
ದಶಕಗಳಿಂದಲು ಉಳುಮೆ ಮಾಡುತ್ತ ಜೀವನ ನಡೆಸುತ್ತಿರುವ ಬಡವರನ್ನು ಒಕ್ಕಲೆಬಿಸಿ, ಮನುಷ್ಯತ್ವ ಮತ್ತು ಕಾಯ್ದೆ ಎರಡನ್ನೂ ಮೀರಿ ಬಲಾಢ್ಯರ ಪರವಾಗಿ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಮಿತಿ ಹಿರಿಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪೆರಮಗೊಂಡೆನಹಳ್ಳಿ ಸಮೀಪ ಪರಿಶಿಷ್ಟ ಜನಾಂಗಕ್ಕೆ ಸೇರಿರುವ ಕುಟುಂಬಗಳು ನಾಲ್ಕು ದಶಕಗಳಿಂದ ಉಳುಮೆ ಮಾಡಿಕೊಂಡು ಬೇಸಾಯ ಮಾಡುತ್ತಿರುವ ಹಾಗೂ ಸರ್ಕಾರದಿಂದ ಅನುದಾನ ಪಡೆದು ಮನೆಗಳನ್ನು ಕಟ್ಟಿಕೊಂಡಿರುವ ಜಮೀನುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ನೆಪದಲ್ಲಿ ತೆರವು ಮಾಡುತ್ತಿದ್ದಾರೆ. ಈ ತೆರವಿನ ವಿರುದ್ಧ ಹೈಕೋರ್ಟ್ ಆದೇಶವನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಾಲ್ಲೂಕು ಮತ್ತು ಜಿಲ್ಲಾ ಆಡಳಿತದ ಯಾವುದೇ ಸೂಚನೆಗಳನ್ನು ಪಾಲಿಸದೆ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ಸಹ ಮರೆತು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯದಾದ್ಯಂತ ಇರುವಂತೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಮಿ ಮತ್ತು ವಸತಿ ಹಕ್ಕಿನ ವಿಷಯದಲ್ಲಿ ಹಲವಾರು ಸಮಸ್ಯೆಗಳಿವೆ, ಅವುಗಳ ಪರಿಹಾರಕ್ಕಾಗಿ ನಮ್ಮ ಸಂಘಟನೆಯ ವತಿಯಿಂದ ಹತ್ತು ಹಲವು ಹೋರಾಟಗಳು ನಡದಿವೆ. ಜಿಲ್ಲಾ / ತಾಲ್ಲೂಕು ಆಡಳಿತ ಈ ಭಾಗದಲ್ಲಿ ಏನೂ ಸಮಸ್ಯೆ ಇಲ್ಲ ಎನ್ನುವಂತೆ ಸುಮ್ಮನೆ ಕುಳಿತಿದೆ. ನಮ್ಮ ರಾಜ್ಯ ಸಮಿತಿಯ ನಿರಂತರ ಹೋರಾಟದ ಫಲವಾಗಿ ಸರ್ಕಾರ ಹಲವು ಜನಪರ ಕಾನೂನುಗಳನ್ನು ಜಾರಿಗೆ ತಂದಿದೆ ಎಂದರು.
ನಗರ ಪರಿದಿ ಮಿತಿಯ ನೆಪದಲ್ಲಿ ಬಡವರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಗೆ ಹಕ್ಕು ಪತ್ರಗಳನ್ನು ನೀಡದೆ ತಾಲ್ಲೂಕು ಆಡಳಿತ ವಂಚಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಹಣವಂತರಿಗೆ ನಗರಕ್ಕೆ ಕೂಗಳೆತೆ ದೂರದಲ್ಲೇ ಇರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅರಹಳ್ಳಿ ಗುಡ್ಡದಹಳ್ಳಿ ಗ್ರಾಮದ ಸರ್ವೇ ನಂಬರ್ 57ರಲ್ಲಿ 2023-324ರಲ್ಲಿ ಸುಮಾರು 6 ಎಕರೆ ಜಮೀನು ಮಂಜೂರು ಮಾಡಿದೆ. ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಕಾನೂನು ಎಲ್ಲರಿಗೂ ಒಂದೇ ಆಗಿಲ್ಲ. ಶ್ರೀಮಂತರಿಗೆ ಪ್ರತ್ಯೇಕ ಕಾನೂನು ಇದೆ ಎನ್ನುವುದನ್ನು ಈ ಪ್ರಕರಣದಿಂದ ಸ್ಪಷ್ಟಪಡಿಸಿದ್ದಾರೆ. ದಶಕಗಳಿಂದಲು ಬೇಸಾಯ ಮಾಡಿಕೊಂಡು ಇರುವ ಭೂಮಿ ವಂಚಿತ ಬಡಕುಟುಂಬಗಳಿಗೆ ಹಕ್ಕು ಪತ್ರಗಳ ಹಂಚಿಕೆ ಕೆಲಸ ತ್ವರಿತವಾಗಿ ಆಗಬೇಕು ಎಂದು ಆಗ್ರಹಿಸಿದರು.
