ಎಸ್.ಐ.ಆರ್ ಬಗ್ಗೆ ಗೊಂದಲ, ಭಯ ಬೇಡ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ- ಎಸಿ ಟಿ.ಆರ್ ಮಂಜುನಾಥ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೂನ್ 20 ರಿಂದ ಎಸ್‌ಐಆರ್‌ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ತಾಲ್ಲೂಕಿನಲ್ಲಿ 2,23,457 ಮಂದಿ ಮತದಾರರಿದ್ದಾರೆ. ಈ ಪೈಕಿ ಯಾರೆಲ್ಲಾ ಮತದಾನಕ್ಕೆ ಅರ್ಹರು ಎಂಬುದನ್ನು ಎಸ್‌ಐಆರ್‌ ನಿರ್ಧರಿಸಲಿದೆ. ಈಗಾಗಲೇ ಶೇ.90 ರಷ್ಟು ಮತದಾರರ ಮ್ಯಾಪಿಂಗ್‌ ಕಾರ್ಯ ಪೂರ್ಣಗೊಂಡಿದೆ. 276 ಮಂದಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ (ಎನುಮೆರೇಷನ್‌ ಫಾರ್ಮ್‌) ವಿತರಣೆ ಹಾಗೂ ಸಂಗ್ರಹಣೆ ಮಾಡಲಿದ್ದಾರೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ, ಚುನಾವಣಾಧಿಕಾರಿಯಾದ ಟಿ.ಆರ್ ಮಂಜುನಾಥ ತಿಳಿಸಿದರು.

ಎಸ್‌ಐಆರ್‌ ಕುರಿತು ಬುಧವಾರ ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಸ್ಐಆರ್ ಬಗ್ಗೆ ಜನರಲ್ಲಿ ಯಾವುದೇ ಗೊಂದಲ ಭಯಪಡುವ ಅವಶ್ಯಕತೆ ಇಲ್ಲ. ಮೃತರ ಹೆಸರು ತೆಗೆಯುವುದು ಸೇರಿದಂತೆ ಯಾರೊಬ್ಬರು ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು. ಸಿಬ್ಬಂದಿಗೆ ಜೂನ್‌ 20 ರಿಂದ 29 ರವರೆಗೆ ಎಸ್ ಐ ಆರ್ ಗೆ ಸಿದ್ಧತೆ, ಬಿ ಎಲ್ ಒ ಗಳ ತರಬೇತಿ ಹಾಗೂ ಮುದ್ರಣ ಕಾರ್ಯ, ಜೂನ್‌ 30 ರಿಂದ ಜುಲೈ 29 ರವರೆಗೆ ಬಿಎಲ್‌ಒಗಳಿಂದ ಮನೆ ಮನೆ ಭೇಟಿ, ಜುಲೈ 29 ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಕಾರ್ಯ ನಡೆಯಲಿದೆ‌ ಎಂದು ತಿಳಿಸಿದರು.

ಎಸ್‌ಐಆರ್‌ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಹೆಚ್ಚಿನ ಮಾಹಿತಿ ಪ್ರಕಟಿಸಲಾಗುವುದು. ಮತದಾರರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್‌ ಮಟ್ಟದಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತದೆ. ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು‌ ಎಂದು ವಿವರಿಸಿದರು.

ಎನುಮೆರೇಷನ್‌ ಫಾರ್ಮ್‌

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಗಣತಿ ನಮೂನೆಗಳನ್ನು (ಎನುಮೆರೇಷನ್‌ ಫಾರ್ಮ್‌) ಪ್ರತಿ ಮತದಾರರಿಗೂ ದ್ವಿಪತ್ರಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತಲುಪಿಸುತ್ತಾರೆ. ಬಿಎಲ್‌ಒ ಹಸ್ತಾಕ್ಷರ ಇರುವ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಮತದಾರರ ಪಟ್ಟಿಯಲ್ಲಿರುವಂತೆ ಭಾವಚಿತ್ರ, ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಈ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಪ್ರತಿ ಮತದಾರರಿಗೂ ನೀಡುವ ಅರ್ಜಿಯಲ್ಲಿ ಕ್ಯೂಆರ್‌ ಕೋಡ್‌ ವಿಭಿನ್ನವಾಗಿರುತ್ತದೆ. ಬಿಎಲ್‌ಒ ಆ್ಯಪ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿದರೆ ಮತದಾರರ ಮಾಹಿತಿ ಲಭ್ಯವಾಗುತ್ತದೆ. ಒಂದು ವೇಳೆ ಮತದಾರರ ಭಾವಚಿತ್ರ ಹಳೆಯದಾಗಿದ್ದರೆ ಎನುಮೆರೇಷನ್‌ ಅರ್ಜಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. ಇಲ್ಲದಿದ್ದರೆ ಬಿಎಲ್‌ಒಗಳೇ ಆ್ಯಪ್‌ ಮೂಲಕ ಭಾವಚಿತ್ರ ಪಡೆದುಕೊಳ್ಳುತ್ತಾರೆ. 2002ರ ಮತದಾರರ ಪಟ್ಟಿಯಲ್ಲಿತಮ್ಮ ಹೆಸರು ಇದ್ದರೆ ಅದರ ವಿವರವನ್ನು ನೀಡಬೇಕು. ಇಲ್ಲದಿದ್ದರೆ ತಮ್ಮ ಸಂಬಂಧಿಯ (ತಂದೆ, ತಾತ ಇತ್ಯಾದಿ) ಮಾಹಿತಿ ಒದಗಿಸಬೇಕು ಎಂದರು.

