ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೂನ್ 20 ರಿಂದ ಎಸ್ಐಆರ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ತಾಲ್ಲೂಕಿನಲ್ಲಿ 2,23,457 ಮಂದಿ ಮತದಾರರಿದ್ದಾರೆ. ಈ ಪೈಕಿ ಯಾರೆಲ್ಲಾ ಮತದಾನಕ್ಕೆ ಅರ್ಹರು ಎಂಬುದನ್ನು ಎಸ್ಐಆರ್ ನಿರ್ಧರಿಸಲಿದೆ. ಈಗಾಗಲೇ ಶೇ.90 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. 276 ಮಂದಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ (ಎನುಮೆರೇಷನ್ ಫಾರ್ಮ್) ವಿತರಣೆ ಹಾಗೂ ಸಂಗ್ರಹಣೆ ಮಾಡಲಿದ್ದಾರೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ, ಚುನಾವಣಾಧಿಕಾರಿಯಾದ ಟಿ.ಆರ್ ಮಂಜುನಾಥ ತಿಳಿಸಿದರು.
ಎಸ್ಐಆರ್ ಕುರಿತು ಬುಧವಾರ ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಬಗ್ಗೆ ಜನರಲ್ಲಿ ಯಾವುದೇ ಗೊಂದಲ ಭಯಪಡುವ ಅವಶ್ಯಕತೆ ಇಲ್ಲ. ಮೃತರ ಹೆಸರು ತೆಗೆಯುವುದು ಸೇರಿದಂತೆ ಯಾರೊಬ್ಬರು ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು. ಸಿಬ್ಬಂದಿಗೆ ಜೂನ್ 20 ರಿಂದ 29 ರವರೆಗೆ ಎಸ್ ಐ ಆರ್ ಗೆ ಸಿದ್ಧತೆ, ಬಿ ಎಲ್ ಒ ಗಳ ತರಬೇತಿ ಹಾಗೂ ಮುದ್ರಣ ಕಾರ್ಯ, ಜೂನ್ 30 ರಿಂದ ಜುಲೈ 29 ರವರೆಗೆ ಬಿಎಲ್ಒಗಳಿಂದ ಮನೆ ಮನೆ ಭೇಟಿ, ಜುಲೈ 29 ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಹೆಚ್ಚಿನ ಮಾಹಿತಿ ಪ್ರಕಟಿಸಲಾಗುವುದು. ಮತದಾರರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಮಟ್ಟದಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತದೆ. ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಎನುಮೆರೇಷನ್ ಫಾರ್ಮ್
ಎಸ್ಐಆರ್ ಪ್ರಕ್ರಿಯೆಯಲ್ಲಿ ಗಣತಿ ನಮೂನೆಗಳನ್ನು (ಎನುಮೆರೇಷನ್ ಫಾರ್ಮ್) ಪ್ರತಿ ಮತದಾರರಿಗೂ ದ್ವಿಪತ್ರಿಯಲ್ಲಿ ಬಿಎಲ್ಒಗಳು ಮನೆ ಮನೆಗೆ ತಲುಪಿಸುತ್ತಾರೆ. ಬಿಎಲ್ಒ ಹಸ್ತಾಕ್ಷರ ಇರುವ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್ಒಗಳಿಗೆ ಹಿಂದಿರುಗಿಸಬೇಕು. ಮತದಾರರ ಪಟ್ಟಿಯಲ್ಲಿರುವಂತೆ ಭಾವಚಿತ್ರ, ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಈ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಪ್ರತಿ ಮತದಾರರಿಗೂ ನೀಡುವ ಅರ್ಜಿಯಲ್ಲಿ ಕ್ಯೂಆರ್ ಕೋಡ್ ವಿಭಿನ್ನವಾಗಿರುತ್ತದೆ. ಬಿಎಲ್ಒ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮತದಾರರ ಮಾಹಿತಿ ಲಭ್ಯವಾಗುತ್ತದೆ. ಒಂದು ವೇಳೆ ಮತದಾರರ ಭಾವಚಿತ್ರ ಹಳೆಯದಾಗಿದ್ದರೆ ಎನುಮೆರೇಷನ್ ಅರ್ಜಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. ಇಲ್ಲದಿದ್ದರೆ ಬಿಎಲ್ಒಗಳೇ ಆ್ಯಪ್ ಮೂಲಕ ಭಾವಚಿತ್ರ ಪಡೆದುಕೊಳ್ಳುತ್ತಾರೆ. 2002ರ ಮತದಾರರ ಪಟ್ಟಿಯಲ್ಲಿತಮ್ಮ ಹೆಸರು ಇದ್ದರೆ ಅದರ ವಿವರವನ್ನು ನೀಡಬೇಕು. ಇಲ್ಲದಿದ್ದರೆ ತಮ್ಮ ಸಂಬಂಧಿಯ (ತಂದೆ, ತಾತ ಇತ್ಯಾದಿ) ಮಾಹಿತಿ ಒದಗಿಸಬೇಕು ಎಂದರು.
