ಆಲ್ ರೌಂಡರ್ ಆಟವಾಡಿದ ನಾಯಕ ಶನಕಾ : ಸರಣಿ ಸಮಬಲ ಸಾಧಿಸಿದ ಲಂಕಾ

ಭಾರತೀಯ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನದ ಲಾಭ ಪಡೆದು ಕೊನೆಯ ನಾಲ್ಕು ಓವರ್ ಗಳಲ್ಲಿ 68 ರನ್ ಗಳಿಸುವ ಮೂಲಕ ಭಾರತ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ 206 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದ ಶ್ರೀಲಂಕಾ 16 ರನ್ ಗಳ ಅಧಿಕಾರಯುತ ಗೆಲುವು ಸಾಧಿಸಿತು.

ಟಾಸ್ ಗೆದ್ದು ಬೌಲಿಂಗ್ ಪ್ರಾರಂಭಿಸಿದ ಟೀಂ ಇಂಡಿಯಾದ ಯೋಜನೆ ಫಲ ನೀಡಲಿಲ್ಲ, ಶ್ರೀಲಂಕಾದ ಆರಂಭಿಕ ಜೋಡಿ ಕುಶಾಲ್ ಮೆಂಡಿಸ್ (52) ಹಾಗೂ ನಿಸಾಂಕ (33) ರನ್ ನಿಂದಾಗಿ ಮೊದಲ ವಿಕೆಟ್ ಗೆ 80 ರನ್ ಪೇರಿಸುವ ಮೂಲಕ ಬೌಲಿಂಗ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು.

ಮೊದಲ ವಿಕೆಟ್ ಕಳೆದುಕೊಂಡ ನಂತರ ಲಂಕಾದ ಬ್ಯಾಟ್ಸ್‌ಮನ್ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು ನಂತರ ತಂಡಕ್ಕೆ 58 ರನ್ ಸೇರಿಸುವ ಭರದಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.

ಈ ಸಂದರ್ಭದಲ್ಲಿ ಜೊತೆಯಾದ ನಾಯಕ ದಸುನ್ ಶನಕಾ ಅಜೇಯ(56) ಹಾಗೂ ಕರುಣಾರತ್ನೆ (11) ಜೊತೆಯಾಟದ ಬಲದಿಂದ ಕೊನೆಯ ನಾಲ್ಕು ಓವರ್ ಗಳಲ್ಲಿ 68 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆ ಹಾಕಿದರು.

ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತೀಯ ಬೌಲಿಂಗ್ ವಿಭಾಗ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿತು, ಐದು ನೋಬಾಲ್ ಎಸೆಯುವ ಮೂಲಕ ಎಡಗೈ ವೇಗಿ ಅಶ೯ದೀಪ್ ಸಿಂಗ್ ದುಬಾರಿಯಾದರು.

ರನ್ ಬೆನ್ನತ್ತಿದ ಭಾರತ ತಂಡ ಆರಂಭಿಕ ಆಟಗಾರರು ಬೇಗನೆ ಪೆವಿಲಿಯನ್ ಸೇರಿದರು, ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಆಲ್ ರೌಂಡರ್ ದೀಪಕ್ ಹೂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು, ತಂಡದ ಮೊತ್ತ 57 ರನ್ ಗಳಿಸಿದ್ದ ಸಂದರ್ಭದಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಸಂಕಷ್ಟ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್ ಯಾದವ್ (51) ಹಾಗೂ ಆಲ್ ರೌಂಡರ್ ಅಕ್ಷರ್ ಪಟೇಲ್(65) ರನ್ ಪೇರಿಸುವ ಮೂಲಕ ಒಂದು ಹಂತದಲ್ಲಿ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದ್ದರು, ಆದರೆ ಮಧುಶಂಕ ಎಸೆದ ಚೆಂಡನ್ನು ಅರಿಯುವಲ್ಲಿ ವಿಫಲವಾದ ಸೂರ್ಯಕುಮಾರ್ ಯಾದವ್ ಹಸರಂಗಗೆ ಕ್ಯಾಚ್ ನೀಡಿದರು.

ಭರ್ಜರಿ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ ಮೂರು ಬೌಂಡರಿ ಹಾಗೂ ಆರು ಸಿಕ್ಸರ್ ಸಿಡಿಸುವ ಮೂಲಕ (65) ರನ್ ಗಳಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದರು, ಬ್ಯಾಟಿಂಗ್ ನಲ್ಲಿ ಮಿಂಚಿದ ಬೌಲರ್ ಶಿವಂ ಮಾವಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ (26) ರನ್ ಗಳಿಸಿ ಗಮನ ಸೆಳೆದರು.

Leave a Reply

Your email address will not be published. Required fields are marked *