ಕರ್ನಾಟಕ ರಾಷ್ಟ್ರ ಸಮಿತಿ(KRS) ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದ್ದು, ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ಕೆಆರ್ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್ ಅವರು ತಿಳಿಸಿದರು.
ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಪಿ ಚುನಾವಣೆಗೆ ಸ್ಪರ್ಧೆ ಮಾಡ ಬಯಸುವ ಅಭ್ಯರ್ಥಿಗಳ ಸಂದರ್ಶನವು 2024ರ ಜನವರಿ 6 ಮತ್ತು 7 ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದರು.
ಚುನಾವಣಾ ವಿಚಾರವೂ ಸೇರಿದಂತೆ ಇತರೆ ಹಲವು ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಡಿ.32ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಪಕ್ಷದ ಹಾಲಿ ಸದಸ್ಯರಾಗಿರುವವರಿಗೆ 5 ಸಾವಿರ ರೂ. ಹಾಗೂ ಹೊಸದಾಗಿ ಪಕ್ಷ ಸೇರಿ ಸಂದರ್ಶನಕ್ಕೆ ಹಾಜರಾಗುವವರಿಗೆ ರೂ. 10 ಸಾವಿರ ಸಂದರ್ಶನದ ಶುಲ್ಕವಿರುತ್ತದೆ. ಸಂದರ್ಶನದ ನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಭಾವ್ಯ ಅಭ್ಯರ್ಥಿಗಳು ಎಂದು ಘೋಷಿಸುತ್ತದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ 96117 20802 ನಂಬರ್ ಸಂಪರ್ಕಿಸಬಹುದು ಎಂದರು.
ಜಿಲ್ಲಾಧ್ಯಕ್ಷ ಜೆ.ವೆಂಕಟೇಶ್ ಮಾತನಾಡಿ ಕೆಆರ್ಎಸ್ ಪಕ್ಷವು ಆರಂಭದಿಂದಲೂ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಿರಂತರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. 2023ರ ಮೇನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 195 ಕ್ಷೇತ್ರಗಳಿಂದ ಸ್ಪರ್ಧಿಸಿತ್ತು. ಪಕ್ಷವು ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಜೊತೆಗೆ ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಾ ಬಂದಿದೆ.
ಪಕ್ಷವೂ ಉತ್ತಮ ಹಾಗೂ ಜನಪರ ಕಾಳಜಿ ಉಳ್ಳ ಪ್ರಾಮಾಣಿಕ ರಾಜಕಾರಣಕ್ಕೆ ರಾಜ್ಯದಲ್ಲಿರುವ ಏಕೈಕ ವೇದಿಕೆಯಾಗಿದೆ. ರಾಜಕೀಯ ಪಕ್ಷಗಳನ್ನು ಕೇವಲ ಭ್ರಷ್ಟಾಚಾರ, ದುರಾಚಾರ ಹಾಗೂ ಸುಳ್ಳು ಭರವಸೆಗಳಿಂದ ಕೂಡಿರುವುದು ಎಂಬ ಬಲವಾದ ನಂಬಿಕೆ ಬೇರೂರಿರುವ ಕಾಲಘಟ್ಟದಲ್ಲಿ, ನಿರಂತರವಾಗಿ ತನ್ನ ಧ್ಯೇಯ ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿ, ಅದರಂತೆ ನಡೆಯುತ್ತಿರುವ ಪಕ್ಷ ಕೇವಲ ಕರ್ನಾಟಕ ರಾಜ್ಯ ಸಮಿತಿ ಪಕ್ಷ ಮಾತ್ರ. ದೇಶ ಇಂದು ವಿಚಿತ್ರ ಹಾಗೂ ಸಂಧಿಗ್ಧ ಸಂದರ್ಭದಲ್ಲಿದ್ದು, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣವು ಎಂದಿಗಿಂತ ತೀವ್ರವಾಗಿ ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕರು, ಕನ್ನಡಪರ ಕಾಳಜಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿತಿಸುವವರು, ಅಕ್ರಮ ನಡೆಸದೆ ಚುನಾವಣೆ ಎದುರಿಸುವ, ದೇಣಿಗೆ ಮೂಲಕ ಚುನಾವಣಾ ಖರ್ಚು ವೆಚ್ಚವನ್ನು ಎದುರಿಸುವ ಮನಸ್ಥಿತಿ ಇರುವವರು, ಜನಪರ ಕಾಳಜಿ ಉಳ್ಳವರು, ಪ್ರಾದೇಶಿಕತೆ, ಒಕ್ಕೂಟ ವ್ಯವಸ್ಥೆಯಲ್ಲಿ ಹಾಗು ಪ್ರಮುಖವಾಗಿ ದೇಶದ ಸಂವಿಧಾನದಲ್ಲಿ ನಂಬಿಕೆಯುಳ್ಳವರು ಕೆ ಆರ್ ಎಸ್ ಪಕ್ಷ ಸೇರಿ, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ, ಹೆಚ್.ಎನ್.ವೇಣು, ಆನಂದ್ ಕುಮಾರ್, ಸಾಸಲು ಹೋಬಳಿಯ ನಾಗರಾಜು ಉಪಸ್ಥಿತರಿದ್ದರು.