ಕೋಲಾರ: ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಬಳಿ ನೂತನವಾಗಿ ಪ್ರಾರಂಭವಾಗಿರುವ ಎಂಎಸ್ಐಎಲ್ ಮದ್ಯ ಮಾರಾಟದ ಮಳಿಗೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಬುಧವಾರ ಬೆಗ್ಲಿಬೆಣಜೇನಹಳ್ಳಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮದಿಂದ ಮೆರವಣಿಗೆ ಮೂಲಕ ಹೋಗಿ ಮಳಿಗೆಯ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಭಾರತೀಯ ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಪ್ರಾರಂಭ ಮಾಡಿ ಜನತೆಯನ್ನು ಕುಡುಕರನ್ನಾಗಿ ಮಾಡುತ್ತಿದೆಯೆಂದು ದೂರಿದರು.
ಕಳೆದ ಆರು ತಿಂಗಳ ಹಿಂದೆ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ಪ್ರಾರಂಭ ಮಾಡಿದಾಗಲೂ ಗಲಾಟೆ ಹಾಗೂ ಪ್ರತಿಭಟನೆ ಮಾಡಿ ಮುಚ್ಚಿಸಿದ್ದು ಮತ್ತೆ ಪ್ರಾರಂಭ ಮಾಡಿರುವುದು ಖಂಡನೀಯ, ಈ ರಸ್ತೆಯಲ್ಲಿ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು, ಗೃಹಣಿಯರು ಹಾಗೂ ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ ಈ ರಸ್ತೆಯಲ್ಲಿ ಮದ್ಯದ ಮಳಿಗೆ ಪ್ರಾರಂಭ ಮಾಡಿದರೆ ತೊಂದರೆ ಆಗುತ್ತದೆಯೆಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ಹರ್ಷವರ್ಧನ್, ಪ್ರತಿಭಟನೆಕಾರರಿಂದ ಮನವಿ ಪಡೆದು ಕಡತಗಳ ಪರಿಶೀಲನೆ ಮಾಡಿದ ನಂತರ ಯಾರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮಳಿಗೆ ಬಂದ್ ಮಾಡುವಂತೆ ಪಟ್ಟು ಹಿಡಿದು ಸ್ಥಳದಲ್ಲಿಯೇ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ಪಿ ಶ್ರೀಶೈಲ ಅವಜಿ ಹಾಗೂ ಎಂಎಸ್ಐಎಲ್ ಜಿಲ್ಲಾ ಅಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಕೇಳಿಸಿಕೊಂಡು ಮಾತನಾಡಿದ ಅವರು, ಕಾನೂನು ಬದ್ಧವಾಗಿ ಮದ್ಯ ಮಾರಾಟಕ್ಕೆ ಎಂಎಸ್ಐಎಲ್ ಗೆ ಪರವಾನಗಿ ನೀಡಿದ್ದು, ಜನರ ವಿರೋಧದ ವರದಿಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಅಂಗಡಿ ಮಾಲೀಕರು ಇನ್ನು ಒಂದು ತಿಂಗಳ ಒಳಗೆ ರಸ್ತೆಯ ಬದಿಯಲ್ಲಿರುವ ಅಂಗಡಿಯನ್ನು ರಸ್ತೆಯಿಂದ ದೂರದಲ್ಲಿ ಕಟ್ಟಿ ಬದಲಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನೆಕಾರರು ಸ್ಥಳದಲ್ಲಿ ಪೆಂಡಾಲ್ ಹಾಕಿ ಧರಣಿ ಮುಂದುವರೆಸಿದ್ದು, ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಮುಚ್ಚುವವರೆಗೆ ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದು ಧರಣಿ ಮಾಡಿದರು.
ಮತ್ತೊಂದು ತಂಡ ಸ್ಥಳದಲ್ಲಿಯೇ ಎಂಎಸ್ಐಎಲ್ ಮಳಿಗೆಯನ್ನು ಪ್ರಾರಂಭ ಮಾಡಬೇಕು ಎಂದು ಕೆಲವರು ಘೋಷಣೆಗಳನ್ನು ಕೂಗಿದರು.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮಾಂತರ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ಬಿಗಿ ಪೋಲಿಸ್ ವ್ಯವಸ್ಥೆ ಏರ್ಪಡಿಸಲಾಗಿತ್ತು,
ಪ್ರತಿಭಟನೆಯ ನೇತೃತ್ವವನ್ನು ಬೆಗ್ಲಿ ಹೊಸಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚರಣ್, ದಲಿತ ಸಂಘಟನೆಗಳ ಮುಖಂಡರಾದ ಯುವಶಕ್ತಿ ಸುಬ್ಬು, ಮತ್ತಿಕುಂಟೆ ಕೃಷ್ಣ, ಹೂವಳ್ಳಿ ಪ್ರಕಾಶ್ ಎಂ.ಆರ್ ಚೇತನ್ ಬಾಬು ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದರು.