ ಕೋಟಿ ವೆಚ್ಚದಲ್ಲಿ 100 ಕಿಮೀ ಎತ್ತರಿಸಿದ ಕಾರಿಡಾರ್‌, ರೂ.40 ಸಾವಿರ ಕೋಟಿ ವೆಚ್ಚದಲ್ಲಿ ಮೆಟ್ರೋ ಮೂರನೆ ಹಂತದ ವಿಸ್ತರಣೆ (80ಕಿಮಿ), ರೂ.9ಸಾವಿರ ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್‌ ಮೆಟ್ರೋ ಹಳಿಗಳು, ರೂ.40 ಸಾವಿರ ಕೋಟಿ ವೆಚ್ಚದಲ್ಲಿ 40ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ, ರೂ. 3ಸಾವಿರ ಕೋಟಿ ವೆಚ್ಚದಲ್ಲಿ ಪೆರಿಪೆರಲ್‌ ರಸ್ತೆ ಜಾಲ, ರೂ.500 ಕೋಟಿ ವೆಚ್ಚದಲ್ಲಿ ಸ್ಕೈಡೆಕ್‌ ಯೋಜನೆ ಮತ್ತು ರೂ.27 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ನಿರ್ಮಾಣ ಯೋಜನೆ ಸೇರಿವೆ.

ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ:

ಪ್ರಸ್ತುತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿರುವ ರೂ.52,009 ಕೋಟಿ ಪೈಕಿ ಈಗಾಗಲೇ ರೂ.24,235 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಯೋಜನೆಗಳ ಲಾಭ ತಲುಪುವಂತಾಗಲು ಇ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ.

ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ನಡುವೆ ಸಮತೋಲನ:

ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಬಂಡವಾಳ ಹೂಡಿಕೆಗಳ ನಡುವೆ ಸಮತೋಲನ ಸಾಧಿಸುವ ಮೂಲಕ ಕರ್ನಾಟಕ ರಾಜ್ಯ ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ದಿ, ಆರ್ಥಿಕ ಸುಧಾರಣೆಗಳು, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದುವ ಮೂಲಕ ರಾಜ್ಯ ದೂರಗಾಮಿ ಆರ್ಥಿಕ ಅಭಿವೃದ್ಧಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ.

ಈ ಸಮತೋಲಿತ ಅಭಿವೃದ್ದಿ ಮಾದರಿಯಿಂದಾಗಿ ಜನರ ಜೀವನ ಗುಣಮಟ್ಟ ಸುಧಾರಿಸಲು ಸಾಧ್ಯವಾಗಿದೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!