ಅರ್ಜಿಯಲ್ಲಿ ಮತದಾರರು ಸಹಿ ಅಥವಾ ಎಡಗೈ ಹೆಬ್ಬೆರಳಿನ ಗುರುತು ಹಾಕಬಹುದು. ಒಂದು ವೇಳೆ ಮತದಾರರು ಆ ಸಂದರ್ಭದಲ್ಲಿ ಲಭ್ಯವಿಲ್ಲದಿದ್ದರೆ ಕುಟುಂಬದಲ್ಲಿನ ವಯಸ್ಕ ಸದಸ್ಯರು ಸಹಿ ಮಾಡಿ ಬಿಎಲ್ಒಗಳಿಗೆ ಅರ್ಜಿ ಹಸ್ತಾಂತರಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಅಕ್ಟೋಬರ್ 7 ರಂದು ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.
ಒಟ್ಟು ಮತದಾರರ ವಿವರಗಳು (2/6/2026ರಂತೆ ಮತದಾರರ ಪಟ್ಟಿಯ ವಿವರ)
ಒಟ್ಟು ಮತಗಟ್ಟೆ – 276
ಗಂಡು – 109627
ಹೆಣ್ಣು – 113828
ಇತರೆ – 2
ಒಟ್ಟು – 2,23,457
ಒಟ್ಟು ಮತಗಟ್ಟೆಗಳು & ಬಿ.ಎಲ್.ಒ ವಿವರಗಳು
ಹೋಬಳಿ ಮತಗಟ್ಟೆಗಳು ಬಿಎಲ್ಒಗಳು
ಸಾಸಲು – 34 34
ದೊಡ್ಡಬೆಳವಂಗಲ-46 46
ಕಸಬಾ -77. 77
ಮಧುರೆ -37 39
ನಗರಸಭೆ -79 79
ಒಟ್ಟು 276 ಮತಗಟ್ಟೆಗಳು 276 ಬಿ.ಎಲ್.ಒ.ಗಳು
ಈ ವೇಳೆ ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಬಿಎಲ್ಓಗಳ ತರಬೇತಿದಾರ ಶ್ರೀನಿವಾಸ, ಚುನಾವಣಾ ಶಿರಸ್ತೇದಾರ ಶಿವಮೂರ್ತಿ, ರವಿಕುಮಾರ್ ಮತ್ತಿತ್ತರರು ಇದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC)ಯ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಡಿಕೆ ಶಿವಕುಮಾರ್ ಅವರು ಬುಧವಾರ…
ಡಿ.ಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.…
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.…
ರಾಜ್ಯದ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ಸಂವಿಧಾನದ ಪುಸ್ತಕ ಹಿಡಿದು, ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ…
ರಾಜ್ಯದ 25 ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ…
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನಕ್ಕೂ ಮುನ್ನವೇ ತಮ್ಮ…