ಅರ್ಜಿಯಲ್ಲಿ ಮತದಾರರು ಸಹಿ ಅಥವಾ ಎಡಗೈ ಹೆಬ್ಬೆರಳಿನ ಗುರುತು ಹಾಕಬಹುದು. ಒಂದು ವೇಳೆ ಮತದಾರರು ಆ ಸಂದರ್ಭದಲ್ಲಿ ಲಭ್ಯವಿಲ್ಲದಿದ್ದರೆ ಕುಟುಂಬದಲ್ಲಿನ ವಯಸ್ಕ ಸದಸ್ಯರು ಸಹಿ ಮಾಡಿ ಬಿಎಲ್‌ಒಗಳಿಗೆ ಅರ್ಜಿ ಹಸ್ತಾಂತರಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಅಕ್ಟೋಬರ್ 7 ರಂದು ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.

ಒಟ್ಟು ಮತದಾರರ ವಿವರಗಳು (2/6/2026ರಂತೆ ಮತದಾರರ ಪಟ್ಟಿಯ ವಿವರ)

ಒಟ್ಟು ಮತಗಟ್ಟೆ – 276
ಗಂಡು – 109627
ಹೆಣ್ಣು – 113828
ಇತರೆ – 2
ಒಟ್ಟು – 2,23,457

ಒಟ್ಟು ಮತಗಟ್ಟೆಗಳು & ಬಿ.ಎಲ್.ಒ ವಿವರಗಳು

ಹೋಬಳಿ ಮತಗಟ್ಟೆಗಳು ಬಿಎಲ್ಒಗಳು
ಸಾಸಲು – 34        ‌‌‌‌‌‌          34
ದೊಡ್ಡಬೆಳವಂಗಲ-46     46
ಕಸಬಾ -77.                    77
ಮಧುರೆ -37                   39
ನಗರಸಭೆ -79                 79

ಒಟ್ಟು 276 ಮತಗಟ್ಟೆಗಳು 276 ಬಿ.ಎಲ್.ಒ.ಗಳು

ಈ ವೇಳೆ ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಬಿಎಲ್ಓಗಳ ತರಬೇತಿದಾರ ಶ್ರೀನಿವಾಸ, ಚುನಾವಣಾ ಶಿರಸ್ತೇದಾರ ಶಿವಮೂರ್ತಿ, ರವಿಕುಮಾರ್ ಮತ್ತಿತ್ತರರು ಇದ್ದರು.

Ramesh Babu

Journalist

Recent Posts

28ಕ್ಕೂ ಹೆಚ್ಚು ಜಿಲ್ಲೆಗಳು ಬರದ ಸಂಕಷ್ಟದಲ್ಲಿ; ರೈತರಿಗೆ ತಕ್ಷಣ ₹10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

ತುಮಕೂರು: ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ಸಮರ್ಪಕ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ…

16 hours ago

ಅತಿವೃಷ್ಟಿ–ಬರ ಎದುರಿಸಲು ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಯಾವ ಸಚಿವರಿಗೆ ಯಾವ ಜಿಲ್ಲೆ? ಸರ್ಕಾರದಿಂದ ಉಸ್ತುವಾರಿ ಪಟ್ಟಿ ಪ್ರಕಟ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರಿಗೆ…

21 hours ago

ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷರಾಗಿ ಜಿ.ಲಕ್ಷ್ಮಿಪತಿ ಆಯ್ಕೆ

ದೊಡ್ಡಬಳ್ಳಾಪುರ: ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಮೂಲ ಧ್ಯೇಯವಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಲಯನ್ಸ್ ಕ್ಲಬ್ ಆಫ್ ಕೊನಘಟ್ಟ…

21 hours ago

ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ; ₹5.50 ಲಕ್ಷ ಲಂಚ ಸ್ವೀಕರಿಸುವ ವೇಳೆ ಟ್ರ್ಯಾಪ್

ಮೈಸೂರು: ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ…

1 day ago

ಸಚಿವ ಸಂಪುಟ ವಿಸ್ತರಣೆ: 20 ಮಂದಿಗೆ ಸಚಿವ ಸ್ಥಾನ; ಶರತ್ ಬಚ್ಚೇಗೌಡಗೆ ಮತ್ತೆ ನಿರಾಸೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಹಂತದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ…

2 days ago

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರಿಗೆ ಕೈತಪ್ಪಿದ ಮಂತ್ರಿಗಿರಿ; ಎರಡನೇ ಪಟ್ಟಿಯಲ್ಲಿ 20 ಮಂದಿಗೆ ಅವಕಾಶ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ…

2 days ago