ಇದು ಬಸ್ಟಾಂಡೋ ಅಥವಾ ಕೊಚ್ಚೆ ಗುಂಡಿಯೋ….?: ಟಿ.ಬಿ ವೃತ್ತದ ಚಿಕ್ಕಬಳ್ಳಾಪುರ ಬಸ್ ಸ್ಟಾಂಡ್ ಅವ್ಯವಸ್ಥೆ: ಪ್ರಯಾಣಕರ ಪರದಾಟ

ಇದನ್ನ ಯಾರಾದ್ರು ಬಸ್ ಸ್ಟಾಂಡ್ ಅಂತಾರಾ…? ಈಗೋ ಆಗೋ ಬಿದ್ದೋಗುವ ಸ್ಥಿತಿಯಲ್ಲಿರುವ ಹಳೇ ಕಾಲದ ಹಂದಿ ಗೂಡಿನಂತಿರುವ ತಂಗುದಾಣ, ತಂಗುದಾಣದ ತುಂಬಾ ಮಳೆ ನೀರು ತುಂಬಿ ರಚ್ಚೋ ರಚ್ಚೋ, ಹೆಜ್ಜೆ ಇಡಲು ಜಾಗವಿಲ್ಲ. ಬಸ್ ಬಂದರೆ ವಿಧಿ ಇಲ್ಲದೇ ಇದೇ ಕೊಚ್ಚೆಯಲ್ಲಿ ಕಾಲಿಟ್ಟು ಬಸ್ ಹತ್ತಬೇಕು. ಈ ಎಲ್ಲಾ ಸಮಸ್ಯೆ ಇರೋದು ಎಲ್ಲಿ ಅಂತೀರಾ ಡಾ.ಬಿ.ಆರ್ ಅಂಬೇಡ್ಕರ್ (ಟಿ.ಬಿ ಸರ್ಕಲ್)ವೃತ್ತದಲ್ಲಿರುವ  ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ…..

ಯೆಸ್, ಬಿ.ವೃತ್ತದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ  ತಂಗುದಾಣ ಇದ್ದರೂ ಪ್ರಯಾಣಿಕರು ಬಳಸುವಂತೆ ಇಲ್ಲ. ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ, ನಂದಿ ಬೆಟ್ಟ, ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಲು ನೂರಾರು ಪ್ರಯಾಣಿಕರು ಇದೇ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಹೋಗುತ್ತಾರೆ. ಬಂದು ಇಲ್ಲಿ ಇಳಿಯುತ್ತಾರೆ. ಆದರೆ, ಈ ಬಸ್ ಸ್ಟಾಂಡ್ ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸುಸಜ್ಜಿತ ತಂಗುದಾಣವಿಲ್ಲ. ವೃದ್ಧರು, ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಇತರೆ ಪ್ರಯಾಣಿಕರು ಮಳೆ, ಗಾಳಿ, ಬಿಸಿಲನಲ್ಲಿ ನೊಂದು, ಬೆಂದು, ತೋಯ್ದು ಬಸ್ ಹತ್ತಿ ಮನೆಗಳಿಗೆ ತೆರಳುತ್ತಾರೆ.

ಮಳೆ ಬಂದರೆ ಸಾಕು ತಂಗುದಾಣದಲ್ಲಿ ನೀರು ತುಂಬಿಕೊಂಡು ಕೊಚ್ಚೆ ಗುಂಡಿಯಂತಾಗುತ್ತದೆ. ಕುಳಿತುಕೊಳ್ಳಲು, ನಿಂತುಕೊಳ್ಳಲು ಆಗುವುದಿಲ್ಲ. ಆಸನ ವ್ಯವಸ್ಥೆ ಈ ಮೊದಲು ಇತ್ತು, ಆದರೆ, ಕಿಡಿಗೇಡಿಗಳು ಆ ಆಸನದ ಕಲ್ಲುಗಳನ್ನು ಒಡೆದು ಹಾಕಿದ್ದಾರೆ.

ದಿನೇ ದಿನೇ ತನ್ನ ಎಲ್ಲೆ ವಿಸ್ತರಿಸಿಕೊಂಡು ರಾಜ್ಯ ರಾಜಧಾನಿಗೆ ದೊಡ್ಡಬಳ್ಳಾಪುರ ನಗರ ಹತ್ತಿರವಾಗುತ್ತಿದೆ. ಏಷ್ಯಾದ ಎರಡನೇ‌ ಅತಿ‌ ದೊಡ್ಡ ಕೈಗಾರಿಕಾ ಪ್ರದೇಶ, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಂದಾಗಿ ಲಕ್ಷಾಂತರ ಜನರನ್ನು ಈ‌ ನಗರವು ಆಕರ್ಷಿಸುತ್ತಿದೆ.

ದೀಪದ ಬುಡದಲ್ಲಿ ಕತ್ತಲು ಎಂಬಂತೆ ರಾಜಧಾನಿಗೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ಧಿ ಹಾಗೂ ಮೂಲಭೂತ‌ ಸೌಕರ್ಯ ಕೊರತೆಯಿಂದಾಗಿ ಸೊರಗುತ್ತಿದೆ.

ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ, ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ ನಗರ ಭಾಗದಲ್ಲಿ ಎಲ್ಲಿಯೂ ಪ್ರಯಾಣಿಕರಿಗೆ ತಂಗುದಾಣ ಇಲ್ಲದಂತಾಗಿದೆ. ಇದ್ದರೂ ಅದು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

ನಗರದಿಂದ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಿಂದೂಪುರ ಮಾರ್ಗವಾಗಿ ನಿತ್ಯ ನೂರಾರು ರಾಜ್ಯ ಹಾಗೂ ಅಂತಾರಾಜ್ಯ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಅದೇ ರೀತಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚುತ್ತಿದೆ. ಆದರೆ, ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ಬಸ್ಸಿಗಾಗಿ ಕಾದು ಕಾದು ನಿತ್ರಾಣರಾಗುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ನಿಲ್ದಾಣ, ಟಿ.ಬಿ.ವೃತ್ತದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ  ತಂಗುದಾಣ ಇದ್ದರೂ ಪ್ರಯಾಣಿಕರು ಬಳಸುವಂತೆ ಇಲ್ಲ.

ನಗರದಲದಲಿರುವ ತಾಲೂಕು ಕಚೇರಿ, ಆಸ್ಪತ್ರೆ, ಬ್ಯಾಂಕ್, ಕೋರ್ಟ್, ಶಾಲಾ- ಕಾಲೇಜು, ಉಪವಿಭಾಗಾಧಿಕಾರಿ ಕಚೇರಿ, ಕಾರ್ಖಾನೆ ಕೆಲಸಗಳಿಗೆ ಬಂದು ಹೋಗುವ ಪ್ರಯಾಣಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ನರಕಯಾತನೆ ಅನುಭವಿಸಬೇಕಾಗಿದೆ.

ಬಸ್ಸಿಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂಗವಿಕಲರು, ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು‌, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬಿಸಿಲಲ್ಲೇ ನಿಲ್ಲಬೇಕಾಗಿದೆ.

ನಗರದಲ್ಲಿ ತಂಗುದಾಣ ಇಲ್ಲದೇ ಇರುವ ಕಾರಣ ಕೆಲ ಬಸ್ ಗಳು ನಿಲುಗಡೆ ಮಾಡದೇ ಹೋರಟು ಹೋಗುತ್ತವೆ. ಆಗ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ಕುಳಿತ ಪ್ರಯಾಣಿಕರು ಮತ್ತೆ ರಸ್ತೆಯಲ್ಲೇ ಇನ್ನಷ್ಟು ಸಮಯ ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಯಾಣಿಕರು ರಸ್ತೆಯಲ್ಲೇ ಬಸ್ಸಿಗೆ ನಿಲ್ಲುತ್ತಿರುವುದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿವೆ.

ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುವ ಜನಪ್ರತಿನಿಧಿಗಳು, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳಿಗೆ ತಂಗುದಾಣ ನಿರ್ಮಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದಿರುವುದು ದೊಡ್ಡಬಳ್ಳಾಪುರದ ಜನರ ದೌರ್ಭಾಗ್ಯವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸೂಕ್ತ ಹಾಗೂ ಪ್ರಯಾಣಿಕ ಸ್ನೇಹಿ ತಂಗುದಾಣ ನಿರ್ಮಿಸಬೇಕೆಂಬುದು ಜನರ ಒಕ್ಕೊರಲ ಆಗ್ರಹವಾಗಿದೆ.

Ramesh Babu

Journalist

Recent Posts

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

15 hours ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

21 hours ago

80ರ ಹೊಸ್ತಿಲಲ್ಲಿ ಭಾರತ…..

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ…

1 day ago

ಆಹಾರ ಭದ್ರತೆಯಲ್ಲಿ ಯಾವುದೇ ಲೋಪವಾಗದಿರಲಿ- ಆಹಾರ ಆಯೋಗ ಅಧ್ಯಕ್ಷ ಡಾ.ಹೆಚ್ ಕೃಷ್ಣ

ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಮಕ್ಕಳಿಗೆ, ಮಹಿಳೆಯರಿಗೆ ದುರ್ಬಲರಿಗೆ, ಹಿರಿಯರಿಗೆ ಆಹಾರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷ ಕಂಡು…

1 day ago

ನಾಳೆ(ಆ.14) ತೂಬಗೆರೆ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ (ಎಂ.ಪಿ.ಆರ್.ಎ.ಸಿ.ಎಸ್.) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ…

2 days ago

“ನನಗೆ ನೀರು ಬೇಕು, ಮಾತಾಡಲ್ಲ” — ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು…

2 days ago