ಆಂಟಿಯನ್ನು ತಾನೇ ಕೊಲೆ ಮಾಡಿ ಶವದ ಮುಂದೆ ಕಣ್ಣೀರು ಹಾಕಿ ಪ್ರಿಯಕರ ಹೈ ಡ್ರಾಮಾ:‌ ಮಹಿಳೆಯನ್ನು ಕೊಂದು ಪೊಲೀಸರಿಗೆ ತಾನೇ ಮಾಹಿತಿ ನೀಡಿದ್ದಾತನ ಅರೆಸ್ಟ್

ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನೇ ಮಹಿಳೆಯನ್ನು ಕೊಂದ ಘಟನೆ ಜನವರಿ 14ರ ರಾತ್ರಿ ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಹಿರೆಪಡಸಲಗಿ ಗ್ರಾಮದಲ್ಲಿ ನಡೆದಿದೆ.

ತೋಟದ ಮನೆಯಲ್ಲಿ ಒಂಟಿ ಮಹಿಳೆಯೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾನೇ ಕೊಲೆ ಮಾಡಿದ್ದರೂ ಶವದ ಮುಂದೆ ಕಣ್ಣೀರು ಹಾಕಿ ಪ್ರಿಯಕರ ಹೈ ಡ್ರಾಮಾ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆತ ಸತ್ಯ ಬಿಚ್ಚಿಟ್ಟಿದ್ದಾನೆ.

ಕೊಲೆಯಾದ ಮಹಿಳೆಯನ್ನು ಯಮನವ್ವ (40)ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಶ್ರೀಶೈಲ ಪಾಟೀಲ್ (67) ಎಂದು ಪೊಲೀಸರು ತಿಳಿಸಿದ್ದಾರೆ.

ಯಮನವ್ವ ಸುಮಾರು 20 ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದು, ಬಳಿಕ ಶ್ರೀಶೈಲ ಪಾಟೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

ಹೀಗಿರುವಾಗ ಇತ್ತೀಚೆಗೆ ಯಮನವ್ವ 27 ವರ್ಷದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂಬ ವಿಚಾರದಿಂದ ಶ್ರೀಶೈಲ ಆಕ್ರೋಶಗೊಂಡಿದ್ದನು. ಇದೇ ವಿಷಯಕ್ಕೆ ರಾತ್ರಿ ಇಬ್ಬರ ನಡುವೆ ಆರಂಭವಾಗಿದ್ದ ಜಗಳ ತೀವ್ರ ಸ್ವರೂಪ ಪಡೆದಿತ್ತು.

ಜಗಳದ ವೇಳೆ ಶ್ರೀಶೈಲ ಪಾಟಿಲ್ ಯಮನವ್ವಳ ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದ. ಅಷ್ಟಕ್ಕೆ ಸುಮ್ಮನಾಗದ ಪ್ರಿಯಕರ, ಕತ್ತು ಹಿಸುಕಿ ಕೊಲೆಯೂ ಮಾಡಿದ್ದ. ಮಹಿಳೆಯ ಉಸಿರು ನಿಂತ ಮೇಲೆ ಭಯಕ್ಕೆ ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಮರುದಿನ ಬೆಳಿಗ್ಗೆ ಆತನೇ ಮನೆಯ ಬಾಗಿಲು ತೆರೆದು ಯಮನವ್ವ ಸಾವನ್ನಪ್ಪಿದ್ದಾಳೆ ಎಂದು ಇತರರಿಗೆ ಸುದ್ದಿ ತಿಳಿಸಿದ್ದ. ಆಕೆಗೆ ಹೃದಯಾಘಾತವಾಗಿದೆ ಎಂಬಂತೆ ನಾಟಕವಾಡಿ ಕಣ್ಣೀರು ಹಾಕಿದ್ದ ಆರೋಪಿ, ಬಳಿಕ ಸಾವಳಗಿ ಪೊಲೀಸರಿಗೂ ತಾನೇ ಮಾಹಿತಿ ನೀಡಿದ್ದ. ಆದರೆ ವಿಚಾರಣೆಯ ವೇಳೆ ಆರೋಪಿಯ ಮೊಸಳೆ ಕಣ್ಣೀರು ಬಯಲಾಗಿದ್ದು, ಸತ್ಯ ಒಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!