ಸಮಿತಿಯ ತಾಲ್ಲೂಕು ಮುಖಂಡರಾದ ರಮೇಶ್ ಸಂಕ್ರಾತಿ, ಸುಬ್ರಮಣಿ ಮಾತನಾಡಿ, ತಾಲ್ಲೂಕಿನ ಗೊಲ್ಲಹಳ್ಳಿತಾಂಡ, ಗ್ರಾಮದ ಸರ್ವೇ ನಂ. 31 ಮತ್ತು 33, ಪೆರಮಗೊಂಡನಹಳ್ಳಿ, ಕೆಳಗಿನನಾಯಕರಂಡಹಳ್ಳಿ ಗ್ರಾಮದ ಸರ್ವೇ ನಂ.8ರಲ್ಲಿ ಕಂದಾಯ ಇಲಾಖೆ 1950 ರಿಂದ 2000ರವರೆಗೂ ಹಲವಾರು ಜನ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡಿದೆ. ಆದರೆ ಈಗ ಇದೇ ಜಮೀನನ್ನು ಅರಣ್ಯ ಇಲಾಖೆ ಒತ್ತುವರಿ ನೆಪದಲ್ಲಿ ತೆರವು ಮಾಡುತ್ತಿದೆ ಎಂದು ಗುಡುಗಿದರು.
ತಾಲ್ಲೂಕಿನ ಹಲವೆಡೆ ರೈತರಿಗೆ ಜಮೀನು ಮಂಜೂರಾಗಿ ಹತ್ತಾರು ವರ್ಷಗಳೇ ಕಳೆದಿವೆ ಆದರೂ ಇವರಿಗೆ ಹಕ್ಕು ಪತ್ರ ಕೊಟ್ಟಿಲ್ಲ. ಕಂದಾಯ ಇಲಾಖೆಯವರು ಕೆಲವು ಹಳ್ಳಿಗಳಲ್ಲಿ ಬಲಾಡ್ಯರಿಗೆ ಹಾಗೂ ಅವರ ಹಿಂಬಾಲಕರ ಜಮೀನಿಗಳಿಗೆ ಯಾವುದೋ ಸರ್ಕಾಲ ಆದೇಶವನ್ನು ಅನ್ವಯವಾಗುವಂತೆ ತಿರುಚಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ರೈತರಿಗೆ ಕುಂಟು ನೆಪ ಹೊತ್ತಿ ಭೂಮಿ ಹಕ್ಕು ವಂಚಿತರನ್ನಾಗಿ ಮಾಡುವ ಕೆಲಸ ಭರದಿಂದ ಸಾಗಿದೆ ಎಂದರು.
ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ನಡೆಸಲು ಮನವಿ ಮಾಡುತ್ತಲೇ ಬಂದಿದ್ದರು ಸಹ ಇದಕ್ಕೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಒತ್ತುವರಿ ತೆರವಿಗೆ ಮಾತ್ರ ಮುಂದಾಗುತ್ತಿದ್ದಾರೆ. ಇದರ ವಿರುದ್ಧ ಹಲವಾರು ಬಾರಿ ಹೋರಾಟಗಳನ್ನು ನಡೆಸಿ ವಿಧಾನ ಸಭೆ, ಲೋಕಸಭಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳು ಗ್ರಾಮಸ್ಥರ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಮತದಾನದಲ್ಲಿ ಭಾಗವಹಿಸುವಂತೆ ಮಾಡುತ್ತಾರೆ. ಮತದಾನ ಮುಕ್ತಾಯವಾದ ನಂತರ ಈ ಬಗ್ಗೆ ಯಾವುದೇ ಕ್ರಮವನ್ನು ವಹಿಸುತ್ತಿಲ್ಲ. ನಮ್ಮ ಮನವಿಗೆ ಸೂಕ್ತ ರೀತಿಯಲಿ ಸ್ಪಂದಿಸದೇ ಇದ್ದರೆ ನವೆಂಬರ್ 5 ನಂತರ ಈ ಭಾಗದ ರೈತರು ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಖಜಾಂಚಿ ಶ್ರೀರಂಗಚಾರ್, ಸ್ಥಳೀಯ ಮುಖಂಡರಾದ ಗೋಪಾಲನಾಯಕ್, ಪಾಪಣ್ಣ, ಮುನಿರಾಜ್, ಹನುಮನಾಯಕ್ ಇದ್ದರು.