
ಆಂಧ್ರಪ್ರದೇಶದ ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ONGC)ದ ತೈಲ ಬಾವಿಯಲ್ಲಿ ಇಂದು ಅನಿಲ ಪೈಪ್ಲೈನ್ ಸೋರಿಕೆಯಾಗಿ, ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಇದುವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಸದ್ಯ ಈ ಪ್ರದೇಶದಲ್ಲಿ ವ್ಯಾಪಕ ಭೀತಿ ಆವರಿಸಿದೆ.
ಮಲಿಕಿಪುರಂ ಮಂಡಲದ ಇರುಸುಮಂಡ ಗ್ರಾಮದಲ್ಲಿರುವ ತೈಲ ಬಾವಿಯಲ್ಲಿ ದುರಸ್ತಿ ಕಾರ್ಯದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ಡೀಪ್ ಇಂಡಸ್ಟ್ರೀಸ್ ಕಂಪನಿಯ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ, ಪ್ರಬಲವಾದ ಬ್ಲೋಔಟ್ ಕಚ್ಚಾ ತೈಲದೊಂದಿಗೆ ಮಿಶ್ರಿತ ಅನಿಲ ಬಿಡುಗಡೆಯಾಗಿದೆ. ನಂತರ ಅನಿಲವು ಬಿಳಿ ಮಂಜಿನಂತೆ ಹರಡಿತು. ಆರಂಭದಲ್ಲಿ, ಅವರು ಬಿಳಿ, ಮಂಜಿನಂತಹ ಅನಿಲವನ್ನು ಮಂಜು ಎಂದು ತಪ್ಪಾಗಿ ಭಾವಿಸಿದರು.
ಆದರೆ, ಸೋರಿಕೆಯಾದ ಅನಿಲಕ್ಕೆ ಶೀಘ್ರದಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮಿದ್ದು, ಕೃಷಿ ಭೂಮಿಗಳು ಸುಟ್ಟು ಹೋಗಿವೆ.. ದಟ್ಟವಾದ ಹೊಗೆ ಗ್ರಾಮದ ಕೆಲವು ಭಾಗಗಳನ್ನು ಆವರಿಸಿತು. ಇದು ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತು.

ಜಿಲ್ಲಾಧಿಕಾರಿ ಮಹೇಶ್ ಕುಮಾರ್ ರವಿರಾಲ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಮೀನಾ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಜಿಲ್ಲಾಧಿಕಾರಿ ಸೂಚನೆ ಅನುಸರಿಸಿ, ಕಂದಾಯ ಅಧಿಕಾರಿಗಳು ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶಿಸಿದ್ದಾರೆ ಮತ್ತು ವಿದ್ಯುತ್, ಗ್ಯಾಸ್ ಸ್ಟೌ ಹಾಗೂ ಒಲೆಯನ್ನು ಹೊತ್ತಿಸಬೇಡಿ ಎಂದು ಸೂಚಿಸಲಾಗಿದೆ.
ಒಎನ್ಜಿಸಿ ಅಧಿಕಾರಿಗಳು ಸಹ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಘಟನೆಗೆ ಕಾರಣವನ್ನು ತಿಳಿಯಲು ಸ್ಥಳಕ್ಕೆ ಆಗಮಿಸಿದ್ದಾರೆ.