ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧವೂ ಇಲ್ಲ- ಸಿಎಂ ಸಿದ್ದರಾಮಯ್ಯ

ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧವೂ ಇಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಧರ್ಮ ಎಂದರೆ ಬದುಕಿನ ದಾರಿ. ಜನರಿಗಾಗಿ ಧರ್ಮವಿರುವುದು, ಧರ್ಮಕ್ಕಾಗಿ ಜನ ಅಲ್ಲ. ಧರ್ಮ ಮನುಷ್ಯನ ಒಳಿತಿಗಾಗಿ ಇದೆ. ದಯೆಯೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂದು ಬಸವಾದಿ ಶರಣರು ಹೇಳಿದ್ದಾರೆ. ಧರ್ಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ನೀಲನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿದ್ದು, ನಕ್ಷೆ ಸಿದ್ದಗೊಳ್ಳುತ್ತಿದೆ. ಖಾಲಿ ಇರುವ  ಶಿಕ್ಷಕರ ಹುದ್ದೆಗಳನ್ನು ತುಂಬುವಂತೆ ಸೂಚಿಸಲಾಗಿದೆ. ಶಿಕ್ಷಣಕ್ಕೆ ಒತ್ತು ನೀಡಬೇಕು. ಕೆ.ಕೆ ಆರ್.ಡಿ.ಬಿ ವ್ಯಾಪ್ತಿಯ ಯಾವ ಹುದ್ದೆಯೂ ಖಾಲಿ ಇರಬಾರದು. ಈಗಾಗಲೇ 2,618 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಇನ್ನೂ ಹುದ್ದೆಗಳು ಖಾಲಿ ಇದ್ದರೆ ನೇಮಕಾತಿ ಮಾಡಲಾಗುವುದು ಎಂದರು.

ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಬೇಕೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ತಿಂಗಳಾಗಿದೆ. ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಲು ಪತ್ರ ಬರೆದಿದ್ದು, ಈವರೆಗೆ ಒಂದು ತಿಂಗಳಾದರೂ ಪ್ರಧಾನ ಮಂತ್ರಿಗಳು ಸಮಯ ಕೊಟ್ಟಿಲ್ಲ. ಪುನಃ ಪತ್ರ ಬರೆಯುತ್ತಿದ್ದೇನೆ. ಜಂಟಿ ಸಮೀಕ್ಷೆ ಯ ನಂತರ ಎಷ್ಟು ಪರಿಹಾರ ನೀಡಬೇಕೆಂದು ತಿಳಿಯಲಿದೆ ಎಂದು ತಿಳಿಸಿದರು.

ಬೆಳೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದು ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ತೊಂದರೆ ಇಲ್ಲ. ಮುಂದೆ ತೊಂದರೆಯಾಗಬಹುದು ಎಂದು ತುರ್ತು ಯೋಜನೆ ತಯಾರು ಮಾಡಿದ್ದು, 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜಂಟಿ ಸಮೀಕ್ಷೆ ಗಳನ್ನು ನಡೆಸಿದಾಗ 161 ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. 34 ತಾಲ್ಲೂಕುಗಳಲ್ಲಿ ಸಾಧಾರಣ ಬರಗಾಲ. ಒಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬೆಳೆ ಪರಿಹಾರ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ, ಜನ ಗುಳೆ ಹೋಗುವುದನ್ನು ತಡೆಯುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇಂಜಿನಿಯರಿಂಗ್ ವಿಭಾಗ ಆಗಬೇಕೆಂಬ ಬೇಡಿಕೆಯಿದ್ದು, ಇದನ್ನು ಪರಿಗಣಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಮುಂಬಡ್ತಿ, ನೇಮಕಾತಿಗೆ ಸಂಬಂಧಿಸಿದಂತೆ 371 (ಜೆ)  ಕೋಶ ಬೆಂಗಳೂರಿನಲ್ಲಿದೆ. ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕೆಂದು ಹಿಂದಿನ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು ಆದರೆ ಪಾಲಿಸಲಿಲ್ಲ. ಆದರೆ ಅದನ್ನು ಜಾರಿ ಮಾಡಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.

ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಪಾವತಿಯಾಗುತ್ತಿರುವ ಬಗ್ಗೆ ಪರಿಶೀಲಿಸುತ್ತೇನೆ. ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ತೆಲಂಗಾಣ, ರಾಜಸ್ಥಾನ ರಾಜ್ಯಗಳಲ್ಲಿಯೂ  ಗೃಹಲಕ್ಷ್ಮೀ ಯೋಜನೆಯಂಥ ಯೋಜನೆಗಳು ಘೋಷಣೆಯಾಗುತ್ತಿವೆ. ಜಾಗತಿಕ ಮೂಲ ಆದಾಯ ಎಂಬ ಪರಿಕಲ್ಪನೆಯನ್ನು ನಾವು ಅಳವಡಿಸಿಕೊಂಡು ಜನರಿಗೆ ದುಡ್ಡು ಕೊಡುತ್ತಿದ್ದೇವೆ.  ಖರೀದಿಸುವ ಸಾಮರ್ಥ್ಯ ಹೆಚ್ಚಾದರೆ ಆರ್ಥಿಕ ಚಟುವಟಿಕೆಗಳು ಮತ್ತು ತಲಾದಾಯ ಹೆಚ್ಚಳವಾಗಿ, ಜಿಡಿಪಿ ಹೆಚ್ಚಾಗಲಿದೆ. ಇದರಿಂದ ರಾಜ್ಯ ಅಭಿವೃದ್ಧಿಯಾಗಲಿದೆ ಎಂದರು.

ಕೆ.ಕೆ.ಆರ್.ಡಿ.ಬಿ ಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ಜಾರಿಯಲ್ಲಿದೆ, ಅಭಿವೃದ್ಧಿ ಆಯುಕ್ತರ ವರದಿ ಬರಬೇಕಿದೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ 26,000 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಶಿಕ್ಷಕರು, ವೈದ್ಯರು, ಸುಮಾರು 40 ಸಾವಿರ ಜನರಿದ್ದಾರೆ. ನಮ್ಮ ಅವಧಿಯಲ್ಲಿಯೇ 70 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹೊಸದಾಗಿ 8 ವಿಶ್ವವಿದ್ಯಾಲಯ ಪ್ರಾರಂಭ ಮಾಡುವುದು ಜನಪರ ನಿರ್ಣಯವಲ್ಲ, ಮೊದಲು ಇರುವ ವಿವಿಗಳಿಗೆ ಸೂಕ್ತ ಮೂಲಸೌಕರ್ಯ ನೀಡಬೇಕು ಎಂದು ತಿಳಿಸಿದರು.

ಕಾವೇರಿ ನೀರು ವಿಚಾರವಾಗಿ ಯಡಿಯೂರಪ್ಪನವರ ಹೇಳಿಕೆ ರಾಜಕೀಯ ಪ್ರೇರಿತ ಅಷ್ಟೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದು, ನ್ಯಾಯಾಲಯ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ನೀರು ಬಿಡಬೇಕೆಂದಿದ್ದರೂ ನಮಗೆ 106 ಟಿ. ಎಂ. ಸಿ ನೀರಿನ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ. ಕುಡಿಯುವ ನೀರಿಗೆ 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಗತ್ಯ. ಒಟ್ಟು 106 ಟಿಎಂಸಿ ನಮಗೆ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ ನೀರು. ನೀರು ಕೊಡಲು ನಮ್ಮ ಬಳಿ ನೀರಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಯಡಿಯೂರಪ್ಪ ಅವರ ಕಾಲದಲ್ಲಿ ಹಾಗೂ ಎಲ್ಲರ ಕಾಲದಲ್ಲಿ ಬಿಡಲಾಗಿದೆ ಎಂದರು.

ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಬಿಡಲಾಗುತ್ತದೆ. ಈವರೆಗೆ 37.7  ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವು ಬಿಡಬೇಕಿದ್ದುದ್ದು 99 ಟಿಎಂಸಿ ನೀರು. ಎಲ್ಲಿ ಹೆಚ್ಚು ನೀರು ಬಿಟ್ಟಿದ್ದೇವೆ? ಕಾವೇರಿ ನೀರು ನಿಯಂತ್ರಣ ಸಮಿತಿ 5000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಸೂಚಿಸಿದೆ. ಅಷ್ಟು ನೀರು ಇಲ್ಲದಿರುವುದರಿಂದ ನಾವು ನೀರು ಬಿಟ್ಟಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ಇನ್ನೂ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿಯೇ ಇದೆ ಎಂದಿದ್ದಾರೆ, 5 ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ? ಯಾವ ಸರ್ಕಾರ 1.13 ಕೋಟಿ ಜನರಿಗೆ 2000 ರೂ.ಗಳನ್ನು ನೀಡಿದೆ? ಯಡಿಯೂರಪ್ಪ ಅವರು 10 ಕೆ.ಜಿ ಯಲ್ಲಿ ಒಂದು ಕಾಳು ಕಡಿಮೆಯಾದರೂ ಪ್ರತಿಭಟಿಸುವುದಾಗಿ ಹೇಳಿದ್ದರು, ಮಾಡಿದರೇ ? ಅವರ ಕಾಲದಲ್ಲಿ 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 5  ಕೆಜಿಗೆ ಇಳಿಸಿದರು. ಅಲ್ಲೇ ಗಿರಕಿ ಹೊಡೆಯುತ್ತಿದ್ದಾರೆ.

ಐದು ಗ್ಯಾರಂಟಿ ಕೊಟ್ಟಿದ್ದೇವೆಂದು ಪಾದಯಾತ್ರೆ ಮಾಡುತ್ತಿದ್ದಾರೆಯೇ? 600 ಭಾರವಸೆ ನೀಡಿ ಶೇ 10 ರಷ್ಟನ್ನೂ ಜಾರಿಗೆ ತರಲಿಲ್ಲ. ಅವರಿಗೆ ಯಾವ ನೈತಿಕ ಹಕ್ಕಿದೆ? ಸಾಲಮನ್ನಾ ಮಾಡ್ತೀವಿ ಅಂದರು ಮಾಡಲಿಲ್ಲ. ನೀರಾವರಿಗೆ 1 ಲಕ್ಷ ಕೋಟಿ ನೀಡುವುದಾಗಿ ಹೇಳಿದರು, ನೀಡಲಿಲ್ಲ.

ಮೂವರು ಡಿಸಿಎಂ ಮಾಡುವ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈಗ ಒಬ್ಬರನ್ನು ಮಾಡಿದ್ದಾರೆ. ವರಿಷ್ಠರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ, ಮಾತನಾಡಲಿ. ಹೈ ಕಮಾಂಡ್ ನಿರ್ಧಾರವನ್ನು ನಾವು ಪಾಲಿಸುತ್ತೇವೆ.

ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ  ನ್ಯಾಯಾಲಯದಲ್ಲಿದ್ದು, ಆಂಧ್ರ, ತೆಲಂಗಾಣದವರು ಅರ್ಜಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯೇ ಹೊರಡಿಸಿಲ್ಲ. ಮಹದಾಯಿ ಯೋಜನೆಯಲ್ಲಿ ಗೆಜೆಟ್ ಅಧಿಸೂಚನೆ ಆಗಿದೆ. ಆದರೆ ಅರಣ್ಯ ಹಾಗೂ ಪರಿಸರ ತೀರುವಳಿ ನೀಡಿಲ್ಲ. ನಾಳೆ ಕೊಟ್ಟರೆ, ನಾಡಿದ್ದೇ ಕೆಲಸ ಶುರು ಮಾಡುತ್ತೇವೆ. ಅದಕ್ಕಾಗಿಯೇ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗ ತೆರಳಲು ದಿನಾಂಕ ನಿಗದಿಯಾಗುತ್ತಿಲ್ಲ. ಬಿಜೆಪಿಯವರೇ 25 ಸಂಸದರಿದ್ದಾರೆ, ಪ್ರಧಾನಿ ಭೇಟಿಗೆ ಅವಕಾಶ ಕೊಡಿಸಲಿ ಎಂದರು.

Leave a Reply

Your email address will not be published. Required fields are marked *

error: Content is protected !!